SSLC ಯಲ್ಲಿ ಅನುತ್ತೀರ್ಣ: 3 ವಿದ್ಯಾರ್ಥಿನಿಯರು ಆತ್ಮಹತ್ಯೆ
SSLC ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಂಗಳೂರಿನ ಕಾವೇರಿ ನಗರದ ಸಂಧ್ಯಾ(16), ಹಾವೇರಿ ನಗರದ ದ್ಯಾಮವ್ವದೇವಿ ಗುಡಿ ಓಣಿಯ ವೈಷ್ಣವಿ ರಿತ್ತಿ (16), ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದ ಭಾರತಿ ಗದಿಗೆಪ್ಪ ಕೋಟಿ (16) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಆ.11): ಸೋಮವಾರ ಪ್ರಕಟಗೊಂಡಿರುವ ಎಸ್ಸೆಲ್ಸ್ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡ, ನಿರೀಕ್ಷಿತ ಫಲಿತಾಂಶ ಬಾರದ ಕಾರಣಗಳಿಗೆ ರಾಜ್ಯದಲ್ಲಿ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನ ಕಾವೇರಿ ನಗರದ ಸಂಧ್ಯಾ(16), ಹಾವೇರಿ ನಗರದ ದ್ಯಾಮವ್ವದೇವಿ ಗುಡಿ ಓಣಿಯ ವೈಷ್ಣವಿ ರಿತ್ತಿ (16), ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದ ಭಾರತಿ ಗದಿಗೆಪ್ಪ ಕೋಟಿ (16) ಆತ್ಮಹತ್ಯೆಗೆ ಶರಣಾದವರು.
ಮಹದೇವಪುರ ಸಮೀಪ ಕಾವೇರಿ ನಗರದ ನಿವಾಸಿ ಶಂಕರ್ ದಂಪತಿ ಪುತ್ರಿಯಾದ ಸಂಧ್ಯಾ ಸ್ಥಳೀಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಎರಡು ವಿಷಯಗಳಲ್ಲಿ ಅನುತ್ತೀರ್ಣವಾಗಿರುವುದು ತಿಳಿದು ಬೇಸರಗೊಂಡ ಆಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
SSLC ಪರೀಕ್ಷೆಯ ಸಾಧಕರಿವರು; ಆಟೋ ಚಾಲಕನ ಮಗಳಿಗೆ 612 ಅಂಕ
ಹಾವೇರಿ ನಗರದ ದ್ಯಾಮವ್ವದೇವಿ ಗುಡಿ ಓಣಿಯ ವೈಷ್ಣವಿ ರಿತ್ತಿಗೆ ಗಣಿತದಲ್ಲಿ 18 ಅಂಕ ಬಿದ್ದಿತ್ತು. ಇದರಿಂದ ಮನನೊಂದು ನೇಣು ಹಾಕಿಕೊಂಡಿದ್ದಾಳೆ. ತಕ್ಷಣ ವಿಷಯ ಗೊತ್ತಾಗಿ ಮನೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಇದೇ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದ ಭಾರತಿ ಗದಿಗೆಪ್ಪ ಕೋಟಿ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇವಳಿಗೆ ಪ್ರತಿಶತ 64ರಷ್ಟುಅಂಕ ಬಂದಿದ್ದು, ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆಯಲ್ಲಿದ್ದಳು ಎನ್ನಲಾಗಿದೆ.