ಸರ್ಕಾರಿ ಕೆಲಸದ ಆಮಿಷ: ವಂಚಿಸಿದ ಹಣದಲ್ಲಿ ಚಿನ್ನಾಭರಣ ಖರೀದಿಸಿ ಎಸ್ಡಿಎ ದರ್ಬಾರ್..!
* ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಕೃತ್ಯ
* 50ಕ್ಕೂ ಹೆಚ್ಚು ಜನರಿಗೆ 60 ಲಕ್ಷ ವಂಚನೆ
* ಅಭಿಯೋಜಕ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಸೇರಿ ಇಬ್ಬರು ಸರ್ಕಾರಿ ನೌಕರರ ಸೆರೆ
ಬೆಂಗಳೂರು(ಸೆ.30): ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಜನರಿಗೆ ವಂಚನೆ ಪ್ರಕರಣ ಸಂಬಂಧ ಅಭಿಯೋಜಕ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ(SDA) ಸೇರಿದಂತೆ ಇಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಭಿಯೋಜಕ ಇಲಾಖೆ ಸಹಾಯಕ ದರ್ಜೆ ಸಹಾಯಕಿ ಶ್ರೀಲೇಖ ಹಾಗೂ ವಿಧಾನಸೌಧ ಗ್ರೂಪ್ ಡಿ ನೌಕರ ಮೋಹನ್ ಅಲಿಯಾಸ್ ಸಂಪತ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಸೇರಿದಂತೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದೇ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕುಮಾರಸ್ವಾಮಿ ಲೇಔಟ್ನ ಜಿ.ಮಂಜುನಾಥ್ ಅವರಿಂದ ಹಣ ಪಡೆದು ಆರೋಪಿಗಳು ವಂಚಿಸಿದ್ದರು.(Fraud) ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂಗಾವತಿ: ಅಮಾಯಕ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ರಾ ಶಾಸಕರ ಪತ್ನಿ?
ವಂಚಿಸಿದ ದುಡ್ಡಲ್ಲಿ ಚಿನ್ನ ಖರೀದಿ:
ಅಭಿಯೋಜಕ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಶ್ರೀಲೇಖ, ಐಷರಾಮಿ ಜೀವನದಾಸೆಗೆ ಬಿದ್ದು ಅಡ್ಡದಾರಿ ತುಳಿದಿದ್ದಳು. ಹಣದಾಸೆ ತೋರಿಸಿ ಡಿ ಗ್ರೂಪ್ನೌಕರ ಮೋಹನ್ನನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಳು. ತನಗೆ ರಾಜ್ಯ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಪರಿಚಯಸ್ಥರಿದ್ದಾರೆ. ಅವರ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಜನರಿಗೆ ಹೇಳಿ ಶ್ರೀಲೇಖ ಹಣ ಪಡೆದು ವಂಚಿಸಿದ್ದರು. ಆಕೆ ಇದುವರೆಗೆ ಸುಮಾರು .60 ಲಕ್ಷ ವಂಚಿಸಿರುವುದಕ್ಕೆ ಪುರಾವೆ ಸಿಕ್ಕಿದೆ. ಹೀಗೆ ಸಂಪಾದಿಸಿದ ಹಣದಲ್ಲಿ ಏಳೆಂಟು ಲಕ್ಷ ಸಾಲ ತೀರಿಸಿದ್ದ ಆಕೆ, ಇನ್ನುಳಿದ ಹಣದಲ್ಲಿ ಚಿನ್ನ ಹಾಗೂ ಹೊಸ ಸ್ಕೂಟರ್ ಖರೀದಿಸಿ ಮೋಜು ಮಸ್ತಿ ಮಾಡಿದ್ದಳು ಎಂದು ಪೊಲೀಸರು(Police) ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಶ್ರೀಲೇಖಳಿಗೆ ಮಂಜುನಾಥ್ ಅವರನ್ನು ಕೆಪಿಸಿಸಿ(KPCC) ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್ಪರಿಚಯ ಮಾಡಿಸಿದ್ದರು. ಬಳಿಕ ಗೃಹ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಆಕೆ, ಮಂಜುನಾಥ್ ಅವರಿಂದ .15 ಲಕ್ಷ ವಸೂಲಿ ಮಾಡಿ ವಂಚಿಸಿದ್ದಳು. ಇದಾದ ನಂತರ ಮಂಜುನಾಥ್ಮೂಲಕ ಸುಮಾರು 50ಕ್ಕೂ ಹೆಚ್ಚು ಜನರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಶ್ರೀಲೇಖ ವಂಚಿಸಿದ್ದಳು ಎಂದು ಮೂಲಗಳು ಹೇಳಿವೆ.