*  ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಪ್ರಕಾ​ಶ​ಬಾಬು*  ಹಲವಾರು ಅಕ್ರಮ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ನೌಕರ*  ಹಲವು ಅನುಮಾನ ಹುಟ್ಟುಹಾಕಿದ ಆತ್ಮಹತ್ಯೆ  

ರಾಯಚೂರು(ಸೆ.01): ನಾಪತ್ತೆಯಾಗಿದ್ದ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶಬಾಬು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಆ.23 ರಂದು ಪ್ರಕಾಶಬಾಬು ಕಚೇರಿಯಿಂದ ನಾಪತ್ತೆಯಾಗಿದ್ದರು. ಇದರಿಂದಾಗಿ ಆತಂಕಗೊಂಡಿದ್ದ ಮನೆಯವರು ನಗರದ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಹಾಯಕ ಆಯುಕ್ತರ ಕಚೇರಿಯಲ್ಲಿ ಲೆಕ್ಕ ಪರಿಶೋಧನೆ ಹಿನ್ನೆಲೆಯಲ್ಲಿ ಪ್ರಕಾಶ ಬಾಬು ತಲೆಮರಿಸಿಕೊಂಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಕಾಣೆಯಾಗುವ ಮುನ್ನ ಪ್ರಕಾಶಬಾಬು ಎಸಿ ಕಚೇರಿಯ ಟೇಬಲ್‌ ಮೇಲೆ ವಾಹದ ಕೀಲಿ ಹಾಗೂ ಒಂದು ಪತ್ರವನ್ನು ಸಹ ಬರೆದಿಟ್ಟು ಹೋಗಿದ್ದರು. ಅದರಲ್ಲಿ ವಕೀಲರೊಬ್ಬರ ಹೆಸರನ್ನು ಅವರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ರಾಯಚೂರಲ್ಲಿ ಮತ್ತೊಬ್ಬ ಸರ್ಕಾರಿ ಸಿಬ್ಬಂದಿ ನಾಪತ್ತೆ

ಸಿಬ್ಬಂದಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇಲಾಖೆಯಿಂದ ಎರಡು ತಂಡಗಳನ್ನು ರಚಿಸಿ ನಾಪತ್ತೆಯಾಗಿದ್ದ ಪ್ರಕಾಶಬಾಬು ಪತ್ತೆಕಾರ್ಯವನ್ನು ನಡೆಸಿತ್ತು. ಮೂರ್ನಾಲ್ಕು ದಿನಗಳ ಹಿಂದೆ ಗೋವಾದಲ್ಲಿ ಪ್ರಕಾಶಬಾಬು ಜಾಡನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇಷ್ಟರಲ್ಲಿಯೇ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ವ್ಯಾಪ್ತಿಗೆ ಬರುವ ಖಾಸಗಿ ಹೋಟೆಲ್‌ನಲ್ಲಿ ಪ್ರಕಾಶ ಬಾಬು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹಾಯಕ ಕಚೇರಿಯಲ್ಲಿ ಹಲವು ವರ್ಷಗಳಿಂದ ಎಫ್‌ಡಿಎಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶಬಾಬು ಹಲವಾರು ಅಕ್ರಮ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಲೆಕ್ಕಪರಿಶೋಧನಾ ಸಮಿತಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಕಣ್ಮರಿಸಿಕೊಂಡಿದ್ದಾರೆ ಎನ್ನುವ ಚರ್ಚೆಗಳು ಸಾಗಿದ್ದ ಸಮಯದಲ್ಲಿಯೇ ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.