ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದ ಘಟನೆ 

ಮಂಡ್ಯ(ಅ.30): ಪುನೀತ್‌ ರಾಜಕುಮಾರ್‌ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಕಿರಣ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದಾನೆ. 

Add Asianetnews Kannada as a Preferred SourcegooglePreferred

ಈ ಬಗ್ಗೆ ಮಾತನಾಡಿದ ಮೃತ ಕಿರಣ್ ಮಾವ ರವಿಚಂದ್ರ ಅವರು, ನನ್ನ ಸೋದರಳಿಯ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದ, ಕಿರಣ್ ಪುನೀತ್ ಅವರ ಪ್ರತಿ ಸಿನಿಮಾ ಶೂಟಿಂಗ್ ಅಟೆಂಡ್ ಮಾಡುತ್ತಿದ್ದ. ನಿನ್ನೆ ಪುನೀತ್‌ ಪುಣ್ಯ ಸ್ಮರಣೆ ಪ್ರಯುಕ್ತ ಸ್ನೇಹಿತರ ಜೊತೆ ಸೇರಿ ಅನ್ನ ಸಂತರ್ಪಣೆ ಮಾಡಿದ್ದನು. ಎಲ್ಲರ ಜೊತೆ ಸೇರಿ ಗಂಧದಗುಡಿ ಸಿನಿಮಾ ನೋಡಿಕೊಂಡು ಬಂದಿದ್ದ. ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೆ ಆಗಿಲ್ಲ. ಹಾಗಾಗಿ ಈ ರೀತಿ ಮಾಡಿಕೊಂಡಿರಬಹುದು ಅಂತ ತಿಳಿಸಿದ್ದಾರೆ. 

ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ, ಬಾಡೂಟ ಸೇವೆ

ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈಗ ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳುವವರು ಯಾರು?. ಅಭಿಮಾನವೇ ಬೇರೆ, ಮೊದಲು ತಂದೆ ತಾಯಿಗಳನ್ನು ನೋಡಿ. ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆ ಸೇರಿದ್ದಾಗ ಅಪ್ಪು ಯಾವ ರೀತಿ ನೋಡಿಕೊಂಡ್ರು. ವೈದ್ಯರು ಎಲ್ಲ ಸರಿ ಇದೆ ಅಂದ್ರೂ 15 ದಿನ ವೆಂಟಿಲೇಟರ್‌ನಲ್ಲಿ ಇರಲಿ ಅಂದಿದ್ರು. ಫ್ಯಾನ್ಸ್‌ಗೆ ಕಿಂಚಿತ್ತು ನೋವಾಗದಂತೆ ಅಪ್ಪು ನಡೆದುಕೊಳ್ಳುತ್ತಿದ್ದರು. ಇಂತಹ ಸಾವು ನಮ್ಮ ಮನೆಗೆ ಕೊನೆಯಾಗಲಿ. ಅಭಿಮಾನದಿಂದ ಯಾರೂ ಈ ರೀತಿ ಮಾಡಿಕೊಳ್ಳಬೇಡಿ. ಆ ಮೂಲಕ ತಂದೆ ತಾಯಿಗೆ ನೋವು ಕೊಡಬೇಡಿ ಅಂತ ಅಪ್ಪು ಅಭಿಮಾನಿ ಮೃತ ಕಿರಣ್ ಮಾವ ರವಿಚಂದ್ರ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಸದ್ಯ ಕಿರಣ್‌ ಮೃತದೇಹವನ್ನ ಮೈಸೂರು ಕೆಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.