Asianet Suvarna News Asianet Suvarna News

ಪ್ರವೀಣ್‌ ಹತ್ಯೆಯಲ್ಲಿ ಕೇರಳ ಮತಾಂಧ ಸಂಘಟನೆಗಳ ನಂಟು ಶಂಕೆ

 ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆಯಲ್ಲಿ ಕೇರಳ ಮತಾಂಧ ಸಂಘಟನೆಗಳ ನಂಟು ಶಂಕೆ. ಹತ್ಯೆಯಲ್ಲಿ ಬಳಸಿರುವ ವಾಹನ ಕೇರಳದಲ್ಲಿ ನೋಂದಣಿಯಾಗಿದೆ. -ಕೇರಳ ಯುವಕನ ಹತ್ಯೆಗೆ ಪ್ರತೀಕಾರ ಈ ಹತ್ಯೆ? ಮತೀಯ ಸಂಘಟನೆಗಳ ಕೈವಾಡ?

 

Praveen Murder Case Kerala extremist organizations in Praveen's murder is suspected rav
Author
Mangalore, First Published Jul 28, 2022, 8:53 AM IST

ಪುತ್ತೂರು (ಜು.28) ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ(Praveen Nettaru Murder) ಘಟನೆ ಹಿಂದೆ ಕೇರಳ ನಂಟು ಹೊಂದಿರುವ ಸಾಧ್ಯತೆ ಬಗ್ಗೆ ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಇದೇ ವೇಳೆ ವಾರದ ಹಿಂದೆ ಬೆಳ್ಳಾರೆಯಲ್ಲಿ ನಡೆದ ಕೇರಳ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳ್ಳಾರೆ ಪೇಟೆ ಸಮೀಪ ಕೋಳಿಫಾರಂ ಅಂಗಡಿ ಹೊಂದಿದ್ದ ಪ್ರವೀಣ್‌ ಮಂಗಳವಾರ ರಾತ್ರಿ 9 ಗಂಟೆಗೆ ಮನೆಗೆ ತೆರಳು ತನ್ನ ದ್ವಿಚಕ್ರ ವಾಹನ ಚಲಾಯಿಸಲು ಮುಂದಾಗುತ್ತಿದ್ದಂತೆ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಮುಸುಕುಧಾರಿಗಳ ತಂಡ ತಲೆಗೆ ಮಚ್ಚಿನ ಏಟು ಕಡಿದು ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದ ಪ್ರವೀಣ್‌ರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ದಾರಿಮಧ್ಯೆ ಮೃತಪಟ್ಟಿದ್ದರು.

ಕೊಲೆ ನಡೆಸಿದ ದುಷ್ಕರ್ಮಿಗಳು ಆಗಮಿಸಿದ್ದು ಕೇರಳ(Kerala) ನೋಂದಣಿಯ ದ್ವಿಚಕ್ರ ವಾಹನದಲ್ಲಿ ಎಂಬುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಆ ವಾಹನದ ನೋಂದಣಿಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಘಟನೆಯ ಹಿಂದೆ ಕೇರಳದ ಮತಾಂಧ ಸಂಘಟನೆಗಳ ಕೈವಾಡ ಇರುವ ಬಗ್ಗೆ ಪೊಲೀಸ್‌ ಇಲಾಖೆ ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರವೀಣ್‌ ಹತ್ಯೆ ಖಂಡಿಸಿ ಬಿಜೆಪಿ, ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ನಾಲ್ಕು ವರ್ಷಗಳ ಹಿಂದೆ ಬಿ.ಸಿ.ರೋಡ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆ ಹಾಗೂ ಸುರತ್ಕಲ್‌ನಲ್ಲಿ ನಡೆದ ದೀಪಕ್‌ ರಾವ್‌ ಹತ್ಯೆ ಘಟನೆಗಳು ಹಾಡುಹಗಲೇ ನಡೆದಿತ್ತು. ಆದರೆ ಅದರಲ್ಲಿ ಕೇರಳ ಸಂಘಟನೆಗಳ ಪಾತ್ರ ಕಂಡುಬಂದಿರಲಿಲ್ಲ. ಅವರ ಹತ್ಯೆಗೂ ಪ್ರವೀಣ್‌ ಹತ್ಯೆಗೂ ಸಾಮ್ಯತೆ ಇಲ್ಲದಿದ್ದರೂ ಈ ಹತ್ಯೆ ಹಿಂದೆ ಮತೀಯ ಸಂಘಟನೆಗಳ ಕೈವಾಡವನ್ನು ಶಂಕಿಸಲಾಗುತ್ತಿದೆ. ಆದರೆ ಪ್ರವೀಣ್‌ ಹತ್ಯೆಯನ್ನು ಕೇರಳ ಮೂಲದ ಮತಾಂಧ ಸಂಘಟನೆಗಳು ನಡೆಸಿರುವ ಬಗ್ಗೆ ಬಲವಾದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ.

ಪ್ರತೀಕಾರ ಹತ್ಯೆ?

ಸುಳ್ಯದ ಗಡಿಗೆ ಹೊಂದಿಕೊಂಡು ಕೇರಳ ಪ್ರದೇಶವಿದೆ. ವಾರದ ಹಿಂದೆ ಬೆಳ್ಳಾರೆಯಲ್ಲಿ ನಡೆದ ಕೇರಳ ಮೂಲಕ ಯುವಕನ ಹತ್ಯೆಗೆ ಪ್ರತೀಕಾರ ತೀರಿಸಲು ಪ್ರವೀಣ್‌ನ ಹತ್ಯೆ ನಡೆಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎನ್ನುತ್ತಾರೆ ಪೊಲೀಸರು.

ಪ್ರವೀಣ್‌ನ ಚಲನವಲನ ಬಗ್ಗೆ ಕೆಲವು ದಿನಗಳಿಂದ ನಿಗಾ ಇರಿಸಿದ ತಂಡ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಸುಳ್ಯ ಗಡಿ ಭಾಗದಿಂದ ಬೆಳ್ಳಾರೆಗೆ ಹೆಚ್ಚಿನ ದೂರ ಇಲ್ಲ. ಹೀಗಾಗಿ ಕೇರಳದಿಂದ ದುಷ್ಕರ್ಮಿಗಳು ಬೆಳ್ಳಾರೆಗೆ ಆಗಮಿಸಿ ಈ ಕೃತ್ಯ ನಡೆಸಿರುವ ಸಾಧ್ಯತೆ ಹೇಳಲಾಗಿದೆ. ಬೆಳ್ಳಾರೆಯಿಂದ ಘಟನೆ ನಡೆದ ಸ್ಥಳದ ನಡುವಿನ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದರಿಂದ ದುಷ್ಕರ್ಮಿಗಳ ಜಾಡುಹಿಡಿಯುವುದು ಪೊಲೀಸರಿಗೆ ಸವಾಲಾಗಿದೆ.

ಹಗಲು ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್‌!

ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್‌ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಹತ್ಯೆಗೆ ಒಳಗಾದ ದಿನ ಮಂಗಳವಾರ ಅಲ್ಲೇ ಮುಸ್ಲಿಂ ಸ್ನೇಹಿತನ ಹೊಸ ಮನೆಯ ಪ್ರವೇಶ ಸಂಭ್ರಮಕ್ಕೆ ಹೋಗಿಬಂದಿದ್ದರು. ಮುಸ್ಲಿಂ ಸ್ನೇಹಿತನ ಜತೆಗಿನ ಫೋಟೋವನ್ನು ಕೂಡ ತೆಗೆದಿದ್ದರು. ಇದು ಅವರ ಸರ್ವಧರ್ಮ ಸಮಭಾವದ ಕಾಳಜಿಯನ್ನು ತೋರಿಸುತ್ತಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಆದರೆ ಅದೇ ದಿನ ರಾತ್ರಿ ವೇಳೆ ದುಷ್ಕರ್ಮಿಗಳು ಭೀಕರವಾಗಿ ಕಡಿದು ಕೊಲೆ ಮಾಡಿದ್ದಾರೆ.

ಪ್ರವೀಣ್‌ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಸಮಾವೇಶ ರದ್ದು: ಸಿಎಂ ಬೊಮ್ಮಾಯಿ...

ಬೆಳ್ಳಾರೆ ಪರಿಸರದಲ್ಲಿ ಸಮಾಜಮುಖಿ ಕಾರ್ಯ ನಡೆಸುತ್ತಿದ್ದ ಪ್ರವೀಣ್‌ ನೆಟ್ಟಾರು ಎಲ್ಲರಿಗೂ ಬೇಕಾದವರಾಗಿದ್ದರು. ಕೊರೋನಾ ವೇಳೆ ಎಲ್ಲ ಮನೆಗಳಿಗೆ ಆಹಾರ ಸಾಮಗ್ರಿ ವಿತರಿಸುತ್ತಿದ್ದರು. ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನ ಮರಿಗಳನ್ನು ರಕ್ಷಿಸಿದ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

15ಕ್ಕೂ ಹೆಚ್ಚು ಮಂದಿ ವಶಕ್ಕೆ-ಎಡಿಜಿಪಿ ಅಲೋಕ್‌ ಕುಮಾರ್‌

ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮಂಗಳವಾರ ರಾತ್ರಿಯಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಂಗಳವಾರ ಮತ್ತು ಬುಧವಾರ ಹಿರಿಯ ಪೊಲೀಸ್‌ ಅ​ಧಿಕಾರಿಗಳು ಸ್ಥಳಕ್ಕೆ ಭೇಟಿ ತನಿಖೆ ಮಾಡುತ್ತಿದ್ದಾರೆ. ಹತ್ಯೆ ಘಟನೆ ಬಗ್ಗೆ ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಮಂಗಳೂರು ಕಮಿಷನರ್‌ ಮತ್ತು ಉಡುಪಿ ಪೊಲೀಸರ ಸಹಾಯ ಪಡೆದು ಆರು ತಂಡಗಳನ್ನು ರಚನೆ ಮಾಡಿದ್ದೇವೆ. 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ರಾಜ್ಯ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಬೆಳ್ಳಾರೆ ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬೆಳ್ಳಾರೆ ನಗರ ಪೊಲೀಸ್‌ ಠಾಣೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಐಜಿಪಿ ದೇವಜ್ಯೋತಿ ರೇ ಮತ್ತು ಎಸ್ಪಿ ಸೋನವಾಲೆ, ಹೆಚ್ಚುವರಿ ಎಸ್ಪಿ ಕುಮಾರ್‌ ಚಂದ್ರ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಎಡಿಜಿಪಿ ಜತೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೇಟಿ ನೀಡಿದ್ದಾರೆ.

ಸಂಸದರು ಸಚಿವರುಗಳು ಸ್ಥಳಕ್ಕೆ ಬಂದಿದ್ದಾರೆ. ಜನರ ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಘುಲಾಠಿ ಪ್ರಹಾರ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳು ಸೆಕ್ಷನ್‌ 144 ಜಾರಿ ಮಾಡಿದ್ದಾರೆ, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಜನರು ಗುಂಪಾಗಿ ಓಡಾಡಬಾರದು. ಆರೋಪಿಗಳ ಪತ್ತೆಗೆ ಪೊಲೀಸ್‌ ಅ​ಧಿಕಾರಿಗಳಿಗೆ ಅವಕಾಶ ಕೊಡಬೇಕು. ಹತ್ಯೆಗೆ 2- 3 ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ. ವಶಕ್ಕೆ ಪಡೆದವರೇ ಆರೋಪಿಗಳು ಎಂಬುದು ಸದ್ಯ ಹೇಳಲು ಸಾಧ್ಯವಿಲ್ಲ. ವಿಚಾರಣೆ ಹಂತದಲ್ಲಿ ನಾನು ಇಷ್ಟುಮಾತ್ರ ಹೇಳಬಲ್ಲೆ ಎಂದಿದ್ದಾರೆ. ಠಾಣೆಗೆ ಬಂದಿಳಿದ ತಕ್ಷಣ ಪೋಲಿಸ್‌ ಅಧಿ​ಕಾರಿಗಳು ಮತ್ತು ಸಿಬ್ಬಂದಿಗೆ ಊಟ ಆಗಿದೆಯಾ ಎಂದು ಅಲೋಕ್‌ ಕುಮಾರ್‌ ವಿಚಾರಿಸಿದರು.

Follow Us:
Download App:
  • android
  • ios