ಕಲಘಟಗಿ: ಅಂಚೆ ಕಚೇರಿಗೆ ಕನ್ನ ಹಾಕಿದ ಖದೀಮರು
ಅಂಚೆ ಕಚೇರಿಯ ಹಿಂಬದಿಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಮುರಿದು ಒಳನುಗ್ಗಿ ಕಳ್ಳತನ| ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ| ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಮುಸುಕು ಹಾಕಿ ಭದ್ರತೆಯ ಕೊಠಡಿಯಲ್ಲಿದ್ದ ಸೇಫ್ ಲಾಕರ್ ಒಡೆದು ಕಳ್ಳತನ|
ಕಲಘಟಗಿ(ಫೆ.17): ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಅಂಚೆ ಕಚೇರಿಗೆ ಸೋಮವಾರ ತಡರಾತ್ರಿ ಕನ್ನ ಹಾಕಿದ ಖದೀಮರು 1.40 ಲಕ್ಷ ನಗದು ಹಾಗೂ ಸಿಸಿ ಕ್ಯಾಮೆರಾ ಡಿವಿಆರ್ ಕಳ್ಳತನ ಮಾಡಿದ್ದಾರೆ.
ಅಂಚೆ ಕಚೇರಿಯ ಹಿಂಬದಿಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಮುರಿದು ಒಳನುಗ್ಗಿ ಈ ಕಳ್ಳತನ ಮಾಡಿದ್ದಾರೆ. ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಮುಸುಕು ಹಾಕಿ ಭದ್ರತೆಯ ಕೊಠಡಿಯಲ್ಲಿದ್ದ ಸೇಫ್ ಲಾಕರ್ ಒಡೆದು ಈ ಕಳ್ಳತನ ನಡೆಸಿದ್ದಾರೆ. ಜತೆಗೆ ಸುಳಿವು ಬಿಡಬಾರದೆಂದು ಸಿಸಿ ಟಿವಿ ಡಿವಿಆರ್ ಸಹ ಕದ್ದೊಯ್ದಿದ್ದಾರೆ.
ಪೊಲೀಸ್ ಠಾಣೆ ಪಕ್ಕದಲ್ಲೇ ವಾಸವಿದ್ದ ಎಟಿಎಂ ಕಳ್ಳ..!
ಈ ವಿಷಯ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿಹಾಗೂ ಅಂಚೆ ಕಚೇರಿಯ ಮೇಲಧಿಕಾರಿಗಳು ಬಂದು ಪರಿಶೀಲಿಸಿದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.