* ಬಿಎಸ್‌ಎನ್‌ಎಲ್‌ ನೌಕರನಿಗೆ ಕರೆ ಮಾಡಿ ಯಾಮಾರಿಸಿದ ಖದೀಮರು* ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ವಂಚನೆಗೊಳಗಾದ ಯಲ್ಲಪ್ಪ* ಓಟಿಪಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಜಾಗೃತಿ 

ಬೆಳಗಾವಿ(ಜೂ.14):  ಬ್ಯಾಂಕ್‌ ಖಾತೆ ಅಪ್‌ಡೇಟ್‌ ಮಾಡುವುದಾಗಿ ಹೇಳಿ 102 ಬಾರಿ ಓಟಿಪಿ ಪಡೆದು ಬಿಎಸ್‌ಎನ್‌ಎಲ್‌ ನೌಕರನ ಬ್ಯಾಂಕ್‌ ಖಾತೆಯಿಂದ 10 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ತಾಲೂಕಿನ ಕಂಗ್ರಾಳಿ ಕೆ.ಎಚ್‌ ಗ್ರಾಮದ ನಿವಾಸಿ ಯಲ್ಲಪ್ಪ ನಾರಾಯಣ ಜಾಧವ ವಂಚನೆಗೆ ಒಳಗಾದವರು. ಈ ಮೂಲಕ ಪೊಲೀಸರು ಆನ್‌ಲೈನ್‌ ವಂಚಕರಿಂದ ಎಚ್ಚರವಾಗಿರಿ ಎಂದು ಹಲವಾರು ಎಚ್ಚರಿಕೆಗಳನ್ನು ನೀಡಿದರೂ ಈ ರೀತಿಯಾಗಿ ವಂಚನೆಗೆ ಒಳಗಾಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಡ್ರೆಸ್‌ ಹಿಂದಿರುಗಿಸಲು ಹೋಗಿ 2 ಲಕ್ಷ ರೂ. ಕಳಕೊಂಡ ಮಹಿಳೆ

ಏನಿದು ಘಟನೆ:

ಲಾಕ್‌ಡೌನ್‌ ಸಮಯದಲ್ಲಿ ಖದೀಮರು ಯಲ್ಲಪ್ಪ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಿಮ್ಮ ಎಸ್‌ಬಿಐ ಬ್ಯಾಂಕ್‌ ಖಾತೆಗೆ ಕೆವೈಸಿಯನ್ನು ಅಪ್‌ಡೇಟ್‌ ಮಾಡಬೇಕಿದೆ. ಅದಕ್ಕಾಗಿ ನೀವು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಝೆರಾಕ್ಸ್‌ ಪ್ರತಿಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿ ಎಂದಿದ್ದಾರೆ. ಮಾತ್ರವಲ್ಲ ಲಿಂಕ್‌ ಕೂಡ ರವಾನಿಸಿದ್ದಾರೆ. ಅದನ್ನು ಕ್ಲಿಕ್‌ ಮಾಡಿಸಿದ್ದಾರೆ. ನಂತರ ಅದರಿಂದ ಬಂದ ಓಟಿಪಿ ನಂಬರ್‌ ಅನ್ನು ಸಂಗ್ರಹಿಸಿದ್ದಾನೆ. ಹೀಗೆ ಒಟ್ಟು 102 ಬಾರಿ ಓಟಿಪಿ ಪಡೆದುಕೊಂಡಿದ್ದಾರೆ ಖದೀಮರು. ಇದಾದ ಬಳಿಕ ಯಲ್ಲಪ್ಪ ಅವರ ಬ್ಯಾಂಕ್‌ ಖಾತೆಯಿಂದ 10 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಈ ವಿಚಾರ ತಿಳಿಸಿದ ಯಲ್ಲಪ್ಪ ಅವರು ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಓಟಿಪಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಇಂತಹ ಪ್ರಕರಣದಲ್ಲಿ ತಿಳಿದವರು, ಶಿಕ್ಷಣ ಪಡೆದವರೇ ಖದೀಮರಿಂದ ವಂಚನೆಗೆ ಒಳಗಾಗುತ್ತಿದ್ದಾರೆ. 102 ಬಾರಿ ಓಟಿಪಿ ಶೇರ್‌ ಮಾಡಿರುವುದು ಕೂಡ ವಿಚಿತ್ರವಾಗಿದೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ.ವಿಕ್ರಮ ಆಮಟೆ ತಿಳಿಸಿದ್ದಾರೆ.