Asianet Suvarna News Asianet Suvarna News

ವಿಜಯಪುರ: ಲಾರಿ ಅಡ್ಡಗಟ್ಟಿ ದರೋಡೆ, ಒಂಬತ್ತು ಖದೀಮರ ಬಂಧನ

ಒಂಬತ್ತು ಹೆದ್ದಾರಿ ದರೋಡೆಕೋರರ ಬಂಧನ| ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಮಾಹಿತಿ| ವಿಜಯಪುರದಿಂದ-ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯನ್ನು ಮನಗೂಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ತಡೆದಿದ್ದ ಆರೋಪಿಗಳು|

Nine Accused Arrest in Vijayapura for Robbery Case
Author
Bengaluru, First Published May 27, 2020, 9:43 AM IST

ವಿಜಯಪುರ(ಮೇ.27): ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಹಣ ದರೋಡೆ ಮಾಡುತ್ತಿದ್ದ ಓರ್ವ ಬಾಲಾರೋಪಿ ಸೇರಿದಂತೆ 9 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ತಿಳಿಸಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ಬಸವನ ಬಾಗೇವಾಡಿ ತಾಲೂಕಿನ ಸಂಗಮೇಶ ಮಡಿವಾಳಪ್ಪ ಅಗಸರ, ಬಸವರಾಜ ತಮ್ಮಣ್ಣ ಮಡಿವಾಳರ, ಬಸವರಾಜ ಅಪ್ಪಾಸಾಹೇಬ ಮೇಟಿ, ಶಿವಾನಂದ ಮುರುಗೇಶ ಕಂಟೆ, ರವಿ ಬಸಪ್ಪ ಬಿರಾದಾರ, ಭೀಮರಾಯ ಮಡಿವಾಳಪ್ಪ ಅಗಸರ, ಶೇಖರ ಬಸಪ್ಪ ಮಡಿವಾಳ, ಬಸವರಾಜ ಮಲ್ಲನಗೌಡ ಬಿರಾದಾರ ಅವರನ್ನು ಬಂಧಿಸಲಾಗಿದೆ. ಒಬ್ಬ ಬಾಲಾರೋಪಿಯನ್ನೂ ಬಂಧಿಸಲಾಗಿದೆ. ಬಂಧಿತರು ಬಸವನ ಬಾಗೇವಾಡಿ ಪಟ್ಟಣ ಹಾಗೂ ಟಕ್ಕಳಕಿ ಗ್ರಾಮದ ನಿವಾಸಿಗಳಾಗಿದ್ದಾರೆ.

ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ 4159 ವಲಸೆ ಕಾರ್ಮಿಕರ ಆಗಮನ

ದರೋಡೆಗೆ ಬಳಸಲಾಗಿರುವ ಆಟೋರಿಕ್ಷಾ, ಮೋಟಾರ್‌ ಸೈಕಲ್‌, ಮೊಬೈಲ್‌, .89 ಸಾವಿರ ನಗದು ಹಣವನ್ನು ಜಪ್ತು ಮಾಡಲಾಗಿದೆ. ಬಂಧಿತವಾಗಿರುವ ಆರೋಪಿಗಳು ಕಳೆದ ಮೇ 22 ರಂದು ವಿಜಯಪುರದಿಂದ-ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯನ್ನು ಮನಗೂಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ತಡೆದಿದ್ದಾರೆ, ವಿಳಾಸ ಕೇಳುವ ನೆಪದಲ್ಲಿ ಲಾರಿಯನ್ನು ನಿಲ್ಲಿಸಿ, ತಕ್ಷಣವೇ ಲಾರಿ ಚಾಲಕ ಹಾಗೂ ಕ್ಲೀನರ್‌ ಅನ್ನು ಚಾಕು ಮೊದಲಾದ ಮಾರಕಾಸ್ತ್ರಗಳಿಂದ ಹೆದರಿಸಿ, ಹಣ ಕೊಡಿ ಎಂದು ಬೆದರಿಕೆ ಹಾಕಿ, ನಗದು ಹಣವನ್ನು ದೋಚಿ ಪರಾರಿಯಾಗಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ಸಂದರ್ಭದಲ್ಲಿ ಈ ರೀತಿಯ ದರೋಡೆ ಪ್ರಕರಣ ನಡೆದಿರುವುದು ಸಾರ್ವಜನಿಕರಲ್ಲಿ ಹಾಗೂ ಚಾಲಕರಲ್ಲಿ ಆತಂಕ ಇತ್ತು. ಈ ಕಾರಣಕ್ಕಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇವಲ ಮೂರು ದಿನಗಳಲ್ಲಿ ಅದು ಸಂಪ್ರದಾಯಿಕ ತನಿಖಾ ವಿಧಾನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದಾರೆ.

ಆರೋಪಿಗಳು ಸೋಮವಾರ ಮಧ್ಯಾಹ್ನ ಮನಗೂಳಿ ಬಳಿ ಇರುವ ಡಾಬಾವೊಂದರಲ್ಲಿ ಸಂಶಯಾಸ್ಪದವಾಗಿ ನಿಂತಿದ್ದರು. ಆಗ ಅವರನ್ನು ವಿಚಾರಿಸಲಾಗಿ ಕೇವಲ ಊಟ ಮಾಡಲು ಬಂದಿದ್ದೇವೆ ಎಂದು ಅಸಂಬದ್ಧವಾಗಿ ಉತ್ತರಿಸಿದ್ದರು. ಆಗ ಅವರ ಚಲನವಲನಗಳ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಚಾರಣೆಗೆಳಪಡಿಸಿದಾಗ ಹೆದ್ದಾರಿಯಲ್ಲಿ ವಾಹನಗಳ ತಡೆದು ದರೋಡೆ ನಡೆಸುವುದನ್ನು ಬಾಯಿ ಬಿಟ್ಟಿದ್ದಾರೆ ಎಂದು ಹೇಳಿದರು.

ಐಷಾರಾಮಿ ಜೀವನ ಶೈಲಿಗಾಗಿ ಈ ರೀತಿಯ ಕೃತ್ಯಕ್ಕೆ ಕೈ ಹಾಕಲಾಗಿತ್ತು ಎಂದು ಯುವಕರು ವಿಚಾರಣೆ ವೇಳೆ ಹೇಳಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ ಎಂದು ಹೇಳಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಡಿವೈಎಸ್‌ಪಿ ಶಾಂತವೀರ, ಪೊಲೀಸ್‌ ಅಧಿಕಾರಿಗಳಾದ ಸೋಮಶೇಖರ ಜುಟ್ಟಲ್‌, ಎನ್‌.ಬಿ. ಶಿವೂರ, ಸಿ.ಬಿ. ಚಿಕ್ಕೋಡಿ, ಬಿ.ಎಂ. ಬಸವನಗೌಡರ ಅವರನ್ನೊಳಗೊಂಡ ತಂಡದ ಕಾರ್ಯವೂ ಶ್ಲಾಘನೀಯ ಎಂದು ಎಸ್ಪಿ ಅನುಪಮ ಅಗರವಾಲ್‌ ತಿಳಿಸಿದರು.
 

Follow Us:
Download App:
  • android
  • ios