* ತಿಂಗಳು ತುಂಬುವ ಮೊದಲೇ ನವವಿವಾಹಿತ ಸಾವು * ಅಪಘಾತದಿಂದ ಸಾವನ್ನಪ್ಪಿದ ವರ, ವಧುವಿನ ಸ್ಥಿತಿ ಗಂಭೀರ * ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ನಡೆದ ಘಟನೆ 

ಚಿಕ್ಕಮಗಳೂರು, (ಜೂನ್.25): ಮದುವೆಯಾಗಿ ಸುಃಖ ಸಂಸಾರ ನಡೆಸಬೇಕಾಗಿದ್ದ ನವಜೋಡಿಗಳಿಗೆ ರಸ್ತೆ ಅಪಘಾತ ನವಜೀವನದ ಮೇಲೆ ಕರಿನೆರಳು ಮೂಡಿಸಿದೆ. ವಿವಾಹವಾಗಿ ಒಂದು ತಿಂಗಳು ತುಂಬುವ ಮೊದಲೇ ನವವಿವಾಹಿತ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೇರೆ ತಾಲ್ಲೂಕಿನಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪಘಾತದಿಂದ ಸಾವನ್ನಪ್ಪಿದ ವರ, ವಧುವಿನ ಸ್ಥಿತಿ ಗಂಭೀರ 
ಮದುವೆಯಾಗಿ ತಿಂಗಳು ತುಂಬುವ ಮೊದಲೇ ನವವಿವಾಹಿತ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಮೃತನನ್ನ ತರೀಕೆರೆ ಪಟ್ಟಣದ ದೊಡ್ಡಹಟ್ಟಿ ನಿವಾಸಿ 30 ವರ್ಷದ ಆನಂದ್ ಎಂದು ಗುರುತಿಸಲಾಗಿದೆ. ಮೃತ ಆನಂದ್ಗೆ ತಿಂಗಳ ಹಿಂದಷ್ಟೆ ಶಿವಮೊಗ್ಗ ತಾಲೂಕಿನ ಬೊಮ್ಮನಕಟ್ಟೆ ನಿವಾಸಿ ರಂಜಿತಾ ಎಂಬುವರೊಂದಿಗೆ ವಿವಾಹವಾಗಿತ್ತು. ಮದುವೆ ಬಳಿಕ ತರೀಕೆರೆ ದೊಡ್ಡಹಟ್ಟಿಯಲ್ಲಿದ್ದ ಆನಂದ್ ಹಾಗೂ ರಂಜಿತಾ ಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರಕ್ಕೆ ಹೋಗಿದ್ದರು.

 ಮದುವೆ ಮುಗಿಸಿಕೊಂಡು ತರೀಕೆರೆಗೆ ಮತ್ತೆ ಹಿಂದಿರುಗುವಾಗ ಕಡೂರು ತಾಲೂಕಿನ ಬೀರೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಶಿವಪುರ ಗೇಟ್ ಬಳಿ ತರೀಕೆರೆಯಿಂದ ಬರುತ್ತಿದ್ದ ಕಾರು ಕಡೂರು ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಹಾರಿ ಬಿದ್ದಿದ್ದು, ಬೈಕ್ ರೈಡ್ ಮಾಡುತ್ತಿದ್ದ ಆನಂದ್ ತಲೆ ಹಾಗೂ ಕೈಕಾಲುಗಳಿಗೆ ಬಲವಾಗಿ ಒದೆ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕಿನಲ್ಲಿ ಹಿಂದೆ ಕೂತಿದ್ದ ಆನಂದ್ ಪತ್ನಿ ರಂಜಿತಾಗೂ ಗಂಭೀರ ಗಾಯವಾದ ಪರಿಣಾಮ ಬೀರೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಾಗಿದೆ. ಬೀರೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಬೀರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಮದುವೆಯಾಗಿ ತಿಂಗಳು ತುಂಬುವ ಮೊದಲೇ ಅಪಘಾತದಿಂದ ವರ ಸಾವನ್ನಪ್ಪಿದ್ದ ವಿಷಯ ತಿಳಿದು ತರೀಕೆರೆ ಜನ ಕೂಡ ಮಮ್ಮುಲು ಮರುಗಿದ್ದಾರೆ.