ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳದಿಂದ ಮನನೊಂದು ನವವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣ ಚನ್ನರಾಯಪಟ್ಟಣದ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ ಬಿ.ಬಿ (26) ಎಂದು ಗುರುತಿಸಲಾಗಿದೆ.  

ಹಾಸನ (ಆ.02): ಆತ ಉದಯಪುರದಲ್ಲಿ ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಸ್ಪಂದನಾ ಕಿರಣ್‍ನೊಂದಿಗೆ ಸಂಸಾರ ನಡೆಸದೇ ತವರು ಮನೆ ಸೇರಿದ್ದಳು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಮೂವರು ಸೇರಿ ಕಿರಣ್‍ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಕಿರಣ್ ಹಣ ನೀಡದೇ ಇದ್ದಾಗ ಜು.2 ರಂದು ಸ್ಪಂದನಾ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿ ಜೈಲಿಗೆ ಕಳುಹಿಸಿದ್ದಳು. ಬಳಿಕ ಕಿರಣ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದರಿಂದ ಮನನೊಂದು ಕಿರಣ್ ಜು.31 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ಯಾಬ್​ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರ: ಮಾತಾಡೋದು ಕದ್ದು ಕೇಳಿ ಡ್ರೈವರ್ ಬ್ಲ್ಯಾಕ್‌ಮೇಲ್

ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಆತ್ಮಹತ್ಯೆ: ಕೆಲವೇ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಹೋಬಳಿಯ ಬಿಜ್ಜವಾರ ಗ್ರಾಮದ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಪಟ್ಟಣದ ಕೆರೆಕೋಡಿ ನಿವಾಸಿ ರಮೇಶ್‌(26), ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ಜರುಗಹಳ್ಳಿ ಗ್ರಾಮದ ಸಹನ(22) ಆತ್ಮಹತ್ಯೆ ಮಾಡಿಕೊಂಡವರು. ದೇವನಹಳ್ಳಿಯ ರೆಡ್ಡಿ ಎಲೆಕ್ಟ್ರಾನಿಕ್ಸ್‌ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ರಮೇಶ್‌, ಜರುಗಹಳ್ಳಿಯ ಸಹನಾಳನ್ನು ಪ್ರೀತಿಸಿ, ಐದು ತಿಂಗಳ ಹಿಂದೆ ಮದುವೆಯಾಗಿದ್ದರು. 

ಹನಿಟ್ರ್ಯಾಪ್‌ ಮಾಡಿ 30 ಜನರಿಗೆ 30 ಲಕ್ಷ ಟೋಪಿ: ಮೂವರ ಬಂಧನ

ಇವರಿಬ್ಬರು ಐದು ದಿನಗಳ ಹಿಂದೆ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಅನ್ಯೋನ್ಯವಾಗಿದ್ದ ದಂಪತಿ, ಭಾನುವಾರ ಬಿಜ್ಜವಾರದ ಅಶ್ವತ್ಥನಾರಾಯಣ ಅವರ ತೋಟದಲ್ಲಿನ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿದೆ. ತಕ್ಷಣ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ವಿಜಯಪುರ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.