1.6 ಕೋಟಿ ರು. ವಂಚನೆ : ಪೊಲೀಸರಿಗೆ ನಟ ಎಸ್.ನಾರಾಯಣ್ ದಾಖಲೆ ಸಲ್ಲಿಕೆ
ಚಲನಚಿತ್ರ ನಿರ್ದೇಶಕ ಎಸ್ ನಾರಾಯಣ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಿದ್ದಾರೆ
ಬೆಂಗಳೂರು (ನ.01): ಚಲನಚಿತ್ರ ನಿರ್ಮಿಸುವ ನೆಪದಲ್ಲಿ .1.6 ಕೋಟಿ ವಂಚನೆಗೆ ಒಳಗಾದ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರನ್ನು ಭೇಟಿಯಾಗಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಶನಿವಾರ ದಾಖಲೆ ಸಲ್ಲಿಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತೆರಳಿ ಇನ್ಸ್ಪೆಕ್ಟರ್ ಪುನೀತ್ ಅವರಿಗೆ ಪ್ರಕರಣದ ಬಗ್ಗೆ ನಿರ್ದೇಶಕ ನಾರಾಯಣ್ ಮಾಹಿತಿ ನೀಡಿದ್ದಾರೆ. ಬಳಿಕ ಕೆಲವು ದಾಖಲೆಗಳನ್ನು ಸಲ್ಲಿಸಿ ಅವರು ಹೊರ ಬಂದಿದ್ದಾರೆ. ಸಿಸಿಬಿ ಅಧಿಕಾರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ್ ಅವರು, ಚಲನಚಿತ್ರ ನಿರ್ಮಿಸುವುದಾಗಿ ಐವರು ಬಂದಿದ್ದರು.
ಅವರ ಮಾತು ನಂಬಿ ನಾನು ಸಿನಿಮಾ ಶುರು ಮಾಡಿದೆ. ಆದರೆ ಚಿತ್ರೀಕರಣ ಹಂತದಲ್ಲಿ ಹಣಕಾಸಿಗೆ ಒಂದಲ್ಲೊಂದು ಕಾರಣ ಕೊಡುತ್ತಿದ್ದರು. ಆರೋಪಿಗಳ ಮಾತು ನಂಬಿ ನನಗೆ ನಷ್ಟವಾಯಿತು ಎಂದು ಹೇಳಿದರು.
ಈ ವಂಚನೆ ಬಗ್ಗೆ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿಗೆ ವರ್ಗವಾಗಿದೆ. ಹಾಗಾಗಿ ಪ್ರಕರಣದ ಬಗ್ಗೆ ಅಧಿಕಾರಿಗಳಿಗೆ ದಾಖಲೆ ಸಲ್ಲಿಕೆಗೆ ಭೇಟಿಯಾಗಿದ್ದೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು