ವಿಶಾಲ್‌ ಎಂಬ ಮಾನಸಿಕ ಅಸ್ವಸ್ಥ ಮನೆಯೊಂದರ ಬಾಗಿಲು ಬಡಿದಿದ್ದಾನೆ. ಅವರು ಪ್ರಶ್ನಿಸಿದಾಗ ಗಲಾಟೆ ನಡೆದು, ವಿಶಾಲ್‌ ಹಲ್ಲೆ ಮಾಡಿದ್ದಾನೆ ಹೀಗಾಗಿ ಮರಕ್ಕೆ ಕಟ್ಟಿಹಲ್ಲೆ, ಮೆರವಣಿಗೆ ಮಾಡಿ  ಮಾನಸಿಕ ಅಸ್ವಸ್ಥನ ವಿರುದ್ಧ ವಿಕೃತಿ ಮೆರೆದಿದ್ದು, ಬೆಳಗಾವಿ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ.

ಬೆಳಗಾವಿ (ಆ.25): ಗ್ರಾಮದ ಯುವಕರೆಲ್ಲ ಸೇರಿ ಮಾನಸಿಕ ಅಸ್ವಸ್ಥನೊಬ್ಬನನ್ನು ಮರಕ್ಕೆ ಕಟ್ಟಿಅಮಾನವೀಯವಾಗಿ ಥಳಿಸಿ, ಮೆರವಣಿಗೆ ಮಾಡಿದ ಪರಿಣಾಮ ಗಂಭೀರ ಗಾಯಗೊಂಡ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಘಟನೆ ಬಸವನಕುಡಚಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಬಸವನಕುಡಚಿ ಗ್ರಾಮದ ಗಾಂಧಿ ಗಲ್ಲಿಯ ವಿಶಾಲ್‌ ಕಲ್ಲಪ್ಪ ಪಟಾಯಿ (28) ಮೃತ ವ್ಯಕ್ತಿ. ವಿಶಾಲ ಪಟಾಯಿ ಮಾನಸಿಕ ಅಸ್ವಸ್ಥನಾಗಿದ್ದ. ಈ ವಿಚಾರ ಗ್ರಾಮಸ್ಥರಿಗೂ ಗೊತ್ತಿತ್ತು. ಈತ ಆಗಾಗ ಗ್ರಾಮದವರ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಎರಡ್ಮೂರು ದಿನಗಳ ಹಿಂದೆ ಈತ ನಾಗರಾಜ ಬಡಿಗೇರ ಎಂಬ ಕುಟುಂಬದವರ ಮನೆ ಬಾಗಿಲು ಬಡಿದಿದ್ದು, ಇದನ್ನು ಪ್ರಶ್ನಿಸಿದಾಗ ಮಹಿಳೆ ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ. ಈತನ ಹಲ್ಲೆಯಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮದ ಯುವಕರು ವಿಶಾಲ್‌ನನ್ನು ಮರಕ್ಕೆ ಕಟ್ಟಿಹಾಕಿ ಆ.18ರಂದು ರಾತ್ರಿ ಮನಬಂದಂತೆ ಥಳಿಸಿದ್ದರು. ಆತನ ಮೆರವಣಿಗೆಯನ್ನೂ ಮಾಡಿದ್ದರು ಎನ್ನಲಾಗಿದೆ. ಯುವಕರ ಹೊಡೆತಕ್ಕೆ ಥರಗುಟ್ಟಿದ ವಿಶಾಲ್‌ ಅಲ್ಲೇ ಅಸ್ವಸ್ಥನಾಗಿ ಬಿದ್ದಿದ್ದ. ನಂತರ ತೀವ್ರ ಅಸ್ವಸ್ಥಗೊಂಡ ವಿಶಾಲ್‌ನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಆತ ಮಂಗಳವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಈ ಕುರಿತು ಮಾಳ ಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ 1 ತಿಂಗಳ ಮಗು ಅಪಹರಣ, ಆರೋಪಿ ಬಂಧನ: ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಒಂದು ತಿಂಗಳ ಗಂಡು ಮಗುವನ್ನು ಅಪಹರಣ ಮಾಡಿದ್ದ ಹಳೇಹುಬ್ಬಳ್ಳಿಯ ಮಾಣಿಕ್ಯ ಕಿಲ್ಲೆದಾರ ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ತಂದೆ-ತಾಯಿಯನ್ನು ಯಾಮಾರಿಸಿ, ಆರೋಪಿ ಮಾಣಿಕ್ಯ ಮಗು ಅಪಹರಿಸಿದ್ದ. ರೈಲಿನಲ್ಲಿದ್ದ ಪ್ರಯಾಣಿಕರು ಆರೋಪಿಯನ್ನು ಹಿಡಿದು ಹಾವೇರಿಯ ರೈಲು ನಿಲ್ದಾಣದಲ್ಲಿ ರೈಲು ಸಿಬ್ಬಂದಿಗೆ ಒಪ್ಪಿಸಿದ್ದರು. ಆರೋಪಿಯನ್ನು ಪೊಲೀಸ್‌ ವಶಕ್ಕೆ ನೀಡಿ, ವಿಚಾರಣೆ ಬಳಿಕ ಮಗುವನ್ನು ಮಂಗಳೂರು ಮೂಲದ ಪಾಲಕರಿಗೆ ಒಪ್ಪಿಸಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಬೇಡಿಕೆ, ದೂರು: ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದ ಇಲ್ಲಿನ ಕುಸಗಲ್‌ ರಸ್ತೆಯ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಭಾವಚಿತ್ರ ಮತ್ತು ವಿಡಿಯೊ ಡೌನ್‌ಲೋಡ್‌ ಮಾಡಿ, ಅಶ್ಲೀಲ ಚಿತ್ರಗಳಿಗೆ ಸೇರಿಸಿ . 10 ಸಾವಿರಕ್ಕೆ ಬೇಡಿಕೆ ಇಟ್ಟಿರುವ ವ್ಯಕ್ತಿಯ ವಿರುದ್ಧ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಳಿದಷ್ಟುಹಣ ನೀಡದಿದ್ದರೆ ಎಡಿಟ್‌ ಮಾಡಿರುವ ಅಶ್ಲೀಲ ಚಿತ್ರಗಳನ್ನು ಸ್ನೇಹಿತರ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಕಳುಹಿಸುವುದಾಗಿ ಬೆದರಿಸಿದ್ದು ಅಲ್ಲದೆ, ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕದ ತಟ್ಟಿದ ಎಂದು ಮಾನಸಿಕ ಅಸ್ವಸ್ಥನನ್ನು ಬಡಿದು ಕೊಂದರು!

ಬೈಕ್‌ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು
ಬಳ್ಳಾರಿ: ಬೈಕ್‌ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಲ್ಲಿನ ಕೌಲ್‌ಬಜಾರ ಓವರ್‌ಬ್ರಿಡ್ಜ್‌ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ವೀರೇಶ್‌ (40), ಪತ್ನಿ ಅಂಜಲಿ (35), ಪುತ್ರ ದಿನೇಶ್‌ (6) ಮೃತಪಟ್ಟವರು. ತೀವ್ರವಾಗಿ ಗಾಯಗೊಂಡಿರುವ ಪುತ್ರಿ ಅನಿ(4) ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Karnataka News Live updates: ದತ್ತಪೀಠದ ಮಾರ್ಗದಲ್ಲಿ 21 ಅಡಿ ಆಂಜನೇಯನ ಮೂರ್ತಿ

ಮೃತ ವೀರೇಶ್‌ ದಂಪತಿ ತನ್ನ ಸ್ವಗ್ರಾಮ ಯರಗುಡಿಯಿಂದ ಬಳ್ಳಾರಿಯ ಗಫäರ್‌ ಟವರ್‌ ಬಳಿಯ ತಮ್ಮ ಮನೆಗೆ ಬೈಕ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದರು. ಏಳು ಮಕ್ಕಳ ತಾಯಿ ದೇವಸ್ಥಾನ ಬಳಿಯ ಓವರ್‌ಬ್ರಿಡ್ಜ್‌ನಿಂದ ಹೋಗುತ್ತಿರುವಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ಅತಿವೇಗದ ಚಾಲನೆ ಹಾಗೂ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಆರೋಪಿ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.