ಫೈನಾನ್ಸ್‌ ಕಂಪ​ನಿ​ಯೊಂದಲ್ಲಿ ಸುಮಾರು 8 ಕೋಟಿ ರು.ಗೂ ಅಧಿಕ ಹಣವನ್ನು ದರೋಡೆ ಮಾಡಿ, ಪರಾರಿಯಾಗಿ ಮುಸುಕು ಹಾಕಿ ಓಡಾಡುತ್ತಿದ್ದ ಚಾಲಾಕಿ ದಂಪತಿ 10 ರು. ಜ್ಯೂಸ್‌ ಕುಡಿಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಸಂಗತಿ ಉತ್ತರಾಖಾಂಡ್‌ನಲ್ಲಿ ನಡೆದಿದೆ.

ಡೆಹ್ರಾಡೂನ್‌: ಫೈನಾನ್ಸ್‌ ಕಂಪ​ನಿ​ಯೊಂದಲ್ಲಿ ಸುಮಾರು 8 ಕೋಟಿ ರು.ಗೂ ಅಧಿಕ ಹಣವನ್ನು ದರೋಡೆ ಮಾಡಿ, ಪರಾರಿಯಾಗಿ ಮುಸುಕು ಹಾಕಿ ಓಡಾಡುತ್ತಿದ್ದ ಚಾಲಾಕಿ ದಂಪತಿ 10 ರು. ಜ್ಯೂಸ್‌ ಕುಡಿಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಸಂಗತಿ ಉತ್ತರಾಖಾಂಡ್‌ನಲ್ಲಿ ನಡೆದಿದೆ. ಇದೇ ಜೂ.10 ರಂದು ಪಂಜಾಬ್‌ನ ಲೂಧಿಯಾನಾದಲ್ಲಿರುವ ಸಿಎಂಎಸ್‌ ಸೆಕ್ಯುರಿಟೀಸ್‌ ಎಂಬ ಫೈನಾನ್ಸ್‌ ಕಂಪನಿಗೆ ನುಗ್ಗಿದ್ದ 12 ಜನರ ಗುಂಪೊಂದು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು ಸುಮಾರು 8 ಕೋಟಿ 49 ಲಕ್ಷ ರು.ಗಳನ್ನು ದೋಚಿ ಪರಾರಿಯಾಗಿತ್ತು. ಸೆರೆಯಾಗಿರುವ ದಂಪತಿಯೂ ಅದೇ ಗುಂಪಿನಲ್ಲಿದ್ದರು. ಹಣ ದೋಚಿದ ಬಳಿಕ ಹಲವಾರು ತೀರ್ಥಕ್ಷೇತ್ರಗಳಿಗೆ ಹೋಗುತ್ತಿದ್ದ ಮಂದೀಪ್‌ ಕೌರ್‌ ಮತ್ತು ಪತಿ ಜಸ್ವಿಂದರ್‌ ಸಿಂಗ್‌ನನ್ನು ಬಂಧಿಸಲು ಪಂಜಾಬ್‌ ಪೊಲೀಸ್‌ ಬಲೆ ಬೀಸಿದ್ದರು.

Add Asianetnews Kannada as a Preferred SourcegooglePreferred

ಉತ್ತರಾಖಂಡದ ಚಮೋಲಿಯ ಸಿಖ್ ತೀರ್ಥಕ್ಷೇತ್ರ (Sikh shrine in Chamoli) ಹೇಮಕುಂಡ್‌ (Hemkunda) ಸಾಹೀಬ್‌ನಲ್ಲಿ ದಂಪತಿ ಇದ್ದಾರೆ. ಆದ​ರೆ ಮುಸುಕು ಹಾಕಿಕೊಂಡು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀ​ಸ​ರಿಗೆ ಲಭಿ​ಸಿತ್ತು. ಆದರೆ ಮುಸುಕು ತೆಗೆ​ಸು​ವುದು ಸವಾ​ಲಾ​ಗಿ​ತ್ತು. ಈ ನಡುವೆ, ಹೇಮ​ಕುಂಡ​ದಲ್ಲಿ ಭಕ್ತಾದಿಗಳಿಗೆ ಉಚಿತವಾಗಿ 10 ರು. ಪ್ಯಾಕೆಟ್‌ ಜ್ಯೂಸ್‌ (Juice packets) ನೀಡಲಾಗುತ್ತದೆ. ಹೀಗಾ​ಗಿ ಅಲ್ಲಿಗೆ ಬಂದ ದಂಪತಿ ಜ್ಯೂಸ್‌ ಕುಡಿಯಲು ತಮ್ಮ ಮುಸುಕು ಬಿಚ್ಚಿದ್ದಾರೆ. ಈ ವೇಳೆ ಪೊಲಿಸರಿಗೆ ಚಾಲಾಕಿ ದಂಪತಿ ಕಾಣಿ​ಸಿ​ದ್ದಾರೆ. ಆದರೆ ತಕ್ಷಣವೇ ಅವರನ್ನು ಬಂಧಿಸದೇ ಅವರು ಸಿಖ್‌ ಮಂದಿರದಲ್ಲಿ ದರ್ಶನ ಪಡೆದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣದ 9 ಆರೋಪಿಗಳನ್ನು ಬಂಧಿಸಲಾಗಿದೆ. ಕೇದಾರನಾಥ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ನೇಪಾಳಕ್ಕೆ ಹೋಗಿ ನೆಲೆಸುವ ಯೋಜನೆ ದಂಪತಿಯದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!

ಆಟೋ ಚಾಲಕನ ಮನೆಯಲ್ಲಿ ದರೋಡೆ ಮಾಡಿಸಿದ ಗೆಳೆಯ: ಮೂವರ ಬಂಧನ