ಬರ್ತಡೆ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕ ಲವ್ ಜಿಹಾದ್ ಕೇಸ್ನಲ್ಲಿ ಅರೆಸ್ಟ್!
ಸ್ನೇಹಿತರ ಬರ್ತಡೆ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕನ ಬಂಧನ/ ದಲಿತ ಯುವತಿಯನ್ನು ಮನೆಗೆ ಬಿಡುತ್ತಿದ್ದ ಯುವಕನ ಮೇಲೆ ಲವ್ ಜಿಹಾದ್ ಕೇಸು/ ಉತ್ತರ ಪ್ರದೇಶದಿಂದ ಘಟನೆ ವರದಿ/ ತನ್ನ ಮೇಲೆ ಯಾವುದೇ ಬಲವಂತವಾಗಿಲ್ಲ ಎಂದ ಬಾಲಕಿ
ಲಕ್ನೋ ( ಡಿ. 25) ಉತ್ತರ ಪ್ರದೇಶದ ಲವ್ ಜಿಹಾದ್ ಕಾನೂನಿನ ಚರ್ಚೆ ಹತ್ತು ಹಲವು ಮುಖಗಳನ್ನು ಪಡೆದುಕೊಳ್ಳುತ್ತಿದೆ. ಉತ್ತರ ಪ್ರದೇಶದ ಬಿಜ್ನೂರ್ ಎಂಬಲ್ಲಿ ಸ್ನೇಹಿತ ಹುಟ್ಟುಹಬ್ಬದ ಪಾರ್ಟಿ ಆಚರಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಲವ್ ಜಿಹಾದ್ ಕಾಯಿದೆ ಅಡಿ ಬಂಧಿಸಲಾಗಿದೆ.
16 ವರ್ಷದ ಹಿಂದೂ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಮುಸ್ಲಿಂ ತರುಣನನ್ನು ಒಂದು ವಾರದಿಂದ ಜೈಲಿನಲ್ಲಿ ಇರಿಸಲಾಗಿದೆ. ಆದರೆ ಮತಾಂತರ ಪ್ರಯತ್ನ ಆರೋಪವನ್ನು ಬಾಲಕಿ ಮತ್ತು ಆಕೆಯ ತಾಯಿ ಇಬ್ಬರೂ ತಳ್ಳಿಹಾಕಿದ್ದಾರೆ.
ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸರು
ತಾನು ಹಿಂದೂ ಎಂಬ ಸುಳ್ಳು ಪರಿಚಯ ಮಾಡಿಕೊಂಡು ಬಾಲಕಿಯನ್ನು ಒಲಿಸಿಕೊಂಡು ಆಕೆಯನ್ನು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬಾಲಕಿ ತಂದೆ ನೀಡಿದ ದೂರಿನ ಆಧಾರದಲ್ಲಿ ಬಂಧಿಸಲಾಗಿದೆ.
ಬಾಲಕಿ ಮತ್ತು ಯುವಕ ಬರ್ತಡೆ ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದರು. ಆಕೆಯನ್ನು ಮನೆಗೆ ಬಿಡಲು ಹುಡುಗ ಕೂಡ ಬರುತ್ತಿದ್ದ. ಆದರೆ ಗ್ರಾಮಸ್ಥರು ಕಳ್ಳರು ಎಂದು ಭಾವಿಸಿ ಅಬರನ್ನು ಹಿಡಿದು ಚೆನ್ನಾಗಿ ಹೊಡೆದರು. ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದೇವೆ ಎಂದು ಜನ ಕೇಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆ ಬಾಲಕ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಅಂದು ಸುರಕ್ಷಿತವಾಗಿ ಮನೆಗೆ ತಲುಪಿಸಲು ಜತೆಗೆ ಬಂದಿದ್ದ. ನನ್ನನ್ನು ಮತಾಂತರ ಮಾಡಲು ಆತ ಪ್ರಯತ್ನಿಸಿಯೇ ಇಲ್ಲ ಎಂದು ಬಾಲಕಿ ಹೇಳಿದ್ದಾಳೆ.
ಯುವಕ ಬಾಲಕಿ ಅಪಹರಣ ಮಾಡಿ ಪರಾರಿಯಾಗುವ ಯತ್ನದಲ್ಲಿ ಇದ್ದ ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಮಟ್ಟಿಗೆ ಇದು ಸದ್ಯಕ್ಕೆ ದೊಡ್ಡ ಮಟ್ಟದ ಚರ್ಚೆಯ ವಿಚಾರ.
ಯುವಕ ಅಪ್ರಾಪ್ತ ಎಂದು ಆತನ ಕುಟುಂಬ ವಾದ ಮಾಡುತ್ತಿದೆ. ಪೊಲೀಸರು ದಾಖಲೆ ನೀಡಿ ಎಂದು ಕೇಳಿದ್ದಾರೆ. ಇಬ್ಬರು ಕ್ಲಾಸ್ ಮೇಟ್ ಗಳಾಗಿದ್ದರು ಎಂಬುದು ಪೊಲೀಸರ ಮಾಹಿತಿ.