ಬೆಂಗಳೂರಿನ ಭಾರತಿನಗರದಲ್ಲಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಎಂಬಾತನನ್ನು ಜು.15ರ ರಾತ್ರಿ ಬೆಂಗಳೂರಿನ ಭಾರತಿನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇಂದು ಸಂಜೆ 4 ಗಂಟೆಗೆ ಬಿಕ್ಲು ಶಿವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಭಾರತಿ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಆರೋಪಿಗಳಾದ ಕಿರಣ್, ವಿಮಲ್, ಪ್ಯಾಟ್ರಿಕ್, ಸಂತೋಷ್ ಹಾಗೂ ನವೀನ್ ಎಂಬ ಐದು ಮಂದಿಯನ್ನು ಎಂಜಿ ರಸ್ತೆಯ ಮೇಯೋ ಹಾಲ್ ಕೋರ್ಟ್ ಬಳಿ ಇರುವ 10ನೇ ಎಸಿಎಂಎಂ ಕೋರ್ಟ್ ಮುಂದೆ ಕರೆದೊಯ್ಯಲಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆ ವಿವರಗಳು: ಲೈವ್ ವಿಡಿಯೋದಲ್ಲಿ ಸೆರೆಯಾದ ಹತ್ಯೆ

ಬಿಕ್ಲು ಶಿವನನ್ನು ಆರೋಪಿ ತಂಡ ಕಾರು ಮತ್ತು ಬೈಕ್‌ನಲ್ಲಿ ಬಂದು ನರ್ಸಿಹಳ್ಳಿ ಬಳಿ ಕಟ್ಟಡದ ಮುಂದೆ ಕೊಂದಿದ್ದರು. ಕೆಲ ಆರೋಪಿಗಳು ಹೆಲ್ಮೆಟ್ ಧರಿಸಿದ್ದು, ಹತ್ಯೆಯ ದೃಶ್ಯವು ಸಾರ್ವಜನಿಕರೊಬ್ಬರ ಮೊಬೈಲ್‌ನಲ್ಲಿ ಲೈವ್ ವಿಡಿಯೋ ರೂಪದಲ್ಲಿ ಸೆರೆಯಾಗಿದ್ದು, ಇದು ಈಗ ವೈರಲ್ ಆಗಿದೆ. ಕೊಲೆಯ ಸಂದರ್ಭದಲ್ಲಿ ಬಿಕ್ಲು ಶಿವ ಕೆಳಗೆ ಬಿದ್ದಿದ್ದಾಗ, ಆರೋಪಿಗಳು ನಿರ್ದಯವಾಗಿ ಹಲ್ಲೆ ನಡೆಸಿರುವ ದೃಶ್ಯ ದೃಢವಾಗಿದೆ.

ಕುಚುಕು ಗೆಳೆಯರ ಮಧ್ಯೆ ಜಮೀನಿಗಾಗಿ ಶುರುವಾದ ಶತ್ರುತ್ವ

ಬಿಕ್ಲು ಶಿವ ಮತ್ತು ಜಗ್ಗ ಎಂಬ ವ್ಯಕ್ತಿಗಳು ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರೂ, ಬಿತ್ತಗನೂರಿನ ಜಮೀನಿನ ವಿಚಾರವಾಗಿ ಅವರ ನಡುವೆ ಶತ್ರುತ್ವ ಆರಂಭವಾಯಿತು. 2024ರಿಂದ ಅವರ ಮಧ್ಯೆ ತೀವ್ರ ಗಲಾಟೆ ಶುರುವಾಯಿತೆಂಬುದು ತಿಳಿದುಬಂದಿದೆ. ಜಿಪಿಎ ಹೊಂದಿದ್ದ ಬಿಕ್ಲು ಶಿವನಿಗೆ ಜಗ್ಗ ಬೆದರಿಕೆ ಹಾಕುತ್ತಿದ್ದ. ಹಲವಾರು ಬಾರಿ ಬಿಕ್ಲು ಶಿವ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ.

ಈ ಬೆದರಿಕೆಯ ನಡುವೆಯೇ, ಬಿಕ್ಲು ಶಿವನನ್ನು ಕೆಲ ದಿನಗಳ ಕಾಲ ಪೊಲೀಸರು ಜೈಲಿನಲ್ಲಿ ಇರಿಸಿದ್ದರು. ವಾರದ ಹಿಂದೆ ಜೈಲಿನಿಂದ ಬಿಡುಗಡೆಯಾದ ಬಳಿಕ, ಆತ ಯಾರೊಂದಿಗೂ ಹೆಚ್ಚು ಸಂಪರ್ಕವಿಲ್ಲದೆ ಮನೆಯಲ್ಲಿಯೇ ಉಳಿಯುತ್ತಿದ್ದ. ತನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ ಎಂಬುದನ್ನು ಶಿವ ತನ್ನ ತಾಯಿಗೆ ಮತ್ತು ಸ್ನೇಹಿತರಿಗೆ ತಿಳಿಸಿದ್ದ.

ತಾಯಿ ವಿಜಯಲಕ್ಷ್ಮಿ ಹೇಳಿಕೆ

ಮೃತನ ತಾಯಿ ವಿಜಯಲಕ್ಷ್ಮಿ ಈ ಬಗ್ಗೆ ಮಾತನಾಡುತ್ತಾ, “ನನ್ನ ಮಗ ಜಮೀನು ವಿವಾದದಿಂದಾಗಿ ಜಗ್ಗನಿಂದ ಭಯಪಡುತ್ತಿದ್ದ. ಅವನು ನನಗೆ ‘ನನಗೆ ಜೀವ ಭಯವಿದೆ’ ಎಂದಿದ್ದ. ಅಪರಿಚಿತರು ಬಂದ್ರೆ ಬಾಗಿಲು ತೆಗೆಯಬೇಡಿ ಎಂದಿದ್ದ. ಚೆನ್ನೈನಿಂದ ಹುಡುಗರನ್ನು ಕರೆಸಿ ನನ್ನನ್ನು ಹೊಡೆಯಲು ಪ್ಲಾನ್ ಮಾಡಿದ್ದಾರೆ ಎಂದೂ ಹೇಳಿದ್ದ ಎಂದು ಹೇಳಿಕೆ ನೀಡಿದ್ದಾರೆ.

“ಹತ್ಯೆಯ ದಿನ ಲೊಕೇಶ್ ಎಂಬಾತ ಬಲವಂತವಾಗಿ ಶಿವನನ್ನು ಕೆಳಗಡೆ ಕರೆಸಿಕೊಂಡ. ಆ ಸಮಯದಲ್ಲಿ ಅಲ್ಲಿ ಇನ್ನೊಬ್ಬ ವ್ಯಕ್ತಿಯೂ ಇದ್ದ. ಏನೋ ಗಲಾಟೆ ಆಗುತ್ತಿತ್ತು. ನಾನು ಕೆಳಗೆ ಓಡಿ ಬಂದಾಗ ಬಿಕ್ಲು ಶಿವ ಅದಾಗಲೇ ನೆಲಕ್ಕೆ ಬಿದ್ದಿದ್ದ. ಮುಖವನ್ನು ಕೊಚ್ಚಿ ಹಾಕಿದ್ದರು, ತೀವ್ರ ಹಲ್ಲೆ ಮಾಡಿ ಮಾರ್ಮಾಂಗಕ್ಕೂ ಹೊಡೆದಿದ್ದರು. ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ. ನಮ್ಮ ಮಗನ ಹತ್ಯೆಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾರೆ.

ಶಿವನ ಎಚ್ಚರಿಕೆ ವಹಿಸಿದ್ರೂ ತಪ್ಪದ ಕೊಲೆ

ಬಿಕ್ಲು ಶಿವ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ, ಮನೆ ಹೊರಗೆ ಯಾರನ್ನೂ ಭೇಟಿಯಾಗದೆ, ಡ್ರೈವರ್ ಬಂದಾಗ ಮಾತ್ರ ಹೊರಗೆ ಹೋಗುತ್ತಿದ್ದ. ಆದರೂ ಕೊನೆಯ ಕ್ಷಣದಲ್ಲಿ ಅವನು ಮನೆಯ ಬಾಗಿಲು ದಾಟಿದ ತಕ್ಷಣವೇ ಕೊಲೆಯಾಗಿದ್ದಾನೆ. ಈ ಎಲ್ಲ ಮಾಹಿತಿ ಅವನು ಕೊಲೆಗೀಡುವ ಸಾಧ್ಯತೆ ಬಗ್ಗೆ ಮುಂಚಿತ ಎಚ್ಚರಿಕೆ ನೀಡಿದ್ದನ್ನೂ ದೃಢಪಡಿಸುತ್ತವೆ.