ಮೆಜೆಸ್ಟಿಕಲ್ಲಿ ನಾಪತ್ತೆಯಾಗಿದ್ದ ಮಗು ತಮಿಳುನಾಡಿನಲ್ಲಿ ಪತ್ತೆ
ಆರೋಪಿಯನ್ನು ಕರೆ ತರಲು ತಮಿಳುನಾಡಿಗೆ ತೆರಳಿದೆ ಅಧಿಕಾರಿಗಳು| ಬಾಲಕಿ ನಾಪತ್ತೆಯಾಗಿದ್ದರ ಬಗ್ಗೆ ಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು| ಸೆ.18ರಂದು ನಾಪತ್ತೆಯಾಗಿದ್ದ ಐದು ವರ್ಷದ ಹೆಣ್ಣು|
ಬೆಂಗಳೂರು(ಅ.02): ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸೆ.18ರಂದು ನಾಪತ್ತೆಯಾಗಿದ್ದ ಐದು ವರ್ಷದ ಹೆಣ್ಣು ಮಗು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪತ್ತೆಯಾಗಿದ್ದು, ಮಗು ಅಪಹರಣ ಮಾಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಲೋಕಿತಾ ಮತ್ತೆಯಾದ ಮಗು. ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ಜಾನ್ ಜೋಸೆಫ್(55) ಎಂಬಾತ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದ ಲೋಕಿತಾಳನ್ನು ಅವಳ ತಾತಾ ವಿಜಯ್ ಕುಮಾರ್, ಸೆ.18ರಂದು ಕಾಟನ್ಪೇಟೆಯಲ್ಲಿರುವ ತವಕಲ್ ಮಸ್ಕಾನ್ ದರ್ಗಾಕ್ಕೆ ಕರೆದುಕೊಂಡು ಬಂದು ತಾಯಿತ ಕಟ್ಟಿಸಿದ್ದರು.
ಸಿಗರೆಟ್ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಕುದಿವ ಎಣ್ಣೆ ಎರಚಿದ!
ಕಾಕ್ಸ್ಟೌನ್ನಲ್ಲಿರುವ ಮನೆಗೆ ವಾಪಸ್ ಹೋಗಲು ಮಧ್ಯಾಹ್ನ ಒಂದು ಗಂಟೆಯಲ್ಲಿ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಜಾನ್ಜೋಸೆಫ್ ತಮಿಳುನಾಡಿಗೆ ಹೋಗಲು ಮೆಜೆಸ್ಟಿಕ್ಗೆ ಬಂದಿದ್ದ. ನಿಲ್ದಾಣದಲ್ಲಿ ಜೋಸೆಫ್ನ 10 ವರ್ಷದ ಮಗನಿಗೆ ಅಲ್ಲಿಯೇ ಬಸ್ಗಾಗಿ ಅಜ್ಜನೊಂದಿಗೆ ಇದ್ದ ಲೋಕಿತಾ ಎದುರಾಗಿದ್ದು, ಇಬ್ಬರು ಆಟವಾಡುತ್ತಿದ್ದರು. ಬಸ್ ಹತ್ತುವ ವೇಳೆ ಜಾನ್ಜೋಸೆಫ್ ಬಾಲಕಿಯನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಲಕಿಯ ಅಜ್ಜ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಬಾಲಕಿ ಅಜ್ಜ ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಮಗನೊಂದಿಗೆ ತಮಿಳುನಾಡಿನ ಎರಡನೇ ಹೆಂಡತಿ ಮನೆಗೆ ಹೋಗಿದ್ದ ಆರೋಪಿ ಜಾನ್ಜೋಸೆಫ್ ಅಲ್ಲಿಂದ ಕೇರಳಕ್ಕೆ ಹೋಗಲು ಮುಂದಾಗಿದ್ದರು. ತಮಿಳುನಾಡು ಮತ್ತು ಕೇರಳ ಗಡಿಯಲ್ಲಿ ಮಕ್ಕಳ ಬಗ್ಗೆ ಅಲ್ಲಿನ ಪೊಲೀಸರು ಪ್ರಶ್ನೆ ಮಾಡಿದ್ದರು. ಅಲ್ಲಿನ ಪೊಲೀಸರು ಜಾನ್ಜೋಸೆಫ್ ಹಾಗೂ ಮಗುವನ್ನು ಮಾತನಾಡಿಸಿದಾಗ ಅನುಮಾನಗೊಂಡಾಗ ಅಪಹರಣ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಯನ್ನು ಕರೆ ತರಲು ಸಬ್ಇನ್ಸ್ಪೆಕ್ಟರ್ ನೇತೃತ್ವದ ತಂಡ ತಮಿಳುನಾಡಿಗೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.