ಪರಿಸರ ದಿನದಂದು ರಸ್ತೆಪಕ್ಕ ಗಾಂಜಾ ನಾಟಿ ಮಾಡಿದ ಯುವಕರು!
* ವಿಶ್ವ ಪರಿಸರ ದಿನದಂದು ಗಾಂಜಾ ಸಸಿ ನೆಟ್ಟರು
* ಹೆದ್ದಾರಿಯ ಪಕ್ಕದಲ್ಲೆ ಯುವಕರ ಕೆಲಸ
* ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಬಕಾರಿ ಅಧಿಕಾರಿಗಳು
ಕೇರಳ(ಜೂ. 07) ವಿಶ್ವ ಪರಿಸರದ ದಿನ ಗಿಡ ನೆಡಿ, ಪರಿಸರ ಉಳಿಸಿ ಎಂದು ಸಂದೇಶ ಸಾರುತ್ತಿದ್ದರೆ ಇಲ್ಲೊಂದು ಹುಡುಗರ ತಂಡ ಗಾಂಜಾ ಗಿಡ ನೆಟ್ಟಿದೆ!
ಕೇರಳದ ಕೊಲ್ಲಂನಲ್ಲಿ ಕಂದಾಚಿರಾ ಗ್ರಾಮದಿಂದ ಘಟನೆ ವರದಿಯಾಗಿದೆ. ಕೆಲವು ಯುವಕರು ಗಾಂಜಾ ಗಿಡವನ್ನು ರಸ್ತೆ ಪಕ್ಕ ನೆಟ್ಟಿದ್ದು ಅಲ್ಲದೆ ಇದು ನಮ್ಮ ನೆಚ್ಚಿನ ಸಸ್ಯ ಎಂದು ಹೇಳಿದ್ದಾರೆ. ಇವರು ಗಾಂಜಾ ನೆಡುತ್ತಿರುವುದನ್ನು ಕಂಡ ವ್ಯಕ್ತಿ ಅಬಕಾರಿ ದಳಕ್ಕೆ ಮಾಹಿತಿ ನೀಡಿದ್ದಾರೆ.
ಆಂಧ್ರದಿಂದ ಬೆಂಗಳೂರಿಗೆ ಲಾರಿಯಲ್ಲೇ ಬರುತ್ತಿತ್ತು ಗಾಂಜಾ ಲೋಡ್!
ಅಬಕಾರಿ ವಿಶೇಷ ದಳದ ಸಬ್ ಇನ್ಸ್ಪೆಕ್ಟರ್ ಟಿ ರಾಜೀವ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದೆ. 60 ಸೆಂ.ಮೀ ಮತ್ತು 30 ಸೆಂ.ಮೀ ಉದ್ದದ ಸಸಿ ನಾಟಿ ಮಾಡಿರುವುದು ಕಂಡುಬಂದಿದೆ.
ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಆಧಾರದಲ್ಲಿ ಆರಂಭಿಕ ತನಿಖೆ ನಡೆಸಲಾಗಿದೆ. ಕೊಲ್ಲಂ ಅಬಕಾರಿ ವಿಶೇಷ ಸ್ಕ್ವಾಡ್ ಸರ್ಕಲ್ ಇನ್ಸ್ಪೆಕ್ಟರ್ ಐ ನೌಶಾದ್ 'ಗಾಂಜಾಗೆ ವ್ಯಸನಿಯಾದ' ಯುವಕನೊಬ್ಬ ವಿಶ್ವ ಪರಿಸರ ದಿನದಂದು ತನ್ನ ಜತೆ ಕೆಲವರನ್ನು ಕರೆದುಕೊಂಡು ಇಂಥ ಕೆಲಸ ಮಾಡಿದ್ದಾನೆ ಎಂದಿದ್ದಾರೆ. ಆದರೆ ಯಾರನ್ನೂ ಬಂಧಿಸಲಾಗಿಲ್ಲ.
ಇದೇ ರೀತಿ ಮಂಗಾದ್ ಬೈಪಾಸ್ ಸೇತುವೆಯ ಕೆಳಗೆ ಗಾಂಜಾ ಸಸ್ಯಗಳನ್ನು ನಾಟಿ ಮಾಡಲಾಗಿದೆ ಎಂಬ ಮಾಹಿತಿಯೂ ಬಂದಿದೆ. ಆದರೆ ಅಲ್ಲಿಗೆ ತೆರಳಿ ಪರಿಶೀಲನೆ ಮಾಡಿದಾಗ ಗಾಂಜಾ ಸಸಿ ಸಿಕ್ಕಿಲ್ಲ.
ಈ ವರ್ಷ ಏಪ್ರಿಲ್ ನಲ್ಲಿ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿಯೇ ಗಾಂಜಾ ಸಸಿಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಮಾಹಿತಿ ಕಲೆಹಾಕಲಾಗುತ್ತಿದ್ದು ಆರೋಪಿಗಳ ಜಾಡು ಬಯಲು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.