ಹಣಕ್ಕಾಗಿ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ವೈದ್ಯಕೀಯ ಉಪಕರಣ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ಇಬ್ಬರು ನೌಕರರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ನ.20) ಹಣಕ್ಕಾಗಿ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ವೈದ್ಯಕೀಯ ಉಪಕರಣ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ಇಬ್ಬರು ನೌಕರರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೆಂಗೇರಿ ಸಮೀಪದ ನಿವಾಸಿ ಹೇಮಲತಾ ಹಾಗೂ ಲಗ್ಗೆರಿಯ ಎನ್‌.ಸಿ.ಮಂಜುನಾಥ್ ಬಂಧಿತರಾಗಿದ್ದು, ಆರೋಪಿಗಳಿಂದ ₹10 ಲಕ್ಷ ಮೌಲ್ಯದ ಅಲ್ಟ್ರಾ ಸೌಂಡ್ ಸ್ಕಾನಿಂಗ್ ಮಷಿನ್‌ನ ಎರಡು ಪ್ರೋಬ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ತಿಂಗಳ ಹಿಂದೆ ಕುಮಾರಸ್ವಾಮಿ ಲೇಔಟ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರೋಬ್ಸ್‌ ಕಳ್ಳತನವಾಗಿರುವ ಬಗ್ಗೆ ಆಸ್ಪತ್ರೆಯ ವೈದ್ಯೆ ಗಾಯಿತ್ರಿ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಹೇಮಲತಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಈಕೆ ನೀಡಿದ ಮಾಹಿತಿ ಮೇರೆಗೆ ಮಂಜುನಾಥ್ ಸಹ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಈ ಮೊದಲು ಕುಮಾರಸ್ವಾಮಿ ಲೇಔಟ್‌ನ ವಾಸ ಆಸ್ಪತ್ರೆಯಲ್ಲಿ ಮಂಜುನಾಥ್ ಹಾಗೂ ಹೇಮಲತಾ ಕೆಲಸ ಮಾಡುತ್ತಿದ್ದರು. ಆನಂತರ ಅಲ್ಲಿ ನೌಕರಿ ತೊರೆದು ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಮಂಜುನಾಥ್‌ ಕೆಲಸಕ್ಕೆ ಸೇರಿದ್ದರು. ಇತ್ತೀಚಿಗೆ ಹಣಕಾಸು ಸಮಸ್ಯೆಗೆ ಆರೋಪಿಗಳು ಸಿಲುಕಿದ್ದರು. ಆಗ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣ ಕಳವಿಗೆ ಹೇಮಲತಾ ಯೋಜಿಸಿದ್ದು, ಇದಕ್ಕೆ ಮಂಜುನಾಥ್ ಸಹಕಾರ ಕೊಟ್ಟಿದ್ದ.

ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಬಂದಿದೆಯಾ? ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಪತ್ತೆ!

ಅಂತೆಯೇ ಅ.10 ರಂದು ರಾತ್ರಿ ರೇಡಿಯೋಲಾಜಿ ವಿಭಾಗದಲ್ಲಿ ರಾತ್ರಿ ಪಾಳಿ ಕೆಲಸ ಮುಗಿದ ಬಳಿಕ ಅಲ್ಲಿದ್ದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್‌ ಮಷಿನ್‌ನ ಎರಡು ಪ್ರೋಬ್ಸ್‌ಗಳನ್ನು ಹೇಮಲತಾ ಕಳವು ಮಾಡಿದ್ದಳು. ಬಳಿಕ ಅವುಗಳನ್ನು ಮಂಜುನಾಥ್ ಮೂಲಕ ವಿಲೇವಾರಿ ಯತ್ನಿಸಿದ್ದಳು. ದೂರು ದಾಖಲಾದ ಹದಿನೈದು ದಿನಗಳಿಗೆ ದಿಢೀರನೇ ಹೇಮಲತಾ ಕೆಲಸ ತೊರೆದಿದ್ದಳು. ಇದರಿಂದ ಶಂಕೆಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಕ್ಷ್ಮೀ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಪ್ರಕರಣ: ವಿಚಾರಣೆ ವೇಳೆ ಅಪ್ರಾಪ್ತ ಬಾಲಕನ ಹೇಳಿಕೆಗೆ ಪೊಲೀಸರೇ ಶಾಕ್

ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಷಿನ್‌ ಕೋಟ್ಯಂತರ ಮೌಲ್ಯದ್ದಾಗಿದ್ದು, ಅದರ ಬಿಡಿಭಾಗಗಳು ಕೂಡ ದುಬಾರಿ ಬೆಲೆ ಬಾಳುತ್ತವೆ. ಹೀಗಾಗಿ ಎರಡು ಪ್ರೋಬ್ಸ್‌ಗಳನ್ನು ಕಳವು ಮಾಡಿ ಅವುಗಳನ್ನು ಮಾರಾಟಕ್ಕೆ ನಗರದ ಹಲವು ಆಸ್ಪತ್ರೆಗಳನ್ನು ಆರೋಪಿಗಳು ಸಂಪರ್ಕಿಸಿದ್ದರು. ಆದರೆ ಯಾರೂ ಖರೀದಿಸಿರಲಿಲ್ಲ. ಕೊನೆಗೆ ಹೊರ ರಾಜ್ಯದ ಆಸ್ಪತ್ರೆಗಳನ್ನು ಸಂಪರ್ಕಿಸಿ ಮಾರಾಟಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.