ವಿವಾಹದ ಕೇವಲ ಒಂದು ವಾರದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅನಾಹುತದಲ್ಲಿ ಹೊಸದಾಗಿ ಮದುವೆಯಾದ  ಚೆನ್ನೈನ ವೈದ್ಯ ದಂಪತಿ ದುರಂತ ಅಂತ್ಯ ಕಂಡಿದ್ದಾರೆ.  

 ಚೆನ್ನೈ(ಜೂ.11): ವಿವಾಹದ ಕೇವಲ ಒಂದು ವಾರದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅನಾಹುತದಲ್ಲಿ ಹೊಸದಾಗಿ ಮದುವೆಯಾದ ಚೆನ್ನೈನ (Chennai) ವೈದ್ಯ ದಂಪತಿ (doctor couple) ದುರಂತ ಅಂತ್ಯ ಕಂಡಿದ್ದಾರೆ. ಹನಿಮೂನ್ (honeymoon) ನಲ್ಲಿದ್ದ ಹೊಸ ಜೋಡಿ ಶುಕ್ರವಾರ ಸ್ಪೀಡ್‌ಬೋಟ್‌ನಲ್ಲಿ ಫೋಟೋಶೂಟ್ ಮಾಡುತ್ತಿದ್ದಾಗ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ವಿವಾಹವಾದ ವೈದ್ಯ ದಂಪತಿ ಲೋಕೇಶ್ವರನ್ (Lokeshwaran) ಮತ್ತು ವಿಬುಷ್ನಿಯಾ (Vibushniya) ಮೃತ ದುದೈವಿಗಳಾಗಿದ್ದು, ಇವರು ಜೂನ್ 1 ರಂದು ಪೂನಮಲ್ಲೆಯಲ್ಲಿ ವಿವಾಹವಾಗಿದ್ದರು. ಸೇಲಂ ಜಿಲ್ಲೆಯ ವೈದ್ಯ ಲೋಕೇಶ್ವರನ್ ಮತ್ತು ಚೆನ್ನೈನ ಪೂಂತಮಲ್ಲಿಯ ವಿಬುಷ್ನಿಯಾ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ವೈದ್ಯರು ತಮ್ಮ ಮನೆಯವರಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಖುಷಿಯಿಂದ ಮದುವೆಯಾಗಿದ್ದರು.

ಇತ್ತೀಚೆಗೆ ಮಾಲ್ಡೀವ್ಸ್, ಬಾಲಿಯಂತಹ ದ್ವೀಪಗಳಿಗೆ ನವವಿವಾಹಿತರು ಹನಿಮೂನ್ ಹೋಗುವುದು ಟ್ರೆಂಡ್ ಆಗಿರುವಾಗಲೇ ಇಂಡೋನೇಷ್ಯಾದ ಬಾಲಿ (Bali) ದ್ವೀಪಕ್ಕೆ ವೈದ್ಯ ದಂಪತಿ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದಾರೆ. ಅದರಂತೆ ದಂಪತಿ ಬಾಲಿ ದ್ವೀಪದಲ್ಲಿ ಸ್ಪೀಡ್ ಮೋಟಾರ್ ಬೋಟ್ (speedboat) ಮೂಲಕ ತಮ್ಮ ಫೋಟೋಶೂಟ್ (photoshoot) ಮಾಡಲು ನಿರ್ಧರಿಸಿದ್ದರು.

Karnataka crime : ದೇವರಮನೆಗುಡ್ಡದಲ್ಲಿ ಬಂಟ್ವಾಳ ಮೂಲದ ಯುವಕನ ಶವ ಪತ್ತೆ

ಆದರೆ ನವ ದಂಪತಿ ಲೋಕೇಶ್ವರನ್ ಮತ್ತು ವಿಬುಷ್ನಿಯಾ ಅವರಿದ್ದ ಮೋಟಾರ್ ಬೋಟ್ ಅಪಘಾತಕ್ಕೀಡಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಣಯ ಪಕ್ಷಿಗಳು ಸಾವನ್ನಪ್ಪಿರುರುವುದು ಎರಡು ಕುಟುಂಬಗಳಿಗೆ ತೀವ್ರ ಆಘಾತ ತಂದಿದೆ.

ಮೃತದೇಹಗಳನ್ನು ಭಾರತಕ್ಕೆ ಮರಳಿ ತರಲು ಬಾಲಿಗೆ ಕುಟುಂಬಗಳು ತೆರಳಿದ್ದರು. ಅಲ್ಲಿನ ಸ್ಥಳೀಯ ಪೊಲೀಸರು ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ ನಂತರ ಶುಕ್ರವಾರ ಅಪಘಾತ ಸಂಭವಿಸಿದೆ ಎಂದು ವಿಷಯ ತಿಳಿದಿದೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಲೋಕೇಶ್ವರನ್ ಮೃತದೇಹ ಪತ್ತೆಯಾಗಿದ್ದರೆ, ಶನಿವಾರ ಬೆಳಗ್ಗೆ ವಿಬುಷ್ನಿಯಾ ಶವ ಪತ್ತೆಯಾಗಿದೆ. 

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ

ವಿಬುಷ್ನಿಯಾ ಕುಟುಂಬವು ಪೂನಮಲ್ಲೆ ಸಮೀಪದ ಸೆನೀರ್ಕುಪ್ಪಂನಲ್ಲಿ ವಾಸಿಸುತ್ತಿದೆ. ಕೊಯಮತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಈಕೆ ಎಂಬಿಬಿಎಸ್ ಮುಗಿಸಿದ್ದಳು. ಲೋಕೇಶ್ವರನ್ ಸೇಲಂ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೂಲಕ ನವದಂಪತಿಗಳ ಮೃತದೇಹಗಳನ್ನು ಚೆನ್ನೈಗೆ ತರಲು ಮೃತ ದಂಪತಿ ಸಂಬಂಧಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯವನ್ನು ಕೋರಿದ್ದಾರೆ.

ಇಂಡೋನೇಷ್ಯಾದಿಂದ ಚೆನ್ನೈಗೆ ನೇರ ವಿಮಾನ ಇಲ್ಲದ ಕಾರಣ ಮೃತದೇಹಗಳನ್ನು ಮಲೇಷ್ಯಾಕ್ಕೆ ತಂದು ತಮಿಳುನಾಡಿಗೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂತ್ರಸ್ತರ ಸಂಬಂಧಿಕರು ತಿಳಿಸಿದ್ದಾರೆ. ದುರಂತದ ಸುದ್ದಿ ತಿಳಿದ ಬಳಿಕ ಅವರ ಹುಟ್ಟೂರಲ್ಲಿ ಕತ್ತಲೆ ಕವಿದಿದೆ. ನವದಂಪತಿಯ ಅಕಾಲಿಕ ನಿಧನ ಬಂಧುಮಿತ್ರರಲ್ಲಿ ದುಃಖವನ್ನುಂಟು ಮಾಡಿದೆ. ಬಾಲಿಯಿಂದ ವೈದ್ಯ ದಂಪತಿ ಮರಳಿ ಬರುತ್ತಿದ್ದನ್ನು ಕಾಯುತ್ತಿದ್ದ ಬಂಧು, ಬಳಗ ನೆರೆಹೊರೆಯವರು ದಂಪತಿಗಳ ವಿವಾಹವನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.