ಕೆಜಿಗಟ್ಟಲೆ ಚಿನ್ನವನ್ನು ಮಾರಾಟ ಮಾಡಲು ಯತ್ನಿಸಿದ್ದ ಖತರ್ನಾಕ್ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು, (ಜೂನ್.13):  1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ವೆಸ್ಟ್ ಬೆಂಗಾಲ್ ಮೂಲದ ಉತ್ತಮ್ ದೋಲಾಯಿ ಬಂಧಿತ ಆರೋಪಿ. ಬಂಧಿತನಿಂದ 45 ಲಕ್ಷ ರೂ. ಮೌಲ್ಯದ 1 ಕೆಜಿ 16 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ನಕಲಿ ಆ್ಯಪ್‌ ಬಳಸಿ ಓಲಾ ಕಂಪನಿಗೆ ಟೋಪಿ ಹಾಕಿದ ಖದೀಮ..!

ಆರೋಪಿ ಗಟ್ಟಿ ಚಿನ್ನವನ್ನು ಒಡವೆ ಮಾಡುವ ಕೆಲಸ ಮಾಡುತ್ತಿದ್ದು, ನಾಲ್ಕೈದು ವರ್ಷಗಳಿಂದ ನಗರದ ಕಂಠೀರವ ಸ್ಟುಡಿಯೋ ಬಳಿ ಇರುವ ಎಸ್‌.ಕೆ. ಜ್ಯುವೆಲರಿ ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿದ್ದ.

ಈ ಮಧ್ಯೆ ಮೇ.19ರಂದು ಒಂದು ಕೆ.ಜಿ. ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಬಳಿಕ ಅಂಗಡಿ ಮಾಲೀಕ ಒಡವೆ ಕಾಣೆಯಾಗಿರುವುದನ್ನು ತಿಳಿದು, ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿ ಉತ್ತಮ್ ದೋಚಿರುವುದು ತಿಳಿದುಬಂದಿದೆ. ಆದ್ರೆ, ಅವರು ದೂರು ದಾಖಲಿಸದೇ ಆರೋಪಿಗಾಗಿ ಹುಡುಕಾಟ ನಡೆಸಿದ್ದರು.

ಪೊಲೀಸ್ರಿಗೆ ಸಿಕ್ಕಿಬಿದ್ದ ಕಳ್ಳ

ಆರೋಪಿ ಉತ್ತಮ್ ದೋಲಾಯಿ ನಂದಿನಿ ಲೇಔಟ್‍ನಲ್ಲಿ ಇದೇ ಜೂನ್ 8ರಂದು ರಾತ್ರಿ ಅನುಮಾನಸ್ಪದವಾಗಿ ಜ್ಯುವೆಲರಿ ಶಾಪ್ ಬಳಿ ಓಡಾಡುತ್ತಿದ್ದ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿದಾಗ ಆರೋಪಿಯ ಜೇಬಿನಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. 

ಚಿನ್ನ ಸಿಕ್ಕ ಕೂಡಲೇ ಪೊಲೀಸರು ಪ್ರಶ್ನಿಸಿದಾಗ ಉತ್ತಮ್ ತಬ್ಬಿಬ್ಬಾಗಿದ್ದ. ತಕ್ಷಣವೇ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣೆಯ ಪೊಲೀಸರು ಆರೋಪಿಯನ್ನ ಸದ್ಯ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತಮ್ ಬೆಂಗಳೂರಿನ ವಿವಿಧ ಕಡೆ ಕಳ್ಳತನ ಮಾಡಿರಬಹುದು ಎಂದು ಶಂಕಿಸಲಾಗಿದೆ.