Gangavathi ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ 2018ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವರ ಸೇರಿ ನಾಲ್ವರಿಗೆ ದಂಡ ವಿಧಿಸಲಾಗಿದೆ.
ಗಂಗಾವತಿ (ಜೂ.17): ಕಳೆದ 8 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜರುಗಿದ ಅಪ್ರಾಪ್ತ ಬಾಲಕಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯವು ನಾಲ್ಕು ಜನರಿಗೆ 2 ವರ್ಷ ಜೈಲು ಮತ್ತು ತಲಾ 10 ಸಾವಿರ ರು ದಂಡ ವಿಧಿಸಿ ತೀರ್ಪು ನೀಡಿದೆ.
2018ರಲ್ಲಿ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗುಡದಪ್ಪ ಎನ್ನುವವರ ಜೊತೆ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು. ಆಗಿನ ಸಿಪಿಐ ಆಗಿದ್ದ ಪ್ರಕಾಶ ಮಾಳೆ ಅವರು ನ್ಯಾಯಲಯಕ್ಕೆ ದೋಷರೋಪಣಪಟ್ಟಿ ನೀಡಿದ್ದರು.
ಮಹತ್ವದ ತೀರ್ಪು
ಈ ಪ್ರಕರವನ್ನು ಕೈಗೆತ್ತಿಕೊಂಡಿದ್ದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯದ ನ್ಯಾಯಧೀಶರಾದ ನಾಗೇಶ ಪಾಟೀಲ್ ಅವರು ಸಾಕ್ಷಾಧಾರಗಳಿಂದ ವಿಚಾರಣೆ ಕೈಗೊಂಡಿದ್ದ ಸಂದರ್ಭದಲ್ಲಿ ದೃಢ ಪಟ್ಟಿದ್ದರಿದಂದ ವಿವಾಹವಾಗಿದ್ದ ಗುಡದಪ್ಪ, ಈತನ ತಂದೆ ಮರಿಯಪ್ಪ, ತಾಯಿ ಹುಲಿಗೆಮ್ಮ ಮತ್ತು ಬಾಲಕಿ ತಾಯಿ ಚೆನ್ನಮ್ಮ ಅವರು ದೋಷಿಗಳೆಂದು ತೀರ್ಪ ನೀಡಿ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು.


