ಪ್ರೇಮ ವಿವಾಹದ ವೈಷಮ್ಯ ಕೊಲೆ​ಯಲ್ಲಿ ಅಂತ್ಯ| ಆರೋ​ಪಿ​ಗಳು ಪರಾ​ರಿ| ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಘಟನೆ| ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ| ಆರೋಪಿಗಳ ಪತ್ತೆಗಾಗಿ  ಶೋಧ ಕಾರ್ಯ| ಘಟನಾ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌|

ಸಿಂಧನೂರು(ಜು.12): ನಗರದ ಸುಕಾಲಪೇಟೆಯಲ್ಲಿ ಶನಿವಾರ ಮಧ್ಯಾಹ್ನ ನಾಲ್ವರ ಕೊಲೆ ನಡೆ​ದಿ​ರುವ ಘಟನೆ ಸಿಂಧ​ನೂ​ರಿನ ಜನ​ತೆ​ಯನ್ನು ಬೆಚ್ಚಿಬೀಳಿ​ಸಿ​ದೆ. ಸುಮಿತ್ರಮ್ಮ ಈರಪ್ಪ(55), ಶ್ರೀದೇವಿ ಯಲ್ಲಪ್ಪ (30), ಹನುಮೇಶ ಈರಪ್ಪ (40), ನಾಗರಾಜ ಈರಪ್ಪ (38) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಈರಪ್ಪ ಕೋಣದವರಿಗೆ ತೀವ್ರಗಾಯಗಳಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್‌ಗೆ ಕಳುಹಿಸಿಲಾಗಿದೆ. ತಾಯಮ್ಮ ಮತ್ತು ರೇವತಿ ಗಾಯಗೊಂಡಿದ್ದು ಅವರಿಗೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈಷಮ್ಯ ಕೊಲೆ​ಯಲ್ಲಿ ಅಂತ್ಯ:

9 ತಿಂಗಳ ಹಿಂದೆ ಒಂದೇ ಕೋಮಿನ ಎರಡು ಕುಟುಂಬದ ವಿರೋಧದ ಮಧ್ಯೆ ನಡೆದ ಪ್ರೇಮ ವಿವಾಹದ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ನಗರದ ಸುಕಾಲಪೇಟೆಯ ಈರಪ್ಪ ಕೋಣದ್‌ ಅವರ ಪುತ್ರ ಮೌನೇಶ ಅದೇ ಓಣಿಯ ಸಣ್ಣ ಫಕೀರಪ್ಪನ ಪುತ್ರಿ ಮಂಜು​ಳಾರನ್ನು ಕಳೆದ 9 ತಿಂಗಳ ಹಿಂದೆ ಎರಡು ಮನೆಗಳವರ ತೀವ್ರ ವಿರೋಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ತೀವ್ರ ವಾಗ್ವಾದ, ಜಗಳ ನಡೆಯುತ್ತಿದ್ದವು.
ಶನಿವಾರ ಇದ್ದಕ್ಕಿಂದ್ದಂತೆ ದೊಡ್ಡ ಫಕೀರಪ್ಪ ಕೋಣದ್‌ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್‌ ಮನೆಗೆ ನುಗ್ಗಿ ಎಲ್ಲ​ರನ್ನೂ ಅಟ್ಟಾಡಿಸಿ ನಾಲ್ವ​ರನ್ನು ಕೊಲೆ ಮಾಡ​ಲಾ​ಗಿದೆ. ಮನೆಯ ಮುಂದೆ ಮೂವರನ್ನು ಹಾಗೂ ನಾಲ್ಕು ಮನೆಗಳ ಅಂತ​ರ​ದಲ್ಲಿ ಓರ್ವನನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಈ ನಡುವೆ ಮೌನೇಶ ಮತ್ತು ಮಂಜುಳಾ ಘಟನೆ ನಡೆ​ಯುವ ಮುನ್ನವೇ ಮಾಹಿತಿ ಪಡೆದು ಇಬ್ಬರು ಶಹರ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರ ಆಶ್ರಯ ಪಡೆದಿದ್ದಾರೆ ಎಂದು ಡಿವೈಎಸ್‌ಪಿ ವಿಶ್ವನಾಥರಾವ್‌ ಕುಲಕರ್ಣಿ ತಿಳಿಸಿದ್ದಾರೆ.

BJP ಬೆಂಬಲಿತ ಪಂಚಾಯತ್ ಸದಸ್ಯನ ಮರ್ಡರ್..!

ಜನಜಂಗುಳಿ:

ಹಾಡಹಗಲೇ ಸುಕಾಲಪೇಟೆಯಲ್ಲಿ ನಾಲ್ವರ ಕೊಲೆಯಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ನಗರದ ವಿವಿಧ ವಾರ್ಡ್‌ಗಳ ನೂರಾರು ಜನ ಘಟನಾ ಸ್ಥಳಕ್ಕೆ ಬಂದು ಶವಗಳ ಫೋಟೋ, ವೀಡಿಯೋಗಳನ್ನು ಮಾಡುತ್ತಿರುವುದು ಕಂಡುಬಂತು. ಸಾರ್ವಜನಿಕರ ಜನದಟ್ಟಣೆ ಹೆಚ್ಚುತ್ತಿದ್ದಂತೆ ಪೊಲೀಸರು ಜನರನ್ನು ಘಟನಾ ಸ್ಥಳದಿಂದ ಓಡಿಸಿ, ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಸಾಗಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆರೋಪಿಗಳ ಶೋಧ ಕಾರ್ಯ ನಡೆದಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಸುಕಾಲಪೇಟೆಯ ಗಲ್ಲಿಗಲ್ಲಿಗಳಲ್ಲಿ ಜನ ಭಯಭೀತರಾಗಿದ್ದಾರೆ.