ದುಬೈನಲ್ಲಿ ಐಪಿಎಲ್ ಹಬ್ಬ ಶುರುವಾದ ಬಳಿಕ ಬೆಂಗಳೂರಲ್ಲಿ ಬೆಟ್ಟಿಂಗ್ ದಂಧೆಯೂ ಆರಂಭ| ಬೆಟ್ಟಿಂಗ್ ನಿಯಂತ್ರಣಕ್ಕೆ ಸಾಕಷ್ಟು ಕಸರತ್ತು ನಡೆಸುತ್ತಿರುವ ಸಿಸಿಬಿ ಪೊಲೀಸರು| ಬೆಟ್ಟಿಂಗ್ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ|
ಬೆಂಗಳೂರು(ಅ.18): ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಸಿಸಿಬಿ ದಾಳಿ ಮುಂದುವರೆದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಐವರು ದಂಧೆಕೋರರನ್ನು ಸೆರೆ ಹಿಡಿದು 21 ಲಕ್ಷ ನಗದು ಹಾಗೂ 15 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ವೈಟ್ಫೀಲ್ಡ್ ಹತ್ತಿರದ ದೊಮ್ಮರಪಾಳ್ಯದ ಎಸ್.ಗಿರೀಶ್ ಬಂಧಿತನಾಗಿದ್ದು, ಆರೋಪಿಯಿಂದ 5 ಲಕ್ಷ ಜಪ್ತಿ ಮಾಡಲಾಗಿದೆ. ಈತ ಮೊಬೈಲ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ. ಇಮ್ಮಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಗ್ರಾಹಕರನ್ನು ಕರೆದು ಪಣಕ್ಕೆ ಹಣ ಕಟ್ಟಿಸಿಕೊಳ್ಳುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆ : 18 ಮಂದಿ ಸೆರೆ
ಕೆ.ಆರ್.ಪುರ ಬಳಿ ಬಲರಾಮ್ ರೆಡ್ಡಿ ಹಾಗೂ ನಾಗೇಂದ್ರ ಬಲೆಗೆ ಬಿದ್ದಿದ್ದಾರೆ. ಅವರಿಂದ 10.5 ಲಕ್ಷ ಹಣ ಹಾಗೂ 12 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ವೈಟ್ಫೀಲ್ಡ್ನ ನಾಗೊಂಡನಹಳ್ಳಿಯ ಲೋಕೇಶ್ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ 2 ಲಕ್ಷ ಹಣ ಹಾಗೂ ಮೊಬೈಲ್ ವಶವಾಗಿದೆ. ವರ್ತೂರು ಸಮೀಪ ಮತ್ತೊಬ್ಬ ಸೆರೆಯಾಗಿದ್ದಾನೆ. ಆರ್ಕಿಡ್ ಅಪಾರ್ಟ್ಮೆಂಟ್ ಸಮೀಪ ದಂಧೆ ನಡೆಸುವಾಗ ಜಮೀರ್ ಅಹಮ್ಮದ್ ಸಿಕ್ಕಿಬಿದ್ದಿದ್ದಾನೆ.
ಆರೋಪಿಯಿಂದ 4 ಲಕ್ಷ ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಶಾರ್ಜಾದಲ್ಲಿ ಐಪಿಎಲ್ ಹಬ್ಬ ಶುರುವಾದ ಬಳಿಕ ನಗರದಲ್ಲಿ ಬೆಟ್ಟಿಂಗ್ ದಂಧೆಯೂ ಆರಂಭವಾಗಿದೆ. ಬೆಟ್ಟಿಂಗ್ ನಿಯಂತ್ರಣಕ್ಕೆ ಸಾಕಷ್ಟುಕಸರತ್ತು ನಡೆಸಿರುವ ಸಿಸಿಬಿ ಪೊಲೀಸರು, ಬೆಟ್ಟಿಂಗ್ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
