ಅಂಗಡಿಯವರು ಸಾಲ ಕೊಡಲಿಲ್ಲವೆಂದು ನೊಂದು ಆತ್ಮಹತ್ಯೆ?

ಕೊಪ್ಪಳ(ಜು.31): ಸಾಲ ಕೊಡಲಿಲ್ಲ ಎಂದು ಮನನೊಂದು ರೈತರೊಬ್ಬರು ಎಪಿಎಂಸಿಯಲ್ಲಿರುವ ಅಂಗಡಿಯೊಂದರಲ್ಲಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಆದರೆ ಅಂಗಡಿಯವರು ಇದನ್ನು ನಿರಾಕರಿಸಿದ್ದು, ಆತ ವಿಪರೀತ ಮದ್ಯ ಸೇವಿಸಿದ್ದ. ಆತನನ್ನು ನಾವೇ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಸ್ಪಷ್ಪಪಡಿಸಿದ್ದಾರೆ. ತಾಲೂಕಿನ ಹನುಕುಂಟಿ ಗ್ರಾಮದ ರವಿ ಲಕ್ಕುಂಡಿ(32) ಮೃತಪಟ್ಟ ರೈತ. ರವಿ ಲಕ್ಕುಂಡಿ ಅವರು ಮೆಕ್ಕೆಜೋಳದ ಫಸಲನ್ನು ಎಪಿಎಂಸಿಯಲ್ಲಿರುವ ಪಾರಸ್‌ ಟ್ರೇಡಿಂಗ್‌ ಕಂಪನಿಯ ಅಂಗಡಿಗೆ ಗುರುವಾರ ಮಾರಾಟ ಮಾಡಿದ್ದಾರೆ. ಅಂಗಡಿ ಮಾಲೀಕರು ನಿಮ್ಮ ಸಾಲ ಮತ್ತು ಫಸಲು ಹಣ ಎಲ್ಲವೂ ಲೆಕ್ಕ ಚುಕ್ತಾ ಆಗಿದೆ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಮರುಸಾಲ ನೀಡುವಂತೆ ರೈತ ಅಂಗಡಿ ಮಾಲೀಕರನ್ನು ಕೇಳಿದ್ದಾರೆ. ಆದರೆ ಮಾಲೀಕರು ನಿರಾಕರಿಸಿದ್ದಾರೆ. ಇದರಿಂದ ರೈತ ನೊಂದಿದ್ದಾರೆ. ಹೀಗಾಗಿ ಅಂಗಡಿಯಲ್ಲೇ ವಿಷ ಸೇವಿಸಿದ್ದಾನೆ ಎನ್ನಲಾಗಿದ್ದು, ಅಂಗಡಿಯವರೇ ಆತನನ್ನು ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್‌ ಮೂಲಕ ರವಾನಿಸಿದ್ದಾರೆ. ಶುಕ್ರವಾರ ರಾತ್ರಿ ರೈತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Hubballi: ಮಗ ಜೈಲುಪಾಲಾದ್ದರಿಂದ ನೊಂದು ತಾಯಿ ಆತ್ಮಹತ್ಯೆ

ಅಂಗಡಿ ಮಾಲೀಕರ ಮುಂದೆ ರೈತ ಮುಖಂಡರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಂಗಡಿ ಮಾಲೀಕರೇ ರವಿಯ ಸಾವಿಗೆ ಕಾರಣ ಎಂದು ಸಂಬಂಧಿಗಳು ಆರೋಪಿಸಿದರು. ನಮಗೆ ನ್ಯಾಯ ಹಾಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರು ಭೇಟಿ ನೀಡಿ ರಾಜಿ ಸಂಧಾನ ಮಾಡುವ ಯತ್ನವೂ ನಡೆಯಿತು. ಇದಕ್ಕೆ ವಿರೋಧ ವ್ಯಕ್ತವಾಯಿತು.

ಜಿಲ್ಲಾಸ್ಪತ್ರೆಯ ಮೃತ ರೈತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಕೊಪ್ಪಳ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.

ಪರಸಂಗ ಮಾಡಿ ಕೆಟ್ಟ ಗೃಹಿಣಿ: ನೇಣಿಗೆ ಶರಣಾದ ಝುಂಬಾ ಟ್ರೈನರ್, ಪ್ರಿಯಕರನೂ ಆತ್ಮಹತ್ಯೆ

ಕಳೆದ 4 ವರ್ಷದಿಂದ ನಮ್ಮ ಅಂಗಡಿಯಲ್ಲಿ ರೈತನು ಫಸಲು ಮಾರಾಟ ಮಾಡುವ ವಹಿವಾಟು ನಡೆಸಿದ್ದರು. ನಮ್ಮ ಬಳಿ ಆತನ ಸಾಲವಿತ್ತು. ಮೆಕ್ಕೆಜೋಳದ ಫಸಲು ನಮಗೆ ಪೂರೈಸಿದ್ದ. ಸಾಲವು ಚುಕ್ತಾ ಆಗಿತ್ತು. ಮರುಸಾಲ ನೀಡುವಂತೆ ಕೇಳಿದ್ದ. ನಾವು ಬೇರೊಬ್ಬರನ್ನು ಸಾಕ್ಷಿಗಾಗಿ ಕರೆತರುವಂತೆ ಹೇಳಿದ್ದೆವು. ಅದಕ್ಕೆ ಆತ ನಿರಾಕರಿಸಿದ್ದ. ಎಪಿಎಂಸಿ ಆವರಣದಲ್ಲಿ ವಿಪರೀತ ಮದ್ಯ ಸೇವಿಸಿ ಮಲಗಿದ್ದ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನಾವು ಏನೆಂದು ಮತ್ತು ಏತಕ್ಕೆ ಆತನಿಗೆ ಪರಿಹಾರ ಕೊಡಬೇಕು? ಅಂತ ಪಾರಸ್‌ ಟ್ರೇಡಿಂಗ್‌ ಕಂಪನಿ ಮಾಲೀಕ ಜವಾಹರಲಾಲ್‌ ಜೈನ್‌ ಹೇಳಿದ್ದಾರೆ. 

ಪಾರಸ್‌ ಅಂಗಡಿಯಲ್ಲಿ ನಮ್ಮ ಅಳಿಯ ವ್ಯವಹಾರ ಮಾಡಿದ್ದ. ಅಂಗಡಿಯವರು ಹೆಚ್ಚುಕಡಿಮೆ ಲೆಕ್ಕ ಹಚ್ಚಿ ಫಸಲಿನ ಹಣ ಕೊಟ್ಟಿಲ್ಲ. ಇದರಿಂದ ಅಳಿಯ ಮನನೊಂದಿದ್ದಾನೆ. ಅಂಗಡಿಯಲ್ಲಿ ಸಾಲ ಎಷ್ಟಿತ್ತು ಗೊತ್ತಿಲ್ಲ. ಈತನಿಗೆ ವಿಷ ಕುಡಿಸಿ ಸಾವು ಸಂಭವಿಸುವಂತೆ ಮಾಡಿದ್ದಾರೆ. ಆತನ ಕುಟುಂಬಕ್ಕೆ ನ್ಯಾಯ, ಪರಿಹಾರ ಸಿಗಬೇಕು ಅಂತ ರೈತನ ಸಂಬಂಧಿ ರಮೇಶ ತಿಳಿಸಿದ್ದಾರೆ.