ವಾಮಾಚಾರ ಶಂಕೆ: ಮಾನವ ಮಲ ಸೇವಿಸುವಂತೆ ಕುಟುಂಬಕ್ಕೆ ಚಿತ್ರಹಿಂಸೆ
Crime News: ವಾಮಾಚಾರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಒಂದೇ ಕುಟುಂಬದ ನಾಲ್ವರಿಗೆ ಗ್ರಾಮಸ್ಥರು ಮಾನವ ಮಲವನ್ನು ಸೇವಿಸುವಂತೆ ಒತ್ತಾಯಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ
ಜಾರ್ಖಂಡ್ (ಸೆ. 26): ವಾಮಾಚಾರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಗ್ರಾಮಸ್ಥರು ಮಾನವ ಮಲವನ್ನು ಸೇವಿಸುವಂತೆ ಒತ್ತಾಯಿಸಿರುವ ಘಟನೆ ಜಾರ್ಖಂಡ್ನ (Jharkhand) ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ ಕುಟುಂಬದ ನಾಲ್ವರಿಗೆ ಕಾದ ಕಬ್ಬಿಣದ ರಾಡ್ನಿಂದ ಚಿತ್ರಹಿಂಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಮ್ಕಾ ಜಿಲ್ಲೆಯ ಸರಿಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ವರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಆರು ಜನರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ.
"ಶನಿವಾರ ರಾತ್ರಿಯಿಂದ ನಾಲ್ಕು ಜನರಿಗೆ ಚಿತ್ರಹಿಂಸೆ ನೀಡಲಾಗಿದೆ. ಭಾನುವಾರವೂ ಗ್ರಾಮಸ್ಥರು ಚಿತ್ರಹಿಂಸೆ ಮುಂದುವರೆಸಿದ್ದಾರೆ. ಕೆಲವು ಗ್ರಾಮಸ್ಥರು ಮೊದಲು ಅವರನ್ನು ಮಾಟಗಾರ್ತಿಯರು ಎಂದು ಭಾವಿಸಿದ ನಂತರ ಈ ಘಟನೆ ನಡೆದಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಬಳಿಕ ಗ್ರಾಮಸ್ಥರು ಮಾನವ ಮಲವನ್ನು ಬಾಟಲಿಯಲ್ಲಿ ತುಂಬಿದ್ದು, ಅದನ್ನು ಸೇವಿಸುವಂತೆ ಕುಟುಂಬಕ್ಕೆ ಒತ್ತಾಯಿಸಿದ್ದಾರೆ. ಅವರ ದೇಹದ ಭಾಗಗಳನ್ನು ಕಾದ ಕಬ್ಬಿಣದ ರಾಡ್ನಿಂದ ಸುಟ್ಟಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಭಾನುವಾರ ಗ್ರಾಮಕ್ಕೆ ತೆರಳಿ ಸಂತ್ರಸ್ತರನ್ನು ರಕ್ಷಿಸಿದೆ. ಅವರನ್ನು ಸರ್ಯಾಹತ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವರದಕ್ಷಿಣೆಗಾಗಿ ವಿಕೃತಿ, ಪತ್ನಿಯ ತಲೆಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ!
ಇನ್ನು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ದಿಯೋಘರ್ನ ಆಸ್ಪತ್ರೆಗೆ ವೈದ್ಯರು ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ವಾಮಾಚಾರದ ಅನುಮಾನದ ಮೇಲೆ ಚಿತ್ರಹಿಂಸೆ ನೀಡುವುದು ರಾಜ್ಯದಲ್ಲಿ ಸಾಮಾಜಿಕ ಅನಿಷ್ಟವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2001 ಮತ್ತು 2020 ರ ನಡುವಿನ ಅವಧಿಯಲ್ಲಿ ಒಟ್ಟು 590 ಜನರು, ಹೆಚ್ಚಾಗಿ ಮಹಿಳೆಯರು ಈ ಸಂಬಂಧ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮೈಸೂರು: ಮುಕ್ತ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಭಾಗದ ಸಹ ಪ್ರಾಧ್ಯಾಪಕರಾದ ತೇಜಸ್ವಿ ನವಿಲೂರು ಅವರ ಕೊಠಡಿಯಲ್ಲಿ ಈ ವಾಮಾಚಾರ ನಡೆದಿದೆ. ಸಿದ್ಧಪಾಠಗಳನ್ನು ತಯಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದರೆಂದು ತೇಜಸ್ವಿಯವರನ್ನು ಅಮಾನತು ಮಾಡಿ ಅವರ ಕೊಠಡಿ ಬಳಕೆಗೆ ನಿರ್ಬಂಧ ಹೇರಲಾಗಿತ್ತು.
ಬಳಿಕ ಅಮಾನತು ಹಿಂಪಡೆದಿದ್ದರಿಂದ ಸೋಮವಾರ ತೇಜಸ್ವಿ ಕೆಲಸಕ್ಕೆ ಬಂದು ಕೊಠಡಿಯನ್ನು ತೆರೆದಾಗ ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ತೇಜಸ್ವಿ ನವಿಲೂರು ಅವರು ರಾಜ್ಯ ಮುಕ್ತ ವಿವಿ ಕುಲಸಚಿವರಿಗೆ ದೂರು ನೀಡಿದ್ದಾರೆ.