Asianet Suvarna News Asianet Suvarna News

ಉದ್ಯಮಿ ಸೇರಿ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಧಾರವಾಡ, ರೌಡಿ ಶೀಟರ್‌ ಪುತ್ರ ಸೇರಿ 4 ಮಂದಿ ಅರೆಸ್ಟ್

ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ 18 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Double murder in Hubbali-Dharwad four accused arrested gow
Author
First Published May 27, 2023, 10:30 PM IST

ಧಾರವಾಡ (ಮೇ.27): ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ 18 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿ ಶೀಟರ್‌ ಆಗಿದ್ದ ಫ್ರುಟ್‌ ಇರ್ಫಾನ್‌ ಮಗ ಅರ್ಬಾಜ್‌ ಹಂಚಿನಾಳ, ನದೀಮ್‌ ಹಾಗೂ ರಹೀಂ ಸೇರಿದಂತೆ ನಾಲ್ವರನ್ನು ಧಾರವಾಡದ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಮಹ್ಮದ್‌ ಕುಡಚಿಯನ್ನು ಹತ್ಯೆ ಮಾಡಲು ಐದು ಜನರ ತಂಡ ರಾತ್ರಿ ಅವರ ಮನೆಗೆ ನುಗ್ಗಿತ್ತು. ತಾವು ಅಂದುಕೊಂಡಂತೆ ಮಹ್ಮದನನ್ನು ಹತ್ಯೆ ಮಾಡಿದ್ದ ಆರೋಪಿಗಳು, ಹತ್ಯೆ ಮಾಡುವ ಅವಸರದಲ್ಲಿ ತಮ್ಮ ಸಹಚರ ಗಣೇಶ ಸಾಳುಂಕೆ ಕಾಲಿಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದರು. ಇದರಿಂದ ಗಣೇಶ, ಮಹ್ಮದನ ಮನೆಯಿಂದ ಅನತಿ ದೂರ ಓಡಿ ಹೋಗಿ ಮೃತಪಟ್ಟಿದ್ದ. ಉಳಿದ ನಾಲ್ಕು ಜನ ಆರೋಪಿಗಳು ಗಣೇಶನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಹತ್ಯೆ ಮಾಡಿದ ನಂತರ ಆರೋಪಿಗಳು ದಾಂಡೇಲಿಗೆ ತೆರಳಿದ್ದರು. ಧಾರವಾಡದ ಪೊಲೀಸರ ತಂಡ ಅಲ್ಲಿಗೆ ಹೋಗಿ ಹುಡುಕಾಟ ನಡೆಸಿದ ನಂತರ ಆರೋಪಿಗಳು ಅಲ್ಲಿಂದ ಮುಂಡಗೋಡಕ್ಕೆ ಬಂದಿದ್ದರು. ಕೊನೆಗೆ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಮುಂಡಗೋಡದಲ್ಲಿ ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹತ್ಯೆ ಆರೋಪಿಗಳ ಬಂಧನಕ್ಕೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ರಮನ್‌ ಗುಪ್ತಾ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು.

Bengaluru: ಬಾಡಿಗೆ ಮನೆ ಮಾಲೀಕರೇ ಹುಷಾರ್, ತಲೆ ಒಡೆಯುವ ಗ್ಯಾಂಗ್ ಬಂದಿದೆ

ಆಗಿದ್ದೇನು?:
ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಮಹ್ಮದ್‌ ಕುಡಚಿ, ರಿಯಲ್‌ ಎಸ್ಟೇಟ್‌ ಉದ್ಯಮಿ. ನಿತ್ಯವೂ ಸೈಟ್‌ ಖರೀದಿಯ ಕೆಲಸಗಳಿಗೆ ಸಂಬಂಧಿಸಿದಂತೆ ಅನೇಕರು ಈತನ ಮನೆಗೆ ಬಂದು ಹೋಗುತ್ತಿದ್ದರು. ಹಾಗೆಯೇ ಗುರುವಾರ ಸಹ ಅನೇಕರು ಬಂದಿದ್ದರು. ಕೊನೆಗೆ ಬಂದಿದ್ದ ಆಪ್ತ ಸ್ನೇಹಿತರೊಂದಿಗೆ ಊಟ ಮಾಡಿ ಅವರನ್ನು ಕಳುಹಿಸಿಕೊಟ್ಟು ಮನೆ ಎದುರು ಕುಳಿತಿದ್ದ. ಈ ವೇಳೆ ಈತನ ಮನೆ ಮುಂದೆಯೇ ಎರಗಿ ಬಂದ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ಈತನ ಮೇಲೆ ದಾಳಿ ನಡೆಸಿದ್ದಾರೆ.

ಮೊದಲಿಗೆ ರಿವಾಲ್ವಾರನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಅದು ಈತನಿಗೆ ತಾಗಲಿಲ್ಲ. ಬಳಿಕ ಮಚ್ಚು, ತಲವಾರ್‌ ಸೇರಿದಂತೆ ವಿವಿಧ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಕುಡಚಿಯ ಪುತ್ರ ಹಜರತ್‌ ಅಲಿ, ತನ್ನ ತಂದೆಯ ಮೇಲೆ ದಾಳಿಯಾಗುತ್ತಿದ್ದಂತೆ ಓಡಿ ಬಂದು ರಕ್ಷಿಸಲು ಮುಂದಾಗಿದ್ದಾನೆ. ಆತನ ಮೇಲೂ ಹಲ್ಲೆ ನಡೆಸಲಾಗಿದೆ.

ಬಳಿಕ ಮಹ್ಮದ ಕುಡಚಿಯ ಮೇಲೆ ಎಲ್ಲೆಂದರಲ್ಲಿ ಇರಿದಿದ್ದಾರೆ. ಇದರಿಂದ ರಕ್ತಸಿಕ್ತವಾಗಿ ಆತ ಬಿದ್ದಿದ್ದಾನೆ. ಆತನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹ್ಮದ ಕುಡಚಿ ಕೆಲಹೊತ್ತಿನಲ್ಲೇ ಪ್ರಾಣಬಿಟ್ಟಿದ್ದಾನೆ.

ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ, ಹೆಣವಾಗಿ ಸಿಕ್ಕಳು!

ಕೊಲೆ ಮಾಡಲು ಬಂದು ಸತ್ತ:
ಇನ್ನು ಕುಡಚಿ ಶವದಿಂದ 200 ಮೀಟರ್‌ ದೂರದಲ್ಲಿ ಮತ್ತೊಬ್ಬ ಯುವಕ ಕೂಡ ಸತ್ತು ಬಿದ್ದಿದ್ದ. ಈತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಿವಾಸಿ ಗಣೇಶ ಸಾಳುಂಕೆ ಎಂದು ಗುರುತಿಸಲಾಗಿದೆ. ಮೊದಲಿಗೆ ಈತ ಕೂಡ ಕುಡಚಿಯ ಸಹಚರ ಎಂದೇ ಭಾವಿಸಲಾಗಿತ್ತು. ಬಳಿಕ ತನಿಖೆ ನಡೆಸಿದ ಮೇಲೆ ಈತ ಕುಡಚಿಯ ಸಹಚರನಲ್ಲ. ಬದಲಿಗೆ ಕೊಲೆ ಮಾಡಲು ಬಂದಿದ್ದ ಗುಂಪಿನೊಂದಿಗೆ ಇದ್ದವ ಎಂಬುದು ಬೆಳಕಿಗೆ ಬಂದಿದೆ. ಹೊಡೆದಾಟದಲ್ಲಿ ಈತನ ಕಾಲು ಹಾಗೂ ಹೊಟ್ಟೆಗೂ ಹೊಡೆತ ಬಿದ್ದಿದೆ. ಆದರೆ ಬಂದಿದ್ದ ದುಷ್ಕರ್ಮಿಗಳು ಘಟನೆ ನಡೆದ ಮೇಲೆ ಈತನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಕೊಲೆ ಮಾಡಲು ಬಂದು ತಾನೇ ಸತ್ತಿದ್ದಾನೆ ಎಂದು ಹೇಳಲಾಗಿದೆ.

Follow Us:
Download App:
  • android
  • ios