*  ಐಸಿಎಸ್‌ ಇಸ್ಲಾಮಿಕ್‌ ಸ್ಟೇಟ್‌ ಕನಸು ನನಸಿಗೆ ದೀಪ್ತಿ ಮಾರ್ಲ ಬಳಕೆ;*  ಎನ್‌ಐಎ ವಿಶೇಷ ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಪ್ರಸ್ತಾಪ*  ಉಳ್ಳಾಲ ಮಾಜಿ ಶಾಸಕ ದಿ.ಇದಿನಬ್ಬರ ಮೊಮ್ಮಗ, ಸೊಸೆಯ ಉಗ್ರ ನಂಟು ಬಯಲಿಗೆ 

ಮಂಗಳೂರು(ಫೆ.03): ಐಸಿಸ್‌(ISIS) ಉಗ್ರರ ಸಂಪರ್ಕ ಜಾಲಕ್ಕೆ ಯುವಕರ ಸೇರ್ಪಡೆ ಕುರಿತ ಆರೋಪದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿಸಲ್ಪಟ್ಟ ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬರ(D Idinabba) ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ(Deepti Marla) ಆಲಿಯಾಸ್‌ ಮರಿಯಂ, ಇದಿನಬ್ಬರ ಇನ್ನೊಬ್ಬ ಮೊಮ್ಮಗ ಅಮರ್‌ ಅಬ್ದುಲ್‌ ರಹಮಾನ್‌ ಸೇರಿದಂತೆ ಎಂಟು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ(NIA)ಅಧಿಕಾರಿಗಳು ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಐಸಿಎಸ್‌ನ ಇಸ್ಲಾಮಿಕ್‌ ರಾಷ್ಟ್ರ(Islamic State) ಕನಸು ಸಾಕಾರಗೊಳಿಸಲು ದೀಪ್ತಿ ಮಾರ್ಲ ಬಳಕೆಯಾಗಿರುವುದನ್ನು ಪ್ರಸ್ತಾಪಿಸಲಾಗಿದೆ.

ಮಂಗಳೂರು(Mangaluru) ಹೊರವಲಯ ಉಳ್ಳಾಲದ(Ullal) ಮಾಜಿ ಶಾಸಕ ಇದಿನಬ್ಬರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಆಲಿಯಾಸ್‌ ಮರಿಯಂ, ಮೊಹಮ್ಮದ್‌ ವಕಾರ್‌ ಲೋನ್‌ ಆಲಿಯಾಸ್‌ ವಿಲ್ಸನ್‌ ಕಾಶ್ಮೀರಿ, ಭಟ್ಕಳದ ಮಿಝಾ ಸಿದ್ಧಿಕ್‌, ಶಿಫಾ ಹ್ಯಾರಿಸ್‌ ಆಲಿಯಾಸ್‌ ಆಯೆಷಾ, ಒಬೈದ್‌ ಹಮೀದ್‌ ಮಟ್ಟ, ಬೆಂಗಳೂರಿನಲ್ಲಿ ಬಂಧಿತ ಮಾದೇಶ್‌ ಶಂಕರ್‌ ಆಲಿಯಾಸ್‌ ಅಬ್ದುಲ್ಲಾ, ಇದಿನಬ್ಬರ ಇನ್ನೊಬ್ಬ ಮೊಮ್ಮಗ ಅಮರ್‌ ಅಬ್ದುಲ್‌ ರಹಮಾನ್‌ ಹಾಗೂ ಮಾಝಾಮಿಲ್‌ ಹಸನ್‌ ಭಟ್‌ ಈ ಎಂಟು ಮಂದಿ ಬಂಧಿತರು. ಇವರೆಲ್ಲ ವಿರುದ್ಧ ಈಗ ಐಸಿಸ್‌ ಸಂಪರ್ಕ ಜಾಲಕ್ಕೆ ಯುವಕರ ಸೇರ್ಪಡೆ ಕುರಿತ ಆರೋಪದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ISIS Recruitment Racket: ಇದಿನಬ್ಬ ಮೊಮ್ಮಗನ ಬೆನ್ನಲ್ಲೇ, ದೀಪ್ತಿ ಮಾರ್ಲ ಕೂಡಾ ಅರೆಸ್ಟ್: ಯಾರೀಕೆ?

2021 ಮಾರ್ಚ್‌ನಲ್ಲಿ ಕೇರಳದಲ್ಲಿ(Kerala) ಬಂಧಿತನಾಗಿದ್ದ(Arrest) ಮೊಹಮ್ಮದ್‌ ಅಮೀನ್‌ ಆಲಿಯಾಸ್‌ ಅಬು ಯಾಹ್ಯಾ ಮೂಲಕ ಸಿರಿಯಾದ(Syria) ಐಸಿಸ್‌ ಉಗ್ರ ಜಾಲದ ನಂಟು ಬಯಲಿಗೆ ಬಂದಿತ್ತು. ಮೊಹಮ್ಮದ್‌ ಅಮೀನ್‌ ಮತ್ತು ಆಯೆಷಾ ಕೇರಳದಲ್ಲಿದ್ದುಕೊಂಡು ತಂಡಕ್ಕೆ ಹಣ ಸಂಗ್ರಹಿಸಿಕೊಡುತ್ತಿದ್ದರು. ತಂಡದಲ್ಲಿದ್ದವರು ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಹೂಪ್‌ ಹೀಗೆ ವಿವಿಧ ರೀತಿಯ ಸಾಮಾಜಿಕ ಜಾಲತಾಣದಲ್ಲಿ(Social Media) ಸಕ್ರಿಯವಾಗಿದ್ದು, ಐಸಿಸ್‌ ಪ್ರೇರಿತ ಬರಹಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದರು.

ಇರಾಕ್‌ ಮತ್ತು ಸಿರಿಯಾದಲ್ಲಿ ಐಸಿಸ್‌ ಅವನತಿ ಬೆನ್ನಲ್ಲೇ 2020ರ ಮಾಚ್‌ರ್‍ ವೇಳೆಗೆ ಕಾಶ್ಮೀರ(Kashmir) ಪ್ರವೇಶಿಸಿದ ಮೊಹಮ್ಮದ್‌ ಅಮೀನ್‌ ಭಾರತದಲ್ಲಿ(India) ಇಸ್ಲಾಮಿಕ್‌ ಸ್ಟೇಟ್‌ ಸ್ಥಾಪನೆ ಉದ್ದೇಶದಿಂದ ಅನ್ವರ್‌, ರಶೀದ್‌ ಜೊತೆ ಸೇರಿ ಕಾಶ್ಮೀರದಿಂದಲೇ ಕಾರ್ಯಾಚರಿಸುತ್ತಿದ್ದರು. ಐಸಿಸ್‌ ಪರ ಪ್ರಚಾರ ನಡೆಸುವ ಸಲುವಾಗಿ ಯೂ ಟ್ಯೂಬ್‌ ಚಾನೆಲ್‌ ಸ್ಥಾಪಿಸಿ ಕೆಲಸ ಪ್ರಾರಂಭಿಸಿದ್ದರು. ಕ್ರೋನಿಕಲ್‌ ಫೌಂಡೇಷನ್‌ ಹೆಸರಿನಲ್ಲಿ ಐಸಿಸ್‌ ಉಗ್ರ ಕೆಲಸಕ್ಕೆ ಹಣ ಸಂಗ್ರಹಿಸುತ್ತಿದ್ದರು.

ಉಳ್ಳಾಲದ ದೀಪ್ತಿ ಮಾರ್ಲ ಹಾಗೂ ಆಕೆಯ ಮೈದುನ ಅಮರ್‌ ಅಬ್ದುಲ್‌ ರಹಮಾನ್‌ ಸೇರಿ ಆನ್‌ಲೈನ್‌ನಲ್ಲಿ ಹಲವು ಮಂದಿಯನ್ನು ಸಂಪರ್ಕಿಸಿ ಬ್ರೇನ್‌ವಾಷ್‌ ಮಾಡಿದ್ದಾರೆ ಎಂಬ ಮಾಹಿತಿ ಐಎನ್‌ಎ ಅಧಿಕಾರಿಗಳಿಗೆ ತನಿಕೆ ವೇಳೆ ಲಭಿಸಿತ್ತು. ಐಎನ್‌ಎ ಅಧಿಕಾರಿಗಳು ದಾಳಿ ಮಾಡಿದ ವೇಳೆ ಇವರಿಬ್ಬರು ಬಳಸುತ್ತಿದ್ದ ಲ್ಯಾಪ್‌ಟಾಪ್‌, ಪೆನ್‌ ಡ್ರೈವ್‌, ಮೊಬೈಲ್‌ ಇನ್ನಿತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿದ್ದರು. ದೀಪ್ತಿ ಮರಿಯಂ ಆರು ತಿಂಗಳ ಮಗು ಹೊಂದಿದ್ದರಿಂದ ಆಕೆಯ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳು ಜನವರಿಯಲ್ಲಿ ಆಕೆಯನ್ನು ಬಂಧಿಸಿದ್ದರು.

ದೀಪ್ತಿ ಮಾರ್ಲ ಸಾಮಾಜಿಕ ಜಾಲತಾಣದಲ್ಲಿ ಹಿಂದು(Hindu) ಮತ್ತು ಮುಸ್ಲಿಂ(Muslim) ಹೆಸರಿನಲ್ಲಿ 15ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿದ್ದಳು. ಅದರ ಮೂಲಕ ಯುವಕರನ್ನು ಸಂಪರ್ಕಿಸಿ ಅವರನ್ನು ಐಸಿಸ್‌ ಹೋರಾಟಕ್ಕೆ ಪ್ರಚೋದಿಸುತ್ತಿದ್ದಳು. ಈಕೆಯಿಂದ ಪ್ರಚೋದಿತರಾಗಿದ್ದ ಕೇರಳದ ನಾಲ್ವರು ಯುವಕರು ಆಗಲೇ ಸಿರಿಯಾಗೆ ತೆರಳಿದ್ದರು. ಬೆಂಗಳೂರಿನಲ್ಲಿ(Bengaluru) ಮುಸ್ಲಿಂ ಆಗಿ ಮತಾಂತರ ಹೊಂದಿದ ಮಾದೇಶ ಪೆರುಮಾಳ್‌ ಎಂಬಾತನೂ ದೀಪ್ತಿ ಮಾರ್ಲಳ ಜಾಲಕ್ಕೆ ಸಿಲುಕಿರುವುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.

ಇದಕ್ಕೂ ಮುನ್ನ ಮೂವರು ಆರೋಪಿಗಳ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಐಎನ್‌ಎ ಅಧಿಕಾರಿಗಳು ಆರೋಪ ಪಟ್ಟಿಸಲ್ಲಿಸಿದ್ದರು. ಬಳಿಕ ಮಂಗಳೂರು, ಭಟ್ಕಳ, ಬೆಂಗಳೂರು ಮತ್ತು ಕಾಶ್ಮೀರಗಳಲ್ಲಿ ಕಾರ್ಯಾಚರಣೆ ನಡೆಸಿ ಮತ್ತೆ ಐವರನ್ನು ಬಂಧಿಸಲಾಗಿತ್ತು. ಇದೀಗ ಎಂಟು ಮಂದಿಯ ವಿರುದ್ಧವೂ ಆರೋಪಪಟ್ಟಿದಾಖಲಿಸಲಾಗಿದೆ.

ಇಸ್ಲಾಮಿಕ್‌ ಸ್ಟೇಟ್ಸ್‌ಗೆ ಹಿಂದೂ ಯುವತಿ ಬಳಕೆ!

ಐಸಿಸ್‌ನ ಇಸ್ಲಾಮಿಕ್‌ ಸ್ಟೇಟ್ಸ್‌ ಉದ್ದೇಶ ಈಡೇರಿಕೆಗೆ ಹಿಂದೂ ಯುವತಿಯನ್ನು ಬಳಸಲಾಯಿತೇ? ಇಸ್ಲಾಂಗೆ(Islam) ಮತಾಂತರವಾದ(Conversion) ಉಳ್ಳಾಲದ ಹಿಂದೂ ಯುವತಿಗೆ ಇಸ್ಲಾಮಿಕ್‌ ರಾಷ್ಟ್ರದ ಕನಸು ಬಿತ್ತುವಲ್ಲಿ ಐಸಿಸ್‌ ಉಗ್ರ ಸಂಘಟನೆ ಯಶಸ್ವಿಯಾಗಿರುವುದನ್ನು ಎನ್‌ಐಎ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

NIA Raid Mangaluru: ಐಸಿಸ್ ನಂಟು? ಮಾಜಿ ಶಾಸಕ ಇದಿನಬ್ಬ ಪುತ್ರನ ಸೊಸೆ ಬಂಧನ

ಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್ಸ್‌ ಸ್ಥಾಪನೆಯ ಐಸಿಸ್‌ ಗುರಿಗೆ ದೀಪ್ತಿ ಮಾರ್ಲ ಆಲಿಯಾಸ್‌ ಮರಿಯಂ ಸಾಥ್‌ ನೀಡಿರುವುದು ದಾಖಲಾಗಿದೆ. ದೀಪ್ತಿ ಮಾರ್ಲ ಈ ಜಾಲದಲ್ಲಿ ಸಕ್ರಿಯವಾಗಿರುವ ಬಗ್ಗೆ ಆರೋಪಪಟ್ಟಿಸಲ್ಲಿಸಿದ ಎನ್‌ಐಎ ಐಸಿಸ್‌ ಇಸ್ಲಾಮಿಕ್‌ ಸ್ಟೇಟ್‌ ಐಡಿಯಾಲಜಿಗೆ ದೀಪ್ತಿ ಮಾರ್ಲ ಪ್ರಭಾವಿತಳಾಗಿದ್ದನ್ನು ಬೊಟ್ಟು ಮಾಡಿದೆ.

ಐಸಿಸ್‌ ಸಂಪರ್ಕ ಸಾಧಿಸಿದ ಬಳಿಕ ದೀಪ್ತಿ ಮಾರ್ಲ ಹಲವು ಬಾರಿ ಕಾಶ್ಮೀರಕ್ಕೆ ಹೋಗಿ ಬಂದಿದ್ದಳು. ಮೂಲತಃ ಕೊಡಗಿನ ಮಡಿಕೇರಿಯ ಬಂಟ ಸಮುದಾಯದ ಯುವತಿ ದೀಪ್ತಿ ಮಾರ್ಲ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಇದಿನಬ್ಬರ ಪುತ್ರ ಬಾಷಾನ ಪುತ್ರ ಅನಾಸ್‌ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಅದು ಪ್ರೇಮಕ್ಕೆ ತಿರುಗಿ ದೀಪ್ತಿ ಇಸ್ಲಾಂಗೆ ಮತಾಂತರಗೊಂಡು ಅನಾಸ್‌ನ್ನು ವಿವಾಹವಾಗಿ, ಮರಿಯಂ ಆಗಿ ಹೆಸರು ಬದಲಾಯಿಸಿದ್ದಳು.