ಪ್ರಿಯತಮೆಯ ಸಹೋದರನ ತಂಡದಿಂದ ಹಲ್ಲೆ ಆರೋಪ| ಎಸ್ಕೇಪ್‌ ಕಾರ್ತಿಕ್‌ ವಿರುದ್ಧ ಬೆಂಗಳೂರಿನ ಹಲವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣ ದಾಖಲು| ಗಾಯಾಳು ಕೊಟ್ಟ ದೂರಿನ ಮೇರೆಗೆ ನಾಲ್ವರ ವಿರುದ್ಧ ದೂರು ದಾಖುಲು| 

ಬೆಂಗಳೂರು(ಡಿ.09): ಕುಖ್ಯಾತ ಮನೆಗಳ್ಳ ಎಸ್ಕೇಪ್‌ ಕಾರ್ತಿಕ್‌ನ ಮೇಲೆ ಆತ ಪ್ರೀತಿಸುತ್ತಿದ್ದ ಯುವತಿಯ ಸೋದರನ ತಂಡ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಎಸ್ಕೇಪ್‌ ಕಾರ್ತಿಕ್‌ ನೀಡಿದ ದೂರಿನ ಮೇರೆಗೆ ರಾಜಕುಮಾರ್‌, ಅಭಿಷೇಕ್‌, ಗೌತಮ್‌ ಮತ್ತು ಪ್ರಶಾಂತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆಗೆ ಒಳಗಾಗಿರುವ ಹೆಣ್ಣೂರು ನಿವಾಸಿ ಕಾರ್ತಿಕ್‌ ಬಾಣಸವಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಲಸೆ ಕಾರ್ಮಿಕರನ್ನೇ ದೋಚಿದ ಪೊಲೀಸಪ್ಪ..!

ಎಸ್ಕೇಪ್‌ ಕಾರ್ತಿಕ್‌ ವಿರುದ್ಧ ನಗರದ ಹಲವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಿವೆ. ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡು ಕಾರ್ತಿಕ್‌ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಐದು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ಪ್ರೀತಿಗೆ ಯುವತಿಯ ಸಹೋದರ ರಾಜಕುಮಾರ್‌ನ ವಿರೋಧವಿತ್ತು. ತನ್ನ ಸಹೋದರಿ ಜತೆಗಿನ ಪ್ರೀತಿ ಕಡಿತಗೊಳಿಸಿಕೊಳ್ಳುವಂತೆ ಕಾರ್ತಿಕ್‌ಗೆ ರಾಜಕುಮಾರ್‌ ಎಚ್ಚರಿಕೆ ನೀಡಿದ್ದ. ಇದಕ್ಕೆ ಸೊಪ್ಪು ಹಾಕದ ಕಾರ್ತಿಕ್‌ ಆಗಾಗ್ಗೆ ಯುವತಿಯನ್ನು ಭೇಟಿ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ರಾಜಕುಮಾರ್‌ ಕಾರ್ತಿಕ್‌ಗೆ ಬುದ್ದಿ ಕಲಿಸಲು ತೀರ್ಮಾನಿಸಿದ್ದ. ಡಿ.5ರಂದು ಕಾರ್ತಿಕ್‌ ರಾತ್ರಿ 11.30ರ ಸುಮಾರಿಗೆ ಬೈರತಿ ಕ್ರಾಸ್‌ ಬಳಿ ಆಟೋಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ವೇಳೆ ಕಾರಿನಲ್ಲಿ ತನ್ನ ಸಹಚರರ ಜತೆ ಬಂದ ರಾಜಕುಮಾರ್‌ ತಂಡ ಕಾರ್ತಿಕ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳು ಕೊಟ್ಟ ದೂರಿನ ಮೇರೆಗೆ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.