ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಗು ಸಾವು ಪ್ರಕರಣ; ನಿಮ್ಹಾನ್ಸ್ ವೈದ್ಯರ ವಿರುದ್ಧ ಭುಗಿಲೆದ್ದ ಆಕ್ರೋಶ
ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಒಂದು ವರ್ಷದ ಮಗು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್ ಚಾಲಕರು ನಿಮ್ಹಾನ್ಸ್ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
![Child Death Case; Nimhans protests against doctors at bengaluru rav Child Death Case; Nimhans protests against doctors at bengaluru rav](https://static-ai.asianetnews.com/images/01hgh9e7fj5hrttvkeertvbvnv/-_363x203xt.jpg)
ಬೆಂಗಳೂರು (ಡಿ.1) : ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ನಲ್ಲಿ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಒಂದು ವರ್ಷದ ಮಗು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್ ಚಾಲಕರು ನಿಮ್ಹಾನ್ಸ್ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಆ್ಯಂಬುಲೆನ್ಸ್ ಚಾಲಕರೇ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗುವಿನ ಪ್ರಾಣ ಹೋಗಿದೆ. ನಾನು ಹಾಸನದಿಂದ 11.18 ಗಂಟೆಗೆ ಆ್ಯಂಬುಲೆನ್ಸ್ನಲ್ಲಿ ಮಗುವನ್ನು ತೆಗೆದುಕೊಂಡು ಹೊರಟೆ. 1.31ಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ತಲುಪಿಸಿದ್ದೇನೆ. ಇಲ್ಲಿ 2.30 ಗಂಟೆವರೆಗೂ ಮಗುವನ್ನು ಆಸ್ಪತ್ರೆ ಒಳಗಡೆಗೂ ತೆಗೆದುಕೊಂಡಿಲ್ಲ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಲೇ ಮಗುವಿನ ಸಾವಾಗಿದೆ ಎಂದು ಚಾಲಕ ಆರೋಪ ಮಾಡಿದರು.
ಬೆಂಗಳೂರು: ಜೀರೋ ಟ್ರಾಫಿಕ್ಕಲ್ಲಿ ಬಂದರೂ ಬೆಡ್ ಇಲ್ಲದೆ ನಿಮ್ಹಾನ್ಸ್ನಲ್ಲಿ ಮಗು ಸಾವು..!
ತಾವು ಸೆರೆ ಹಿಡಿದ ಪ್ರತಿಯೊಂದನ್ನೂ ವಿಡಿಯೋ ಸಾಕ್ಷ್ಯ ಸಮೇತ ತೋರಿಸಿ ಕಿಡಿಕಾರಿದ ಅವರು, ಒಂದು ಗಂಟೆ ಬಳಿಕವೂ ಕೂಡ ನಾವೇ ಸ್ಟ್ರೆಚರ್ನಲ್ಲಿ ತಳ್ಳಿಕೊಂಡು ಹೋದೆವು. ವೈದ್ಯರು ಎದ್ದು ಬಂದು ಕೂಡ ಮಗುವನ್ನು ನೋಡಲಿಲ್ಲ. ನಾವೇ ಸ್ಟ್ರೆಚರ್ ತಳ್ಳಿಕೊಂಡು ಹೋದರೂ ನೋಡಿಲ್ಲ. ಪಲ್ಸ್ ಪರೀಕ್ಷಿಸಿ ಎಂದರೆ ನಮಗೆ ಗೊತ್ತಿದೆ, ನೀನು ಹೇಳಬೇಡ ಎನ್ನುತ್ತಾರೆ. ಅವರ ನಿರ್ಲಕ್ಷ್ಯದಿಂದಲೇ ಮಗು ಸಾವಾಗಿದೆ ಎಂದು ದೂರಿದರು.
ಆರೋಗ್ಯ ಸಚಿವರ ಹಾಜರಿಗೆ ಆಗ್ರಹ:
ಅಲ್ಲದೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳಕ್ಕೆ ಬಂದು ಸಾಕ್ಷ್ಯಗಳ ಸಮೇತ ಪ್ರಕರಣ ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆ ನಿರ್ಲಕ್ಷ್ಯವಿಲ್ಲ: ನಿಮ್ಹಾನ್ಸ್ ಸ್ಪಷ್ಟನೆ
ಪ್ರಕರಣ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ನಿಮ್ಹಾನ್ಸ್ ಆಸ್ಪತ್ರೆ ಆಡಳಿತ ಮಂಡಳಿ, ಮಧ್ಯಾಹ್ನ 2.30 ಗಂಟೆಗೆ ಮಗುವನ್ನು ಹಾಸನದಿಂದ ಕರೆದುಕೊಂಡು ಬರಲಾಗಿತ್ತು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆಗೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಆಗಿತ್ತು. 3 ಗಂಟೆಗೆ ಹೃದಯಾಘಾತ ಆಗಿದ್ದು 4 ಗಂಟೆಗೆ ಮೃತಪಟ್ಟಿದ್ದಾನೆ ಎಂದು ಹೇಳಿತ್ತು.
ಈ ಸ್ಪಷ್ಟನೆ ವಿರುದ್ಧ ಮಗುವಿನ ಪೋಷಕರು ಹಾಗೂ ಆ್ಯಂಬುಲೆನ್ಸ್ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಪರಿಶೀಲಿಸಿ ಕ್ರಮ:ದಿನೇಶ್ ಗುಂಡೂರಾವ್
ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಾಸನ ಮೂಲದ ಮಗು ಸಾವು ಹಾಗೂ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿ ಕೇಳಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಎಣ್ಣೆ ಹೊಡೆದ ವಿಷ್ಯ, ಅಪ್ಪನಿಗೆ ಹೇಳಿದ್ದಕ್ಕೆ ಕೊಂದೇ ಬಿಟ್ರು: ಎರಡು ಡಿಚ್ಚಿ, ನಾಲ್ಕು ಗುನ್ನಾಗೆ ಮಟಾಷ್
ನಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜೊತೆ ಮಾತನಾಡುತ್ತೇವೆ. ಲೋಪಗಳು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪರ್ಯಾಯ ವ್ಯವಸ್ಥೆಗೆ ಚರ್ಚೆ
ನಿಮ್ಹಾನ್ಸ್ ಮೇಲೆ ಬಹಳ ಒತ್ತಡ ಇದೆ. ಸಾಕಷ್ಟು ರೋಗಿಗಳು ರಾಜ್ಯಾದ್ಯಂತ ಬರುತ್ತಾರೆ. ಕೆಲವೊಮ್ಮೆ ಬೆಡ್ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗ ಬೆಡ್ ಸಿಕ್ಕಿಲ್ಲ. ಇದಕ್ಕೆ ಏನಾದರೂ ಪರ್ಯಾಯ ವ್ಯವಸ್ಥೆ ಕುರಿತು ಚರ್ಚಿಸುತ್ತೇವೆ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.
ನಿಮ್ಹಾನ್ಸ್ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಎಂದು ಪತ್ರಿಕೆಗಳನ್ನು ಗಮನಿಸಿದ್ದೇನೆ. ತಕ್ಷಣ ನಿಮ್ಹಾನ್ಸ್ ಆಸ್ಪತ್ರೆ ನಿರ್ದೇಶಕರನ್ನು ಕರೆದು ಚರ್ಚಿಸುತ್ತೇನೆ. ಪ್ರಕರಣದ ಬಗ್ಗೆ ವಿವರ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ.