ಐಎಂಎ ವಂಚನೆ ಬಿಗ್ ಟ್ವಿಸ್ಟ್; ನಿಂಬಾಳ್ಕರ್, ಹಿಲೋರಿ ವಿಚಾರಣೆಗೆ ಸಿಬಿಐಗೆ ಸಿಕ್ತು ಒಪ್ಪಿಗೆ
ಐಎಂಎ ವಂಚನೆ ಪ್ರಕರಣ/ ಇಬ್ಬರು ಐಪಿಎಸ್ ಅಧಿಕಾರಗಳ ವಿಚಾರಣೆಗೆ ಸರ್ಕಾರದಿಂದ ಸಿಬಿಐಗೆ ಒಪ್ಪಿಗೆ/ ರಾಜಕಾರಣಿಗಳ ಹೆಸರು ಕೇಳಿ ಬಂದಿತ್ತು/ ಬಹುಕೋಟಿ ವಂಚನೆಯ ಐಎಂಎ ಹಗರಣ
ಬೆಂಗಳೂರು (ಸೆ 14) ಬಹುಕೋಟಿ ವಂಚನೆ ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮದಡಿ ವಿಚಾರಣೆ ನಡೆಸಬಹುದು ಎಂದು ಕರ್ನಾಟಕ ಸರ್ಕಾರವು ಸಿಬಿಐಗೆ ಹೇಳಿದೆ.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಅಪರಾಧ ದಂಡ ಸಂಹಿತೆ ಸೆಕ್ಷನ್ 197, 170ರ ಅಡಿ ಅನುಮತಿ ನೀಡಲಾಗಿದೆ. ಐಎಂಎ ಜ್ಯುವೆಲ್ಲರಿ ಹಗರಣ 2019ರ ಜೂನ್ ನಲ್ಲಿ ಬಯಲಿಗೆ ಬಿತ್ತು. ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಈ ವೇಳೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿತ್ತು. ರಾಜಕಾರಣಿಗಳ ಹೆಸರು ಕೇಳಿ ಬಂದಿತ್ತು.
ಹೂಡಿಕೆದಾರರ ನೂರಾರು ಕೋಟಿ ರುಪಾಯಿ ವಂಚನೆಯಾದ ಹಿನ್ನೆಲೆಯಲ್ಲಿ ಹಗರಣದ ಪ್ರಮುಖ ಆರೋಪಿ, ಐಎಂಎ ಜ್ಯುವೆಲ್ಲರಿ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ನನ್ನು ಬಂಧಿಸಲಾಗಿದ್ದು ಜೈಲಿನಲ್ಲಿ ಇದ್ದಾನೆ. ಈತನಿಗೆ ರಾಜಕಾರಣಿಗಳ ಸಂಪರ್ಕ ಇರುವುದು ಬಯಲಾಗಿತ್ತು.
ಐಎಂಎ ಹಗರಣವನ್ನು ಸಿಬಿಐಗೆ ವಹಿಸಲಾಯಿತು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಾವಿರ ಪುಟಗಳ ಚಾರ್ಜ್ ಶೀಟ್ ದಾಖಲು ಮಾಡಿತ್ತು ಸಿಬಿಐ ಹಾಗೂ ಆರೋಪ ಪಟ್ಟಿಯಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರುಗಳು ಇದ್ದವು. ಬೆಂಗೂಳೂರು ಜಿಲ್ಲಾಧಿಕಾರಿಯಾಗಿದ್ದ ಬಿಎಂ ವಿಜಯಶಂಕರ್ ಹೆಸರು ಇದ್ದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಜತೆ ಇನ್ನು ಮೂರು ಅಧಿಕಾರಿಗಳ ವಿಚಾರಣೆ ಮಾಡಲು ಒಪ್ಪಿಗೆ ನೀಡಲಾಗಿದೆ.