Ballari Crime: ಬಸ್ ಹರಿದು ಮೂವರು ಕಾಲೇಜು ವಿದ್ಯಾರ್ಥಿಗಳ ಸಾವು: ಮಣ್ಣಾದ ಭವಿಷ್ಯದ ಕನಸು
ರಸ್ತೆಯಲ್ಲಿ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳ ಸಾವು
ಸಣ್ಣಪುಟ್ಟ ಕೆಲಸ ಮಾಡಿ ಕೊಂಡು ಹಾಸ್ಟೆಲ್ನಲ್ಲಿದ್ದು ಓದುತ್ತಿದ್ದ ವಿದ್ಯಾರ್ಥಿಗಳು
ಯಮಸ್ವರೂಪಿ ಬಸ್ಸಿನ ವೇಗಕ್ಕೆ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವು
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ಡಿ.19): ಬದುಕಿ ಬಾಳ ಬೇಕಾದ ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡೋ ಮೂಲಕ ಉನ್ನತ ಸ್ಥಾನಕ್ಕೇರುವ ಕನಸು ಕಂಡಿದ್ದರು. ಹಾಸ್ಟೆಲ್ನಲ್ಲಿ ಇದ್ದುಕೊಂಡು ಸಣ್ಣಪುಟ್ಟ ಕೆಲಸವನ್ನು ಮಾಡಿಕೊಂಡು ಓದಿನ ಖರ್ಚನ್ನು ನಿಭಾಯಿಸುತ್ತಿದ್ದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಯಮನ ಸ್ವರೂಪದಲ್ಲಿ ಬಂದ ಬಸ್ ಈ ಮೂವರು ವಿದ್ಯಾರ್ಥಿಗಳ ಪ್ರಾಣ ಪಕ್ಷಿಯನ್ನು ಹಾರಿಸಿ ಕೊಂಡು ಹೋಗಿರುವ ಬಳ್ಳಾರಿಯಲ್ಲಿ ತಡರಾತ್ರಿ ವೇಳೆ ನಡೆದಿದೆ.
ಯಮಸ್ವರೂಪಿ ಬಸ್ಸಿಗೆ ವಿದ್ಯಾರ್ಥಿಗಳು ಬಲಿ : ಬಳ್ಳಾರಿಯ ಕೌಲ್ ಬಜಾರ ಪ್ರದೇಶದ ಎಸ್ಟಿ ಹಾಸ್ಟೆಲ್ನಲ್ಲಿ ಓದುತ್ತಿದ್ದ ಪಿಯುಸಿ ಇಬ್ಬರು ಮತ್ತು ಡಿಗ್ರಿಯ ಓರ್ವ ವಿದ್ಯಾರ್ಥಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಡರಾತ್ರಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ವೇಗವಾಗಿ ಬಂದ ಯಮಸ್ವರೂಪಿ ಬಸ್ ಹರಿದು ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವಗಾರದ ಮುಂದೆ ಹಾಸ್ಟೆಲ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದರು. ಒಂದು ಕಡೆ ವಿದ್ಯಾರ್ಥಿಗಳ ಆಕ್ರೋಶ ಮತ್ತೊಂದು ಕಡೆ ಪೋಷಕರ ಕಣ್ಣಿರು ಕಂಡುಬರುತ್ತಿದೆ.
ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು
ಖರ್ಚಿಗಾಗಿ ಪಾರ್ಟ್ ಟೈಮ್ ಕೆಲಸ: ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ನಿನ್ನೆ ಹಲಕುಂದಿ ಗ್ರಾಮದಲ್ಲಿನ ಮದುವೆಯೊಂದರಲ್ಲಿ ಅಡುಗೆ ಬಡಿಸುವ ಕೆಲಸಕ್ಕೆ ಹೋಗಿದ್ದರು. ಈ ಕಾರ್ಯಕ್ರಮ ಮುಗಿಸಿ ರಾತ್ರಿ ಎರಡು ಗಂಟೆ ವೇಳೆಗೆ ಯಾವುದೇ ವಾಹನ ಸಿಗದ ಹಿನ್ನಲೆ ನಡೆದು ಕೊಂಡು ಬಳ್ಳಾರಿಯಲ್ಲಿರೋ ಹಾಸ್ಟೆಲ್ ಗೆ ಬರುತ್ತಿದ್ದರು. ಈ ವೇಳೆ ಜೇವರ್ಗಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಮೂವರು ವಿದ್ಯಾರ್ಥಿಗಳ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಪಿಯುಸಿ ಓದುತ್ತಿದ್ದ ಕನಕರಾಜು, ಶಂಕರ್ ಹಾಗೂ ಪದವಿ ಓದುತ್ತಿದ್ದ ಹೊನ್ನೂರು ಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಶವಗಾರದ ಬಳಿ ವಿದ್ಯಾರ್ಥಿಗಳ ಆಕ್ರೋಶ: ತಮ್ಮ ಜೊತೆ ಓದುತ್ತಿದ್ದ ವಿದ್ಯಾರ್ಥಿಗಳು ಅಪಘಾತದಲ್ಲಿ ಸಾವನ್ನಪಿದ ವಿಷಯ ತಿಳಿಯುತ್ತಲೇ ಶವಗಾರದ ಬಳಿ ಬಂದ ವಿದ್ಯಾರ್ಥಿಗಳು ಕಣ್ಣಿರಿಡುತ್ತಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರಣ ಶಂಕರ್ ಮತ್ತು ಹೊನ್ನೂರು ಸ್ವಾಮಿ ಮಾತ್ರ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳು ಕನಕರಾಜು ಹಾಸ್ಟೆಲ್ ನಲ್ಲಿ ಇರಲೇ ಇಲ್ಲವೆಂದು ಪೊಲೀಸರಿಗೆ ಹಾಸ್ಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಇದರಿಂದ ವಿಮ್ಸ್ ಆಸ್ಪತ್ರೆ ಶವಗಾರದ ಬಳಿ ಬಂದಿದ್ದ ಸಮಾಜ ಕಲ್ಯಾಣ ಇಲಾಖೆ ಎಸ್ಟಿ ವಿಭಾಗದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಓದುವುದಕ್ಕಾಗಿ ಹಾಸ್ಟೆಲ್ಗೆ ಬರುವ ವಿದ್ಯಾರ್ಥಿಗಳು ತಮ್ಮ ದೈನಂದಿನ ಖರ್ಚಿಗಾಗಿ ಹೊರಗಡೆ ಪಾರ್ಟೈಂ ಕೆಲಸ ಮಾಡುತ್ತಾರೆ. ಹೊರಗಡೆ ಹೋದ ವಿದ್ಯಾರ್ಥಿಗಳು ನಮ್ಮವರಲ್ಲವೆಂದರೆ ಹೇಗೆ ಎಂದು ವಿದ್ಯಾರ್ಥಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸೋ ಮೂಲಕ ಪರಿಸ್ಥಿತಿ ನಿಭಾಯಿಸಿದರು.
Gadag Crime: ಶಾಲೆಯಲ್ಲಿಯೇ 4ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಅತಿಥಿ ಶಿಕ್ಷಕ
ವಿದ್ಯಾರ್ಥಿಗಳ ಕುಟುಂಬದ ಕಣ್ಣಿರ ಕಥೆ: ಜಿಲ್ಲೆಯಲ್ಲಿ ಬಡತನ ಕುಟುಂಬದ ಹಿನ್ನಲೆ ಿರುವ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಬಳ್ಳಾರಿಗೆ ಬಂದು ಸಾವಿನ ಮನೆ ಸೇರಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಜಕ್ಕೂ ವಿದ್ಯಾರ್ಥಿಗಳು ಹಲಕುಂದಿ ಗ್ರಾಮಕ್ಕೆ ಕ್ಯಾಟರಿಂಗ್ ಕೆಲಸಕ್ಕೆ ಹೋಗಿದ್ದರೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಅದೇನೇ ಇರಲಿ. ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುತ್ತಾ ಹಾಸ್ಟೆಲ್ನಲ್ಲಿ ಓದಿಕೊಂಡು ಉನ್ನತ ಸ್ಥಾನಕ್ಕೆರಬೇಕೆಂದು ಕನಸುಕಂಡ ವಿದ್ಯಾರ್ಥಿಗಳಿಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರೋದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.