ಸ್ವಂತ ತಂಗಿಯ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಅಣ್ತಮ್ಮಾಸ್..!
ಒಡಹುಟ್ಟಿದ ಅಣ್ಣಂದಿರಿಂದಲೇ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ
ತೀವ್ರಗೊಂಡ ತಂಗಿ ಖಾಸಗಿ ಆಸ್ಪತ್ರೆಗೆ ದಾಖಲು....
ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ನಡೆದ ಘಟನೆ
ವರದಿಗಾರ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ, (ಮೇ.02): ಅವರೆಲ್ಲಾ ಒಂದೇ ತಾಯಿ ಮಕ್ಕಳು, ಅವರಲ್ಲಿ ಮಗಳು ತಮ್ಮ ತಂದೆಯನ್ನು ಜೋಪಾನ ಮಾಡಿಕೊಂಡು ಹೊರಟಿದ್ದಳು, ಆದ್ರೆ ಆಕೆಯ ಅಣ್ಣಂದಿರು ಮಾತ್ರ ತಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿ ವಿಚಾರವಾಗಿ ಆಗಾಗ ಗಲಾಟೆ ಮಾಡ್ತಿದ್ರು. ಆದ್ರೆ ಇದು ಬಗೆಹರಿಯದೇ ಹೋದಾಗ ಕೊನೆಗೆ ತಂಗಿಯ ಮೇಲೆ ಸ್ವಂತ ಅಣ್ಣಂದಿರೇ ಮಾರಣಾಂತಿಕ ಹಲ್ಲೆ ನಡೆಸಿದ್ರು. ಆಸ್ತಿಗಾಗಿ ಒಡಹುಟ್ಟಿದ ತಂಗಿಯ ಮೇಲೆ ಇಂತಹವೊಂದು ದಾಳಿ ನಡೆದಿತ್ತು.
ಸ್ವಂತ ಒಡಹುಟ್ಟಿದ ಅಣ್ಣಂದಿರಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಗೋಳಾಡುತ್ತಾ ಅಂಬುಲೆನ್ಸ್ನಲ್ಲಿ ಮೂಲಕ ಆಸ್ಪತ್ರೆಗೆ ಸೇರಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ನಡೆದಿದೆ. ಹೌದು. ಪಟ್ಟಣದ ಹಿರೇಮಠ ಎಂಬುವವರ ಕುಟುಂಬಕ್ಕೆ ಸೇರಿದ ಮನೆತನದಲ್ಲಿ ಆಸ್ತಿಗಾಗಿ ಇಂತಹವೊಂದು ಹಲ್ಲೆಯಾದ ಘಟನೆ ನಡೆದಿತ್ತು. ಅಡಿವೆಯ್ಯ ಹಿರೇಮಠ ಎಂಬುವವರ ಮಕ್ಕಳಾದ ಕುಮಾರಸ್ವಾಮಿ ಮತ್ತು ಚಂದ್ರಶೇಖರಯ್ಯ ಎಂಬುವವರು ತಮ್ಮ ತಂಗಿಯಾದ ಕವಿತಾಳ ಮೇಲೆ ನಿನ್ನೆ ರಾತ್ರಿ ಹರಿತವಾದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ಊರಿಗೆ ಹೋಗಿ ಮರಳಿ ಅಮೀನಗಡಕ್ಕೆ ಬಂದು ಇನ್ನೇನು ಮನೆ ಸೇರಬೇಕೆನ್ನುವಷ್ಟರಲ್ಲಿ ಅಣ್ಣಂದಿರಾದ ಕುಮಾರಸ್ವಾಮಿ ಮತ್ತು ಚಂದ್ರಶೇಖರಯ್ಯ ಹಲ್ಲೆ ಮಾಡಲು ಮುಂದಾದರು. ತಕ್ಷಣ ಸ್ಥಳದಲ್ಲೇ ಎಚ್ಚೆತ್ತುಕೊಂಡ ಕವಿತಾ ಆ ಸ್ಥಳದಿಂದ ಕಾಲ್ಕಿತ್ತು ಓಡಿದ್ದಾಳೆ. ಆದರೂ ಆಕೆಯ ಬೆನ್ನಟ್ಟಿದ್ದ ಸಹೋದರರು ಹರಿತವಾದ ಅಸ್ತ್ರದಿಂದ ಹೊಡೆದಾಗ ರಕ್ತ ಸುರಿಯುತ್ತಿದ್ದರೂ ಕವಿತಾ ಓಡಿ ಹೋಗಿ ಪರಾರಿಯಾಗಿದ್ದಾಳೆ. ಇತ್ತ ಘಟನೆ ತಿಳಿಯುತ್ತಲೇ ಓಡೋಡಿ ಬಂದ ಕವಿತಾಳ ತಮ್ಮ ಶ್ರೀಕಂಠಯ್ಯ ಆಕೆಯನ್ನ ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಅಫೇರ್ ಇರಿಸಿಕೊಂಡಿದ್ದಕ್ಕೆ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆದರು!
ಸಹೋದರರ ವಿರುದ್ದ ತಂಗಿಯ ಆರೋಪ.
ಈ ಮದ್ಯೆ ಬಹಳಷ್ಟು ಪೆಟ್ಟಾಗಿ ರಕ್ತ ಬೀಳುತ್ತಿದ್ದರಿಂದ ಕವಿತಾ ರಕ್ತದ ಮಡುವಿನಲ್ಲಿದ್ದಳು, ಬಟ್ಟೆಗಳೆಲ್ಲಾ ರಕ್ತಸಿಕ್ತಗಳಾಗಿದ್ದವು, ಇವುಗಳ ಮಧ್ಯೆಯೇ ಕವಿತಾಳನ್ನ ಆಂಬುಲೆನ್ಸ್ ಮೂಲಕ ಅಮೀನಗಡದಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಈ ವೇಳೆ ಗಾಯಗೊಂಡ ಕವಿತಾಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕವಿತಾ, ನಮ್ಮ ತಂದೆ-ತಾಯಿಯರನ್ನ ನಾನೇ ನೋಡಿಕೊಂಡು ಹೋಗುತ್ತಿದ್ದೇನೆ, ಅಣ್ಣಂದಿರು ಇಬ್ಬರೂ ಆಸ್ತಿ ವಿಚಾರವಾಗಿ ಆಗಾಗ ಬಂದು ಗಲಾಟೆ ಮಾಡುತ್ತಿದ್ದರು, ನಮ್ಮ ಸ್ವಂತ ಅಣ್ಣ ಕುಮಾರಸ್ವಾಮಿ ವಕೀಲನಾಗಿದ್ದು, ಆಸ್ತಿ ತನಗೆ ಪೂರ್ಣವಾಗಿ ಸಿಕ್ಕಿಲ್ಲವೆಂಬ ಮನೋಭಾವನೆ ಹೊಂದಿ ಇನ್ನೊಬ್ಬ ಸಹೋದರ ಚಂದ್ರಶೇಖರನೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾಳೆ.
ತಂಗಿಯ ಮೇಲಿನ ಹಲ್ಲೆಗೆ ಕಾರಣವಾಗಿದ್ದು 24 ಎಕರೆ ಜಮೀನು....
ಇನ್ನು ಕವಿತಾ, ಅವರ ತಂದೆಯ ಪೆನ್ಸನ್ನಲ್ಲಿಯೇ ಅವರನ್ನ ಸಾಕಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳು. ಈ ಮಧ್ಯೆ ಇವರ ಕುಟುಂಬಕ್ಕೆ ಸೇರಿದ ಒಟ್ಟು 24 ಎಕರೆ ಜಮೀನಿದ್ದು, ಇದರಲ್ಲಿ 9 ಎಕರೆ ಪಿತ್ರಾರ್ಜಿತ ಆಸ್ತಿ ಇದ್ದು, ಉಳಿದಿದ್ದು ಸ್ವಯಾರ್ಜಿತ ಆಸ್ತಿ ಆಗಿತ್ತು. ಆದ್ರೆ ಎಲ್ಲ 24 ಎಕರೆಯನ್ನೂ ಸಹ ಸ್ವಯಾರ್ಜಿತವಾಗಿ ಮಾಡಿಕೊಂಡು ಪಾಲು ನೀಡಬೇಕೆನ್ನೋದು ವಕೀಲ ಕುಮಾರಸ್ವಾಮಿ ವಾದವಾಗಿತ್ತು. ಆದರೆ ಇದಕ್ಕಾಗಿಯೇ ಕಳೆದ 6 ವರ್ಷಗಳ ಹಿಂದೆ ಕೋರ್ಟನಲ್ಲಿ ವ್ಯಾಜ್ಯ ಇತ್ತಂತೆ. ಅಲ್ಲಿಂದ ನಿರಂತರವಾಗಿ ಆಗಾಗ ಮನೆಗೆ ಬರೋದು ಗಲಾಟೆ ಮಾಡೋದು ಮಾಡ್ತಿದ್ದಾರಂತೆ. ಆದರೆ ಯಾವಾಗ ಆಸ್ತಿ ಪೂರ್ಣವಾಗಿ ಪಾಲು ಆಗೋದಿಲ್ಲ ಅನ್ನೋದು ಗೊತ್ತಾಯ್ತು ಅಲ್ಲಿಂದ ಈ ತೆರನಾದ ಹಲ್ಲೆಗೆ ಮುಂದಾಗಿದ್ದಾರಂತೆ.
ಅತ್ತ ಅಣ್ಣಂದಿರ ಹಲ್ಲೆ, ಇತ್ತ ಚಿಕ್ಕ ತಮ್ಮನಿಂದ ಚಿಕಿತ್ಸೆಗೆ ನೆರವು...
ಅತ್ತ ಅಣ್ಣಂದಿರು ತಂಗಿ ಕವಿತಾಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರೆ ಇತ್ತ ಕವಿತಾಳ ಚಿಕ್ಕ ತಮ್ಮ ಶ್ರೀಕಂಠ ಆಕೆಯನ್ನ ಬದುಕಿಸುವಲ್ಲಿ ಇನ್ನಿಲ್ಲದ ಪ್ರಯತ್ನ ಮಾಡಿದರು. ದಾರಿಯುದ್ದಕ್ಕೂ ತೀವ್ರ ನೋವಿನ ಯಾತನೆ ಅನುವಿಸುತ್ತಾ ಅಂಬುಲೆನ್ಸ್ ಮೂಲಕ ಸಧ್ಯ ಕವಿತಾ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಚಿಕ್ಕ ತಮ್ಮ ಶ್ರೀಕಂಠನ ಸಹಾಯದಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಈ ಸಂಭಂದ ಅಮೀನಗಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ಆದ್ರೆ ಆಸ್ತಿಗಾಗಿ ಸ್ವಂತ ತಂಗಿಯ ಮೇಲೆ ಈ ತೆರನಾದ ಮಾರಣಾಂತಿಕವಾಗಿ ಹಲ್ಲೆ ಮಾಡಿದವರ ವಿರುದ್ದ ಸೂಕ್ತ ಕ್ರಮವಾಗಬೇಕೆಂದು ಕವಿತಾಳ ಚಿಕ್ಕ ತಮ್ಮ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಆಸ್ತಿಗಾಗಿ ತಮ್ಮ ಒಡಹುಟ್ಟಿದ ತಂಗಿಯ ಮೇಲೆಯೇ ಸಹೋದರರಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿರೋದು ಅತ್ಯಂತ ನೋವಿನ ಸಂಗತಿಯಾಗಿದ್ದು, ಇನ್ನೊಮ್ಮೆ ಇಂತಹ ಪ್ರಕರಣಗಳು ಮರುಕಳಿಸದಿರಲೇ ಅನ್ನೋದೆ ಎಲ್ಲರ ಆಶಯ..