* ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್* ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ* ಬದಲಾಗಿ ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ

ಬೆಂಗಳೂರು, (ಮೇ.16): ನಾಲ್ಕು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡ ಅನಂತರಾಜು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಬದಲಾಗಿ ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿಯಾಗಿದ್ದಾರೆ. ಅವರೇ ಹನಿಟ್ರ್ಯಾಪ್‌ ಬಲೆಗೆ ಬಿದ್ದಿರುವ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಹೇರೋಹಳ್ಳಿ ವಾರ್ಡ್​ನ ನಿವಾಸಿ, ಬಿಜೆಪಿ ಮುಖಂಡ ಅನಂತರಾಜು ಮೇ 12ರ ರಾತ್ರಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲ್ನೋಟಕ್ಕೆ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿತ್ತಾದರೂ ಇದೀಗ ಸ್ಫೋಟಕ ತಿರುವು ಪಡೆದಿದೆ. 

"

ಡೆತ್‌ನೋಟ್‌ನಲ್ಲಿ ಏನಿದೆ?
 'ಪ್ರಿಯ ಸುಮಾ, ನನ್ನನ್ನು ಕ್ಷಮಿಸಿಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ಅರ್ಹನಲ್ಲ, ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ-ವಿಡಿಯೋಗಳ ಟ್ರ್ಯಾಪ್​ಗೆ ಸಿಲುಕಿ ಬ್ಲ್ಯಾಕ್​ಮೇಲ್​ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊ' ಎಂದು ಸಾವಿಗೂ ಮುನ್ನ ಅನಂತರಾಜು ಡೆತ್​ನೋಟ್ ಬರೆದಿಟ್ಟಿದ್ದಾರೆ.

ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ

ಅನಂತರಾಜು ಪತ್ನಿ ಕೊಟ್ಟ ದೂರಿನ ಮೇರೆಗೆ ಎಫ್​ಐಆರ್​ ದಾಖಲಾಗಿದೆ. ಕೆ.ಆರ್.ಪುರಂನ ನಿವಾಸಿ ರೇಖಾ ಮತ್ತು ಈಕೆಯ ಪತಿ ವಿನೋದ್ ಹಾಗೂ ಸ್ನೇಹಿತೆ ಸ್ಪಂದನ ಎಂಬುವವರು ಅಶ್ಲೀಲ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದರು. ಫೇಸ್​ಬುಕ್​ ಮೂಲಕ ರೇಖಾಳ ಪರಿಚಯ ಅನಂತರಾಜು ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರೇಖಾ ಮತ್ತು ಈಕೆಯ ಗಂಡ ವಿನೋದ್​, ಸ್ಪಂದನಾ ಮೂವರು ಸಂಚು ರೂಪಿಸಿ ಅನಂತರಾಜು ಅವರ ಖಾಸಗಿ ಫೋಟೋ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಹಿಂಸಿಸಿದ್ದಾರೆ. ಇವರ ಕಾಟ ಸಹಿಸಲಾಗದೆ ಈ ಹಿಂದೆಯೂ ಆತ್ಮಹತ್ಯೆಗೆ ಅನಂತರಾಜು ಯತ್ನಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ರೇಖಾ, ಪದೆಪದೇ ಕಾಲ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಈ ಬಗ್ಗೆ ಅನಂತರಾಜು ಅವರ ಪತ್ನಿಗೆ ಗೊತ್ತಾಗಿ, ಹೆದರಬೇಡಿ ಎಂದು ಗಂಡನಿಗೆ ಧೈರ್ಯ ತುಂಬಿದ್ದರು. ಆದರೂ ಆ ಗ್ಯಾಂಗ್​ ಬ್ಲ್ಯಾಕ್​ಮೇಲ್​ ಮಾಡುತ್ತಲೇ ಇತ್ತು. ಇದರಿಂದ ಬೇಸತ್ತ ಅನಂತರಾಜು ನೇಣಿಗೆ ಶರಣಾಗಿದ್ದಾರೆ ಎಂದು ಡೆತ್​ನೋಟ್ ಸಮೇತ ದೂರು ನೀಡಿದ್ದಾರೆ. ಇದೀಗ ಆರೋಪಿಗಳಿಗಾಗಿ ಬ್ಯಾಡರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.