ಚಿನ್ನಾಭರಣವಿದ್ದ ಬ್ಯಾಗ್ ಕದ್ದ ಆಟೋ ಚಾಲಕನಿಗಾಗಿ 10 ಸಾವಿರ ಆಟೋ ಶೋಧ, ಕೊನೆಗೂ ಸಿಕ್ಕಿಬಿದ್ದ ಕಳ್ಳ ಸೈಯದ್ ಅತೀಕ್!
ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಚಿನ್ನಾಭರಣದ ಬ್ಯಾಗ್ ಕಳವು ಮಾಡಿದ ಆಟೋ ಚಾಲಕನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ₹6.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಆಟೋವನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ಫೆ.19): ಇತ್ತೀಚಿಗೆ ಚಿನ್ನಾಭರಣವಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ನಿವಾಸಿ ಸೈಯದ್ ಅತೀಕ್ ಬಂಧಿತನಾಗಿದ್ದು, ಆರೋಪಿಯಿಂದ 107 ಗ್ರಾಂ ಚಿನ್ನಾಭರಣ ಹಾಗೂ 1 ಆಟೋ ಸೇರಿದಂತೆ ₹6.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸಾವಿರಾರು ಆಟೋಗಳ ಶೋಧ:
ಅತೀಕ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕೆಲ ದಿನಗಳ ಹಿಂದೆ ತಮಿಳುನಾಡಿಗೆ ತೆರಳಲು ಕೆ.ಆರ್.ಪುರ ರೈಲ್ವೆ ನಿಲ್ದಾಣಕ್ಕೆ ಸೈಯದ್ ಆಟೋದಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಮಹಿಳೆಯೊಬ್ಬರು ತೆರಳಿದ್ದರು. ಆ ವೇಳೆ ರೈಲ್ವೆ ನಿಲ್ದಾಣದಲ್ಲಿ ಅವರನ್ನು ನಿಲ್ಲಿಸಿದ ಬಳಿಕ ಪ್ರಯಾಣಿಕರು ಬ್ಯಾಗ್ ತೆಗೆದು ಕೊಳ್ಳುವ ಮುನ್ನವೇ ಬಾಡಿಗೆ ಪಡೆದು ಆಟೋ ಚಾಲಕ ತೆರಳಿದ್ದಾನೆ. ಈ ಬಗ್ಗೆ ರಾಮಮೂರ್ತಿನಗರ ಠಾಣೆಗೆ ಅವರು ದೂರು ಸಲ್ಲಿಸಿದರು.
ಹೆಂಡತಿ ತವರೂರಿಗೆ ಹೋಗಿದ್ದಾಳೆ, ಫಲಕದ ಮೂಲಕ ಡಂಗೂರ ಸಾರಿದ ಆಟೋ ಡ್ರೈವರ್!
ತನಿಖೆಗಿಳಿದ ಪೊಲೀಸರು, ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಟೋ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿ ಪತ್ತೆಯಾಗಿದೆ. ಬಳಿಕ ಬೆಂಗಳೂರು ನಗರದ ಸುಮಾರು 10 ಸಾವಿರಕ್ಕೂ ಅಧಿಕ ಆಟೋಗಳನ್ನು ಶೋಧಿಸಿದಾಗ ಕೊನೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.