ಬೆಂಗಳೂರಿನಲ್ಲಿ ರಸ್ತೆ ಬದಿ ಮಲಗುವ ಅನಾಥರು, ಭಿಕ್ಷಕರು ಹಾಗೂ ಒಬ್ಬಂಟಿಯಾಗಿ ಮಲಗಿದ್ದವರನ್ನು ಸುಲಿಗೆ ಮಾಡಿ ಭೀಕರವಾಗಿ ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕನ ಮತ್ತಷ್ಟು ಕರಾಳ ಮುಖದ ಕೃತ್ಯಗಳು ಬಯಲಿಗೆ ಬಂದಿವೆ.

ಬೆಂಗಳೂರು (ಮೇ 27): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಬದಿ ಮಲಗಿದ್ದ ಅನಾಥರು, ಭಿಕ್ಷಕರು ಹಾಗೂ ಒಬ್ಬಂಟಿಯಾಗಿ ಮಲಗಿದ್ದವರನ್ನು ಸುಲಿಗೆ ಮಾಡಿ ಸ್ಥಳೀಯ ಜನರನ್ನು ಭಯ ಹುಟ್ಟಿಸುವ ಉದ್ದೇಶದಿಂದ ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕನ ಮತ್ತಷ್ಟು ಕರಾಳ ಮುಖದ ಕೃತ್ಯಗಳು ಬಯಲಿಗೆ ಬಂದಿವೆ.

Add Asianetnews Kannada as a Preferred SourcegooglePreferred

ಈತ ಮೊದಲಿನಿಂದಲೂ ಹೀಗೆ ಕೊಲೆ, ಅತ್ಯಾಚಾರ, ದರೋಡೆ ಸೇರಿದಂತೆ ಇನ್ನಿತರೆ ಸಮಾಜಬಾಹಿರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಲೇ ಇದ್ದನು. ಈಗಾಘಲೇ ಕಳೆದ ನಾಲ್ಕು ವರ್ಷಗಳ ಹಿಂದೆ ಅಪರಾಧ ಕೃತ್ಯಗಳಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು 10 ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದನು. ಕೆಲವು ದಿನಗಳ ಕಾಲ ಹೋಟೆಲ್‌ನಲ್ಲಿ ಸಹಾಯಕನಾಗಿ ಹಾಗೂ ಗಾರೆ ಕೆಲಸಗಾರನಾಗಿ ಕೆಲಸ ಮಾಡಿಕೊಂಡಿದ್ದನು. ಇದಾದ ನಂತರ, ಸುಲಭವಾಗಿ ಹಣ ಗಳಿಸುವ ಮಾರ್ಗಗಳಲ್ಲಿಯೇ ಹೋಗಲು ಮುಂದಾಗಿದ್ದಾನೆ. ಇದಕ್ಕೆ ಸುರೇಶ್ ಎನ್ನುವ ಸ್ನೇಹಿತನನ್ನೂ ಜೊತೆಗೆ ಸೇರಿಸಿಕೊಂಡಿದ್ದಾನೆ. ಇಬ್ಬರೂ ಸೇರಿ ರಾತ್ರಿ ವೇಳೆ ನಿಶಾಚರ ಪ್ರಾಣಿಗಳಂತೆ ಸಂಚಾರ ಮಾಡುತ್ತಾ ತಡರಾತ್ರಿ ವಳೆ ನಗರದಲ್ಲಿ ಒಬ್ಬಂಟಿಯಾಗಿ ಸಂಚಾರ ಮಾಡುವವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದರು.

ಕರಾವಳಿ ಹುಡ್ಗೀರಿಗೆ ಎಡಿಟೆಡ್ ಬೆತ್ತಲೆ ಫೋಟೋ ತೋರಿಸಿ ಅತ್ಯಾಚಾರವೆಸಗುತ್ತಿದ್ದ ರೇಪಿಸ್ಟ್ ಗ್ಯಾಂಗ್ ಅರೆಸ್ಟ್!

ಜೈಲಿನಿಂದ ಬಂದ ನಂತರ ಪುನಃ ಸಮಾಜಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಆದರೆ, ಈತನಿಗೆ ಸುಲಭವಾಗಿ ಹಣ ಸಿಗುತ್ತಿದ್ದಂತೆ ಅದನ್ನು ಮದ್ಯ ಸೇವನೆ ಸೇರಿ ಇತರೆ ಕೃತ್ಯಗಳಿಗೆ ಬಳಕೆ ಮಾಡಿಕೊಂಡಿದ್ದಾನೆ. ಇದಾದ ನಂತರ ಮೇ 12ರಂದು ಸಿಟಿ ಮಾರ್ಕೆಟ್ ಬಳಿ ಸಿಗರೇಟ್ ವಿಚಾರಕ್ಕೆ ಜಗಳ ಮಾಡಿಕೊಂಡು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹೊಡೆದು ಕೊಲೆ ಮಾಡಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬಂದಿದ್ದನು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

ಇದಾದ ನಂತರ ಕೊಲೆಯ ಬಗ್ಗೆ ಒಂದಿನಿತೂ ಪಾಪ ಪ್ರಜ್ಞೆಯನ್ನೂ ಇಟ್ಟುಕೊಳ್ಳದೇ ಪುನಃ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಇದಕ್ಕೆ ತನ್ನ ಸ್ನೇಹಿತ ಸುರೇಶ್ ಕೂಡ ಸಾಥ್ ನೀಡುತ್ತಿದ್ದನು. ಆದರೆ, ಮೇ 18ರಂದು ಸಾರ್ವಜನಕರಿಂದ ಕದ್ದ ಮೊಬೈಲ್ ವಿಚಾರಕ್ಕೆ ಇಬ್ಬರೂ ಸ್ನೇಹಿತರ ನಡುವೆ ಕದ್ದ ಮೊಬೈಲ್ ವಿಚಾರವಾಗಿ ಸಿಟಿ ಮಾರ್ಕೆಟ್ ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮೊಬೈಲ್‌ಗಾಗಿ ಹಠವಿಡಿದಿದ್ದ ಸ್ನೇಹಿತನನ್ನು ಸಿಟಿ ಮಾರ್ಕೆಟ್ ಹಿಂಬಾಗದ ಕಾಂಪ್ಲೆಕ್ಸ್ ಬಳಿ ಕರೆದೊಯ್ದು ಹೊಡೆದು ಭೀಕರವಾಗಿ ಕೊಲೆ ಮಾಡಿ ಬಂದಿದ್ದನು.

ಬದುಕಿರದ ಅಮ್ಮನ ಬಗ್ಗೆ ಕೆಟ್ಟ ಮಾತು: 10 ವರ್ಷದ ಬಾಲಕನ ಹತ್ಯೆಗೈದ 13ರ ಬಾಲಕ!

ಇನ್ನು ವಾರದಲ್ಲಿ ಎರಡು ಪ್ರಕರಣಗಳು ಒಂದೇ ಮಾದರಿಯಲ್ಲಿ ರಸ್ತೆ ಬದಿಯಲ್ಲಿಯೇ ಕಲ್ಲು ಎತ್ತುಹಾಕಿ ಕೊಲೆ ಮಾಡಿದ ಘಟನೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳು ಮತ್ತಿತರ ಸಾಕ್ಷಿಗಳ ಆಧಾರದಲ್ಲಿ ಪೊಲೀಸರು ನಟೋರಿಯಸ್ ಕೊಲೆಗಾರ ಗಿರೀಶನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಆರೋಪಿ ಗಿರೀಶ್ ವಿರುದ್ಧ ಈ ಮೊದಲೇ ಲೈಂಗಿಕ ದೌರ್ಜನ್ಯ, ದರೋಡೆ ಸಂಚು ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಈತನ ವಿರುದ್ಧ ಸುಬ್ರಮಣ್ಯಪುರ, ಬನಶಂಕರಿ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಸದ್ಯಕ್ಕೆ ಎರಡು ಕೊಲೆ ಕೇಸ್‌ಗಳ ಆಧಾರದಲ್ಲಿ ಈತನ್ನು ಬಂಧಿಸಲಾಗಿದ್ದು, ಬನಶಂಕರಿ ಠಾಣೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.