ಶಂಕಿತ ಉಗ್ರ ನಾಸಿರ್‌ ಮೂಲಕ ಜುನೈದ್‌ಗೆ ಎಲ್‌ಇಟಿ ಕಮಾಂಡರ್‌ಗಳ ಪರಿಚಯವಾಗಿದೆ. ಈ ಸಂಪರ್ಕ ಜಾಲವನ್ನು ಬಳಸಿಕೊಂಡು 2021ರಲ್ಲಿ ದೇಶ ತೊರೆದು ಆತ ಅಪ್ಘಾನಿಸ್ತಾನ ಸೇರಿದ್ದಾನೆ ಎಂಬ ಶಂಕೆ ಇದೆ. ಪ್ರಸ್ತುತ ವಿದೇಶದಲ್ಲೇ ನೆಲೆಸಿರುವ ಆತ, ಅಲ್ಲಿಂದಲೇ ತನ್ನ ಸಹಚರರ ಮೂಲಕ ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ. ಈಗಾಗಲೇ ಜುನೈದ್‌ ಕುರಿತು ಇಂಟರ್‌ಪೋಲ್‌ಗೆ ಸಹ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು(ಜು.20):  ಮೊದಲು ಕುರಿ ವ್ಯಾಪಾರಿ ಆಗಿದ್ದ ಮಹಮ್ಮದ್‌ ಜುನೈದ್‌ ಈಗ ಮೋಸ್ಟ್‌ ವಾಟೆಂಡ್‌ ಉಗ್ರನಾಗಿ ಬೆಳೆದು ಆತಂಕ ಮೂಡಿಸಿದ್ದಾನೆ. ಹೆಬ್ಬಾಳದ ಸುಲ್ತಾನ್‌ ಪಾಳ್ಯದಲ್ಲಿ ತನ್ನ ಕುಟುಂಬ ಜತೆ ಜುನೈದ್‌ ವಾಸವಾಗಿದ್ದ. ಹಣಕಾಸು ವಿಚಾರವಾಗಿ ಜೆ.ಸಿ.ನಗರದ ನೂರ್‌ ಅಹಮ್ಮದ್‌ ಹಾಗೂ ಜುನೈದ್‌ ಮಧ್ಯೆ ಜಗಳವಾಗಿತ್ತು. ಆಗ ಜುನೈದ್‌ನ ಮನೆಗೆ ನುಗ್ಗಿ ಆತನ ಪತ್ನಿ ಎದುರಿನಲ್ಲೇ ಅಂಗಿ ತೆಗೆಸಿ ನೂರ್‌ ಹಲ್ಲೆ ನಡೆಸಿ ಬಂದಿದ್ದ. ತನ್ನ ಪತ್ನಿ ಮುಂದೆ ಹಲ್ಲೆ ಮಾಡಿ ಅವಮಾನಿಸಿದ್ದರಿಂದ ಕೆರಳಿ ಜುನೈದ್‌ ಪ್ರತೀಕಾರ ತೀರಿಸಲು ನಿರ್ಧರಿಸಿದ್ದ.

ಅಂತೆಯೇ 2017ರ ಸೆಪ್ಟೆಂಬರ್‌ 30ರಂದು ತನ್ನ ಸಹಚರರ ಜತೆ ಸೇರಿ ನೂರ್‌ನನ್ನು ಅಪಹರಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿಗೆ ಕರೆದೊಯ್ದು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಜುನೈದ್‌ ಹಾಗೂ ಆತನ 21 ಮಂದಿ ಸಹಚರರನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ ಜುನೈದ್‌ ಹೊರ ಬರುವ ವೇಳೆಗೆ ಜಿಹಾದಿಯಾಗಿ ಬದಲಾಗಿದ್ದ. ಜೈಲಿನಲ್ಲಿ ಆತನಿಗೆ ಶಂಕಿತ ಉಗ್ರ ನಾಸಿರ್‌ನ ಸಂಪರ್ಕವಾಗಿತ್ತು. ಬಳಿಕ 2020ರಲ್ಲಿ ರಕ್ತ ಚಂದನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತನಾಗಿ ಮತ್ತೆ ಜೈಲು ಸೇರಿದ ಜುನೈದ್‌, ಆನಂತರ ಜಾಮೀನು ಪಡೆದು ಹೊರಬಂದು ದೇಶ ತೊರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಪ್ಲ್ಯಾನ್‌: ಐವರು ಶಂಕಿತ ಉಗ್ರರು ಅರೆಸ್ಟ್‌; ಮಾಸ್ಟರ್‌ಮೈಂಡ್‌ ಎಸ್ಕೇಪ್‌!

ಅಪ್ಘಾನಿಸ್ತಾನ ಗಡಿಯಲ್ಲಿ ಜುನೈದ್‌:

ಶಂಕಿತ ಉಗ್ರ ನಾಸಿರ್‌ ಮೂಲಕ ಜುನೈದ್‌ಗೆ ಎಲ್‌ಇಟಿ ಕಮಾಂಡರ್‌ಗಳ ಪರಿಚಯವಾಗಿದೆ. ಈ ಸಂಪರ್ಕ ಜಾಲವನ್ನು ಬಳಸಿಕೊಂಡು 2021ರಲ್ಲಿ ದೇಶ ತೊರೆದು ಆತ ಅಪ್ಘಾನಿಸ್ತಾನ ಸೇರಿದ್ದಾನೆ ಎಂಬ ಶಂಕೆ ಇದೆ. ಪ್ರಸ್ತುತ ವಿದೇಶದಲ್ಲೇ ನೆಲೆಸಿರುವ ಆತ, ಅಲ್ಲಿಂದಲೇ ತನ್ನ ಸಹಚರರ ಮೂಲಕ ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ. ಈಗಾಗಲೇ ಜುನೈದ್‌ ಕುರಿತು ಇಂಟರ್‌ಪೋಲ್‌ಗೆ ಸಹ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಸಿರ್‌ ಜತೆ ವಾಟ್ಸ್‌ಆ್ಯಪ್‌ ಕಾಲ್‌ :

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಎಲ್‌ಇಟಿ ಉಗ್ರ ನಾಸಿರ್‌ ಹಾಗೂ ಎಲ್‌ಇಟಿ ಕಮಾಂಡರ್‌ಗಳು ವಾಟ್ಸ್‌ ಆ್ಯಪ್‌ ಸೇರಿದಂತೆ ಇಂಟರ್‌ನೆಟ್‌ ಮೂಲಕ ಸಂವಹನ ನಡೆಸಿದ್ದರು ಎಂಬ ಆತಂಕಕಾರಿ ವಿಷಯ ಸಿಸಿಬಿ ತನಿಖೆಯಲ್ಲಿ ಹೊರಬಂದಿದೆ.

ಜೈಲಿನಿಂದಲೇ ಪಾಕಿಸ್ತಾನದ ಎಲ್‌ಇಟಿ ಪ್ರಮುಖ ಕಮಾಂಡರ್‌ಗಳ ಜತೆ ನಾಸಿರ್‌ ನೇರ ಸಂಪರ್ಕದಲ್ಲಿದ್ದ. ಅಲ್ಲದೆ ವಾಟ್ಸ್‌ಆಪ್‌ ಸೇರಿದಂತೆ ಇತರೆ ಸಂವಹನ ಆ್ಯಪ್‌ಗಳನ್ನು ಬಳಸಿಕೊಂಡು ಆತ ಇಂಟರ್‌ನೆಟ್‌ ಕಾಲ್‌ ಮಾಡುತ್ತಿದ್ದ. ಜುನೈದ್‌ ಹಾಗೂ ನಾಸಿರ್‌ ನಡುವೆ ಸಹ ಮೊಬೈಲ್‌ ಮಾತುಕತೆ ನಡೆದಿದೆ ಎಂದು ಮೂಲಗಳು ಹೇಳಿವೆ.