ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮುಖ್ಯ ಶಿಕ್ಷಕಿಯೊಬ್ಬರು, ಶಾಲಾ ಆಡಳಿತ ಮಂಡಳಿ ಚುನಾವಣೆಯ ರಾಜಕೀಯ ದ್ವೇಷದಿಂದ ತಮ್ಮನ್ನು ಅನ್ಯಾಯವಾಗಿ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಮಗೆ ನ್ಯಾಯ ಸಿಗದಿದ್ದರೆ ಆತ್ಮ೧ಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವಿಡಿಯೋ ಮೂಲಕ ಕಣ್ಣೀರು.

ಚಿಕ್ಕೋಡಿ(ಡಿ.20): ಶಾಲಾ ಆಡಳಿತ ಮಂಡಳಿ ಚುನಾವಣೆಯ ವಿಚಾರದಲ್ಲಿ ಉಂಟಾದ ರಾಜಕೀಯ ದ್ವೇಷಕ್ಕೆ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿರುವ ಮುಖ್ಯ ಶಿಕ್ಷಕಿಯೊಬ್ಬರು, ತಮಗೆ ನ್ಯಾಯ ಸಿಗದಿದ್ದರೆ ಆತ್ಮ೧ಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವಿಡಿಯೋ ಮೂಲಕ ಕಣ್ಣೀರು ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಎಸ್‌ಡಿಎಂಸಿ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ

ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ್ ಈ ಸಂಕಷ್ಟಕ್ಕೆ ಸಿಲುಕಿದವರು. ಶಾಲೆಯ ಎಸ್‌ಡಿಎಂಸಿ (SDMC) ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ, ಪವನ್ ಪಾಟೀಲ್ ಎಂಬುವವರು ಕಾನೂನುಬಾಹಿರವಾಗಿ ಚುನಾವಣೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಮುಖ್ಯ ಶಿಕ್ಷಕಿ ಸುರೇಖಾ ಅವರು ಅಂದು ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿದ್ದರು. ತಮ್ಮವರೇ ಅಧ್ಯಕ್ಷರಾಗಲಿಲ್ಲ ಎಂಬ ಕಾರಣಕ್ಕೆ ಪವನ್ ಪಾಟೀಲ್ ಶಿಕ್ಷಕಿಯ ಮೇಲೆ ದ್ವೇಷ ಸಾಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸಚಿವರ ಹೆಸರು ಬಳಸಿ ಶಿಕ್ಷಕಿಯ ಅಮಾನತು

ಆರೋಪಿ ಪವನ್ ಪಾಟೀಲ್ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಹೇಳಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಮೇಲೆ ಒತ್ತಡ ಹೇರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುರೇಖಾ ಅವರ ಮೇಲೆ ಸುಳ್ಳು ದೂರುಗಳನ್ನು ಹೊರಿಸಿ ಅವರನ್ನು ಅಮಾನತು ಮಾಡುವಂತೆ ಪ್ರಭಾವ ಬೀರಲಾಗಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದ ಬಿಇಒ ಪ್ರಭಾವತಿ ಪಾಟೀಲ್ ಅವರು ಯಾವುದೇ ತಪ್ಪು ಮಾಡದಿದ್ದರೂ ಮುಖ್ಯ ಶಿಕ್ಷಕಿ ಸುರೇಖಾ ಅವರನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

ಸೆಲ್ಫಿ ವಿಡಿಯೋ ಮೂಲಕ ನ್ಯಾಯಕ್ಕಾಗಿ ಮನವಿ

ತಮ್ಮ ಅಮಾನತು ಆದೇಶದಿಂದ ತೀವ್ರ ಮನನೊಂದಿರುವ ಸುರೇಖಾ ಅವರು ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. 'ನಾನು ಯಾವುದೇ ತಪ್ಪು ಮಾಡಿಲ್ಲ, ಕೇವಲ ರಾಜಕೀಯ ಒತ್ತಡದಿಂದ ನನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನನಗೆ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ. ಒಂದು ವೇಳೆ ನ್ಯಾಯ ಸಿಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಕಣ್ಣೀರಿಡುತ್ತಾ ಎಚ್ಚರಿಕೆ ನೀಡಿದ್ದಾರೆ. ಶಾಲಾ ಆವರಣದಲ್ಲೂ ರಾಜಕೀಯ ತಂದು ಶಿಕ್ಷಕರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ನಾಯಕರ ಬೆಂಬಲಿಗರು ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶಿಕ್ಷಕಿಯ ಆತ್ಮ೧ಹತ್ಯೆ ಬೆದರಿಕೆಯಿಂದಾಗಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.