ಬಿಬಿಎಂಪಿ ಕ್ಯಾಂಟೀನ್ನಲ್ಲಿ ತೀವ್ರ ನಷ್ಟ: ಮಾಲೀಕ ಆತ್ಮಹತ್ಯೆ
23 ವರ್ಷಗಳಿಂದ ಬಿಬಿಎಂಪಿ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಲಿಂಗರಾಜು| ಕ್ಯಾಂಟೀನ್ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕುಟುಂಬಸ್ಥರ ಹೇಳಿಕೆ| ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು|
ಬೆಂಗಳೂರು(ಸೆ.14): ಬಿಬಿಎಂಪಿ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಕ್ಯಾಂಟೀನ್ ಮಾಲೀಕ ನಷ್ಟ ಅನುಭವಿಸಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ಬೈಲಸಂದ್ರದ ನಿವಾಸಿ ಲಿಂಗರಾಜು ಆತ್ಮಹತ್ಯೆ ಮಾಡಿಕೊಂಡವರು. ಲಿಂಗರಾಜು ಸುಮಾರು 23 ವರ್ಷಗಳಿಂದ ಬಿಬಿಎಂಪಿ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಲಾಕ್ಡೌನ್ನಿಂದಾಗಿ ಕ್ಯಾಂಟೀನ್ ಮುಚ್ಚಿದ್ದ ಲಿಂಗರಾಜು ಸಾಕಷ್ಟುಅನುಭವಿಸಿದ್ದರು. ಅಲ್ಲದೆ, ಪಾಲಿಕೆ ಅಂಗಳದಲ್ಲಿ ಐಡಿಸಿ ಕ್ಯಾಂಟೀನ್ಗೆ ಅವಕಾಶ ಮಾಡಿಕೊಡಲಾಗಿತ್ತು. ಹೋಟೆಲ್, ಮೊಬೈಲ್ ಯುನಿಟ್ ಪಾಲಿಕೆ ಆವರಣಕ್ಕೆ ಬಂದಿತ್ತು. ಇದರಿಂದ ಕೂಡ ನಷ್ಟ ಅನುಭವಿಸಿದ್ದರು. ಹಲವರ ಬಳಿ ಲಿಂಗರಾಜು ಸಾಲ ಪಡೆದಿದ್ದರು. ಇದೆಲ್ಲದರಿಂದ ಲಿಂಗರಾಜು ಒತ್ತಡಕ್ಕೆ ಒಳಗಾಗಿದ್ದರು. ಶನಿವಾರ ರಾತ್ರಿ ಎಂದಿನಂತೆ ಊಟ ಮಾಡಿ ಕೊಠಡಿಗೆ ತೆರಳಿದ್ದ, ಲಿಂಗರಾಜು ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋಲಾರ; 5 ವರ್ಷದ ಮಗಳ ಕೊಂದು ನೇಣಿಗೆ ಶರಣಾದ ಅರ್ಚಕರ ಪತ್ನಿ
ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿಲ್ಲ. ಕ್ಯಾಂಟೀನ್ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕುಟುಂಬಸ್ಥರ ಹೇಳಿಕೆಯಿಂದ ತಿಳಿದು ಬಂದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.