ಸಬ್ಸಿಡಿ ದರದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ರೈತರಿಗೆ ನಂಬಿಸಿ 17 ಕೋಟಿ ರು. ವಂಚಿಸಿದ್ದ ಆರೋಪದ ಮೇರೆಗೆ ದಾವಣಗೆರೆ ನಗರದ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದಾವಣಗೆರೆ (ಮಾ.16) : ಸಬ್ಸಿಡಿ ದರದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ರೈತರಿಗೆ ನಂಬಿಸಿ 17 ಕೋಟಿ ರು. ವಂಚಿಸಿದ್ದ ಆರೋಪದ ಮೇರೆಗೆ ದಾವಣಗೆರೆ ನಗರದ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದಾವಣಗೆರೆ(Davanagere) ನಗರದ ಮಂಡಿಪೇಟೆಯ ಯೂಕೋ ಬ್ಯಾಂಕ್‌(Mandipete )ನ ವ್ಯವಸ್ಥಾಪಕ ಭಕ್ತಿಭೂಷಣ್‌, ಸಿಜಿಆರ್‌ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್‌ ರೆಡ್ಡಿ(Vivek reddy uco bank manager) ಹಾಗೂ ಏಜೆಂಟ್‌ ಸಂತೋಷ್‌ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಬ್ಯಾಂಕ್‌ನ ಸಿಬ್ಬಂದಿ ಸೇರಿದಂತೆ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.

ಕೆವೈಸಿ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ : ಬ್ಯಾಂಕ್ ಮ್ಯಾನೇಜರ್ ಅಂತಾ ಖದೀಮರು ನಿಮಗೂ ಕರೆ ಮಾಡ್ತಾರೆ ಎಚ್ಚರ!

ಮೂರು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಸುಮಾರು 43 ರೈತರಿಗೆ ಸಬ್ಸಿಡಿ ನೆಪದಲ್ಲಿ ಆರೋಪಿಗಳು ವಂಚಿಸಿದ್ದರು. ಇತ್ತೀಚಿಗೆ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ಅಂತೆಯೇ ಸಿಐಡಿ ಎಡಿಜಿಪಿ ಕೆ.ವಿ.ಶರತ್‌ ಚಂದ್ರ ಮಾರ್ಗದರ್ಶನದಲ್ಲಿ ಎಸ್ಪಿ ಎಂ.ಡಿ.ಶರತ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾಲಿ ಗೋದಾಮು ತೋರಿಸಿ ಟೋಪಿ:

ವಿವೇಕ ರೆಡ್ಡಿ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆತನ ಮೇಲೆ ವಂಚನೆ ಕೃತ್ಯಗಳು ದಾಖಲಾಗಿವೆ. ಈ ಹಿಂದೆ ರೆಡ್ಡಿ ವಿರುದ್ಧ ಸಿಐಡಿ ತನಿಖೆ ಸಹ ನಡೆದಿತ್ತು. ಅಡಿಕೆ ವ್ಯಾಪಾರ ನೆಪದಲ್ಲಿ ದಾವಣೆಗೆರೆ ಜಿಲ್ಲೆಗೆ ಪ್ರವೇಶಿಸಿದ ವಿವೇಕ್‌ ರೆಡ್ಡಿ, ‘ಸಿಜಿಆರ್‌’ ಹಾಗೂ ‘ವಿನ್‌ವೇ’ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿದ್ದ. ತನ್ನ ಕಂಪನಿಗೆ ಕೆಲವು ಏಜೆಂಟ್‌ಗಳನ್ನು ಕೂಡಾ ರೆಡ್ಡಿ ನೇಮಿಸಿದ್ದ.

ಅಡಿಕೆ ವ್ಯಾಪಾರದ ನೆಪದಲ್ಲಿ ರೈತರನ್ನು ಸಂಪರ್ಕಿಸಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸುವುದು ಈತನ ಕೃತ್ಯವಾಗಿತ್ತು. ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಅಣಜಿ ಸೇರಿದಂತೆ ನಾಲ್ಕು ಕಡೆ ಅಡಿಕೆ ಸಂಗ್ರಹಕ್ಕೆ ರೆಡ್ಡಿ ಗೋದಾಮು ಸಹ ತೆರೆದಿದ್ದ. ಗೋದಾಮಿನ ಹೊರನೋಟಕ್ಕೆ ಕಾಣುವಂತೆ ಮಾತ್ರ ಅಡಿಕೆ ತುಂಬಿದ್ದ. ಆದರೆ ಗೋದಾಮುಗಳ ಒಳ ಭಾಗದಲ್ಲಿ ಖಾಲಿಯಾಗಿದ್ದವು. ಒಂದು ಕಡೆ ಉಗ್ರಾಣ ಇಲ್ಲದೆ ಇದ್ದರೂ ದಾಖಲೆಯಲ್ಲಿ ತೋರಿಸಿದ್ದ ರೆಡ್ಡಿ, ಕೊನೆಗೆ ಖಾಲಿ ಗೋದಾಮು ತೋರಿಸಿಯೇ ರೈತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೋಟ್ಯಾಂತರ ಸಾಲ ಪಡೆದು ವಂಚಿಸಿದ್ದ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

2019ರಲ್ಲಿ ಯೂಕೋ ಬ್ಯಾಂಕ್‌ನಲ್ಲಿ 5 ಲಕ್ಷ ರು ಸಾಲ ಕೊಡಿಸುತ್ತೇನೆ. ಇದರಲ್ಲಿ ನಿಮಗೆ 2 ಲಕ್ಷ ರು ಸಬ್ಸಿಡಿ ಹಣ ವಾಪಸ್‌ ಕೊಡುತ್ತಾರೆ ಎಂದು ನಂಬಿಸಿ ರೈತರಿಂದ ಪಹಣಿ, ಆಧಾರ್‌ ಕಾರ್ಡ್‌, ಐಡಿ ಕಾರ್ಡ್‌ ಅನ್ನು ಆರೋಪಿಗಳು ಸಂಗ್ರಹಿಸಿದ್ದರು. ರೆಡ್ಡಿ ಕೃತ್ಯಕ್ಕೆ ಯೂಕೋ ಬ್ಯಾಂಕ್‌ನ ವ್ಯವಸ್ಥಾಪಕ ಭಕ್ತಿಭೂಷಣ್‌, ಉದ್ಯೋಗಿಗಳಾದ ಸುನೀಲ್‌ ಹಾಗೂ ಸಿದ್ದೇಶ್‌ ಸಾಥ್‌ ಕೊಟ್ಟಿದ್ದರು. ಈ ದಾಖಲೆ ಬಳಸಿ ಯೂಕೋ ಬ್ಯಾಂಕ್‌ನಲ್ಲಿ ಸಾಲ ಪಡೆದ ಆರೋಪಿಗಳು, ನಂತರ ರೈತರಿಗೆ ಸಬ್ಸಿಡಿ ಹಣ ಎಂದು ಹೇಳಿ 1 ಲಕ್ಷ ರು ನಿಂದ 50 ಸಾವಿರ ರು.ವರೆಗೆ ನಗದು ಹಣ ವಿತರಿಸಿದ್ದರು. ಆದರೆ ಬ್ಯಾಂಕ್‌ನ ಪಾಸ್‌ ಬುಕ್‌ನಲ್ಲಿ ನಮೂದಾಗಿರುವ ಹಣವನ್ನು ರೈತರು ಪರಿಶೀಲಿಸಿದಾಗ ತಮ್ಮ ಹೆಸರಿನಲ್ಲಿ ತಲಾ 48 ಲಕ್ಷ ರು ದಂತೆ ಒಟ್ಟು 17 ಕೋಟಿ ಸಾಲ ಪಡೆದಿರುವುದು ಗೊತ್ತಾಗಿದೆ. ಈ ಹಣವನ್ನು ಸಿಜಿಆರ್‌ ಕಂಪನಿಗೆ ಆರ್‌ಟಿಜಿಎಸ್‌ ಮೂಲಕ ಯೂಕೋ ಬ್ಯಾಂಕ್‌ ವ್ಯವಸ್ಥಾಪಕ ಹಣ ವರ್ಗಾಯಿಸಿದ್ದರು.

ಈ ಬಗ್ಗೆ ಪ್ರಶ್ನಿಸಿದ ರೈತರಿಗೆ ಅಂದು ತಪ್ಪು ಸರಿಪಡಿಸುವುದಾಗಿ ಹೇಳಿ ವ್ಯವಸ್ಥಾಪಕರು ಸಾಗ ಹಾಕಿದ್ದರು. ಆದರೆ 2020ರಲ್ಲಿ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‌ ನೋಟಿಸ್‌ ನೀಡಿದ್ದರು. ಆಗ ರೈತರು ವಿಚಾರಿಸಿದಾಗ ಸಿಜಿಆರ್‌ ಕಂಪನಿ, ಅಣಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಯಾಗಳಹಳ್ಳಿಯ ಗ್ರಾಮದ ನಾಗರಾಜ್‌ ಎಂಬುವವರಿಗೆ ಸೇರಿದ ಅಡಿಕೆ ಗೋಡಾನ್‌ನಲ್ಲಿರುವ ಅಡಿಕೆ ಆಧಾರರದ ಮೇಲೆ ಮತ್ತು ಬೆಳೆ ಮೇಲೆ ಸಾಲ ಮಂಜೂರು ಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮೂರು ವರ್ಷಗಳ ಬಳಿಕ ದಾಳಿ

ರೈತರಿಗೆ ಮಹಾಮೋಸ ನಡೆದರೂ ಕೂಡಾ ಸ್ಥಳೀಯ ಪೊಲೀಸರ ತನಿಖೆ ನಡೆಸದೆ ಪ್ರಕರಣಕ್ಕೆ ಎಳ್ಳು ನೀರು ಬಿಟ್ಟಿದ್ದರು. ಕೊನೆಗೆ ರೈತರ ಪ್ರತಿಭಟನೆಗೆ ಎಚ್ಚೆತ್ತ ಸರ್ಕಾರವು, ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತು. ಮೂರು ವರ್ಷಗಳ ಬಳಿಕ ಕೇಸ್‌ ರೀ ಓಪನ್‌ ಮಾಡಿದ ಸಿಐಡಿ, ಕೊನೆಗೆ ಪ್ರಮುಖ ಆರೋಪಿಗಳನ್ನು ಸೆರೆ ಹಿಡಿದಿದೆ.

ICICI Bank Fraud Case: ಬಂಧಿತರಾಗಿದ್ದ ಚಂದಾ ಕೊಚ್ಚರ್‌, ಪತಿ ಬಿಡುಗಡೆಗೆ ಬಾಂಬೆ ಹೈ ಆದೇಶ

ನಾಲ್ಕು ಜಿಲ್ಲೆಗಳ ರೈತರಿಗೆ ವಂಚನೆ

ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ಆರೋಪಿಗಳು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಲವು ದಾಖಲೆಗಳ ಸಂಗ್ರಹ ಕಾರ್ಯ ಮುಂದುವರೆದಿದೆÜ ಎಂದು ಅಧಿಕಾರಿಗಳು ತಿಳಿಸಿದ್ದಾರೆ.