ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಅಲ್ಲಿ ಮದ್ಯಪಾನ ಮಾಡಿಕೊಂಡು ಬಂದಿದ್ದು, ಈ ವಿಚಾರ ಪೋಷಕರಿಗೆ ತಿಳಿಯುತ್ತದೆ ಎಂಬ ಭಯದಲ್ಲಿ ನೇಣು ಬಿಗಿದುಕೊಂಡು ಆ*ಹತ್ಯೆಗೆ ಶರಣಾಗಿದ್ದಾನೆ.
ಬಾಳೆಹೊನ್ನೂರು (ನ.12): ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಅಲ್ಲಿ ಮದ್ಯಪಾನ ಮಾಡಿಕೊಂಡು ಬಂದಿದ್ದು, ಈ ವಿಚಾರ ಪೋಷಕರಿಗೆ ತಿಳಿಯುತ್ತದೆ ಎಂಬ ಭಯದಲ್ಲಿ ನೇಣು ಬಿಗಿದುಕೊಂಡು ಆ*ಹತ್ಯೆಗೆ ಶರಣಾಗಿರುವ ಘಟನೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮೇಲ್ಪಾಲ್ ಸಮೀಪದ ಗಂಗೋಜಿಯಲ್ಲಿ ನಡೆದಿದೆ. ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರವಚನ್ (13) ನೇಣಿಗೆ ಶರಣಾದ ವಿದ್ಯಾರ್ಥಿ.
ಈತ ಭಾನುವಾರ ಅದೇ ಊರಿನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು, ತನ್ನ ಸ್ನೇಹಿತರೊಂದಿಗೆ ಸೇರಿ ಮದ್ಯಪಾನ ಮಾಡಿದ್ದಾನೆ. ಬಳಿಕ ಮನೆಗೆ ವಾಪಾಸ್ ಬಂದಿದ್ದು, ಈ ವೇಳೆ ತಾನು ಮದ್ಯಪಾನ ಮಾಡಿದ್ದು ಪೋಷಕರಿಗೆ ತಿಳಿಯುತ್ತದೆ ಎಂಬ ಭಯದಲ್ಲಿ ನೇಣು ಹಾಕಿಕೊಂಡು ಆ*ಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ಆ*ಹತ್ಯೆ
ಪ್ರೀತಿಯ ಹೆಸರಿನಲ್ಲಿ ಪ್ರಿಯಕರನಿಂದ ಆದ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ಯುವತಿ ಒಬ್ಬಳು ತನ್ನ ಜೀವವನ್ನೇ ತ್ಯಜಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಜಾಗರವಳ್ಳಿ ಗ್ರಾಮದ ಜಯರಾಮ ನಾಯಕ್ ಹಾಗೂ ಶೋಭಾ ದಂಪತಿ ಪುತ್ರಿ ಪ್ರಿಯಾಂಕ (21) ಅವರು ಕಳೆದ ಅಕ್ಟೋಬರ್ 30 ರಂದು ಗುರುವಾರ ಬೆಂಗಳೂರಿನಲ್ಲಿ ಆ*ಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಆಲೂರು ತಾಲೂಕಿನ ಕಲ್ಕೆರೆ ಪೇಟೆಯ ಸುಮಂತ್ (20) ಎಂಬ ಯುವಕ ಈ ಘಟನೆಯಲ್ಲಿ ಪ್ರಮುಖ ಆರೋಪಿ. ಕಳೆದ ಕೆಲ ವರ್ಷಗಳಿಂದ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದ್ದು, ಇಬ್ಬರೂ ಕೆಲಸ ನಿಮಿತ್ತ ಬೆಂಗಳೂರಿನ ನೆಲಗದರಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಆದರೆ, ಪ್ರಿಯಕರನ ವರ್ತನೆ ನಿಧಾನವಾಗಿ ಕಿರುಕುಳದ ರೂಪ ತಾಳಿತ್ತು. ಕುಟುಂಬದವರು ಹೇಳುವ ಪ್ರಕಾರ, ಸುಮಂತ್ ತನ್ನ ಪ್ರೇಯಸಿಯ ಮೇಲೆ ಅನಾವಶ್ಯಕ ಅನುಮಾನಪಡುತ್ತಿದ್ದ. ಆಗಾಗ ಜಗಳವಾಡುತ್ತಿದ್ದ. ಹಲವಾರು ಬಾರಿ ಬೈಗುಳ, ಬೆದರಿಕೆ ನೀಡುತ್ತಿದ್ದನೆಂದು ತಾಯಿ ಶೋಭಾ ತಿಳಿಸಿದ್ದಾರೆ. ಒಂದು ಹಂತದಲ್ಲಿ ಸುಮಂತ್, ನೀನು ಬದುಕಬಾರದು, ಸಾಯಬೇಕು ಎಂದು ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ. ಈ ಮಾತುಗಳಿಂದ ತೀವ್ರ ನೊಂದ ಪ್ರಿಯಾಂಕ, ಕಳೆದ ಅಕ್ಟೋಬರ್ 30ರ ಗುರುವಾರ ರಾತ್ರಿ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ಹತ್ಯೆ ಮಾಡಿಕೊಂಡಿದ್ದಾಳೆ.
