ಅನ್ಯಕೋಮಿನ ಯುವಕನ ಲವ್ ಜಿಹಾದ್ ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ್ದು, ಪೊಲೀಸರ ಎದುರೇ ನೈತಿಕ ಪೊಲೀಸ್ ಗಿರಿ ನಡೆಸುವ ಮೂಲಕ ಮಂಗಳೂರು ಮತ್ತೆ ಸುದ್ದಿಯಾಗಿದೆ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಮಂಗಳೂರು (ಡಿ.6): ಕಡಲ ನಗರಿ ಮಂಗಳೂರು ಮತ್ತೆ ನೈತಿಕ ಪೊಲೀಸ್ ಗಿರಿ ಮೂಲಕ ಸುದ್ದಿಯಾಗಿದೆ. ಅನ್ಯಕೋಮಿನ ಯುವಕನ ಲವ್ ಜಿಹಾದ್ ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ್ದು, ಪೊಲೀಸರ ಎದುರೇ ನೈತಿಕ ಪೊಲೀಸ್ ಗಿರಿ ನಡೆಸುವ ಮೂಲಕ ಮಂಗಳೂರು ಮತ್ತೆ ಸುದ್ದಿಯಾಗಿದೆ. ಮಂಗಳೂರಿನ ಕಂಕನಾಡಿ ಬಳಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು‌ ಎನ್ನಲಾಗಿದೆ. ‌ಆದರೆ ಇವರಿಬ್ಬರು ಬೈಕ್ ನಲ್ಲಿ ಸುತ್ತಾಡಿದ್ದನ್ನ ಕಂಡಿದ್ದ ಸಂಘಟನೆಯ ಯುವಕರು ಈ ಬಗ್ಗೆ ಅಲರ್ಟ್ ಆಗಿದ್ದರು. ಆದರೆ ಈ ಮಾಹಿತಿ ಯುವತಿಯ ಪೋಷಕರ ಗಮನಕ್ಕೆ ತಂದು ಇಂದು ಭಜರಂಗದಳದ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆಗೆ ಪೋಷಕರು ಜ್ಯುವೆಲ್ಲರಿ ಶಾಪ್ ಗೆ ಬಂದಿದ್ದಾರೆ. ಈ ವೇಳೆ ಪರಿಸ್ಥಿತಿ ಕೈ ಮೀರಿದ್ದು, ಪೊಲೀಸರ ಎದುರೇ ಭಜರಂಗದಳದ ಕಾರ್ಯಕರ್ತರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಯುವತಿ ಪೋಷಕರೂ ಆಕೆಗೆ ಥಳಿಸಿದ್ದಾರೆ‌ ಎನ್ನಲಾಗಿದೆ. ‌ಸದ್ಯ ಕದ್ರಿ ಪೊಲೀಸರು ಯುವತಿ, ಯುವಕ ಮತ್ತು ಪೋಷಕರನ್ನ ಠಾಣೆಗೆ ಕರೆ ತಂದು ವಿಚಾರಣೆ ನಡೆಸ್ತಿದಾರೆ. ಎರಡೂ ಕಡೆಯ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. 

ಇರಾನ್‌ನ ನೈತಿಕ ಪೊಲೀಸ್‌ ಪಡೆ ರದ್ದು

ನೈತಿಕ ಪೊಲೀಸ್ ಗಿರಿ ವೇಳೆ ಹಾಜರಿದ್ದ ಪುನೀತ್ ಅತ್ತಾವರ!
ಮೊನ್ನೆಯಷ್ಟೇ ನೈತಿಕ ಪೊಲೀಸ್ ಗಿರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಕ್ತಪಾತದ ಎಚ್ಚರಿಕೆ ನೀಡಿದ್ದ ಭಜರಂಗದಳ ಮಂಗಳೂರು ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಕೂಡ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ವೇಳೆ ಹಾಜರಿದ್ದ ಎನ್ನಲಾಗಿದೆ. ವೈರಲ್ ಆಗಿರೋ ಫೋಟೋಗಳಲ್ಲಿ ಪುನೀತ್ ಇರೋದು ಬಹಿರಂಗವಾಗಿದೆ.

ಇರಾನಿನಲ್ಲಿ ಹಿಜಾಬ್ ವಿರೋಧಿ ಹೋರಾಟ: ಏನಿದು 'ಗಷ್ಟ್- ಇ- ಎರ್ಷಾದ್' ನೈತಿಕ ಪಡೆ?

ಮಂಗಳೂರು ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ತನ್ನ ಫೇಸ್ ಬುಕ್ ಮತ್ತು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟರ್ ನಲ್ಲಿ ಎಚ್ಚರಿಕೆ ನೀಡಿದ್ದ. 'ಪದೇ ಪದೇ ಹೇಳಿತ್ತಿದ್ದೇವೆ, ಹಿಂದೂ ಹುಡುಗಿಯರ ಜೊತೆ ತಿರುಗಬೇಡಿ' 'ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ''ಲವ್ ಜಿಹಾದ್ ನಿಲ್ಲಿಸದೇ ಇದ್ದರೆ ನಿಮಗೆ ಮಯ್ಯತ್(ಮರಣ) ಶತಸಿದ್ದ' ಅಂತ ಎಚ್ಚರಿಕೆ ನೀಡಿದ್ದ. ಇದೀಗ ಸುಲ್ತಾನ್ ಜ್ಯುವೆಲ್ಲರಿ ನೈತಿಕ ಪೊಲೀಸ್ ಗಿರಿಯಲ್ಲೂ ಪುನೀತ್ ಮತ್ತು ತಂಡ ಇರೋದು ಗೊತ್ತಾಗಿದೆ.