ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಆಶಾ ಕಾರ್ಯಕರ್ತೆ
ಆತ್ಮಹತ್ಯೆಗೆ ಶರಣಾದ ಆಶಾ ಕಾರ್ಯಕರ್ತೆ| ಬೆಂಗಳೂರಿನ ಯಲಹಂಕದ ಮಾರುತಿನಗರ ಬಳಿ ನಡೆದ ಘಟನೆ| ಯಲಹಂಕದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಸವಿತಾ|
ಬೆಂಗಳೂರು(ಜು.03): ಜೀವನದಲ್ಲಿ ಜಿಗುಪ್ಸೆಗೊಂಡು ಆಶಾ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕದ ಮಾರುತಿನಗರ ಸಮೀಪ ನಡೆದಿದೆ.
ಮಾರುತಿನಗರದ ಪಾಪಯ್ಯ ಲೇಔಟ್ ನಿವಾಸಿ ಸವಿತಾ (32) ಮೃತ ದುರ್ದೈವಿ. ಮನೆಯಲ್ಲಿ ಸೋದರರು ಕೆಲಸಕ್ಕೆ ತೆರಳಿದ ಬಳಿಕ ಏಕಾಂಗಿಯಾಗಿದ್ದ ಬುಧವಾರ ಸವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಪಾವಗಡ ತಾಲೂಕಿನ ವೈಎನ್ಎಸ್ ಕೋಟೆಯ ಮೃತ ಸವಿತಾ ಅವರು, ಯಲಹಂಕದಲ್ಲಿ ಆಶಾ ಕಾರ್ಯಕರ್ತೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಪತಿಯಿಂದ ಪ್ರತ್ಯೇಕವಾದ ಸವಿತಾ, ನಂತರ ತಮ್ಮ ಸೋದರರ ಜತೆ ಮಗನೊಂದಿಗೆ ನೆಲೆಸಿದ್ದರು.
ಬೆಳಗಾವಿ: ಬರೀ ಹೆಣ್ಮಕ್ಕಳೇ ಜನಿಸಿದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ
ಕೊರೋನಾ ಸೋಂಕು ಶುರುವಾದ ಬಳಿಕ ಪುತ್ರನನ್ನು ವೈಎನ್ಎಸ್ ಕೋಟೆಗೆ ಕಳುಹಿಸಿದ ಅವರು, ಸೋಂಕಿನ ಭೀತಿಯಿಂದ ಕೆಲಸಕ್ಕೂ ಸಹ ಹೋಗದೆ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಸವಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.