ಕಳೆದ ಒಂದೂವರೆ ವರ್ಷದಿಂದ ಎಎಫ್‌ಟಿಸಿಯಲ್ಲಿ ತರಬೇತಿ ಪಡೆಯುತ್ತಿದ್ದ ಅಂಕಿತ್‌ ಕುಮಾರ್‌ 

ಬೆಂಗಳೂರು(ಸೆ.23): ವಾಯುಸೇನೆಯ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ದೆಹಲಿ ಮೂಲದ ಅಂಕಿತ್‌ ಕುಮಾರ್‌ ಝಾ (27) ಆತ್ಮಹತ್ಯೆಗೆ ಶರಣಾದವರು. ಜಾಲಹಳ್ಳಿಯ ನಗರದ ವಾಯುಸೇನೆ ತಾಂತ್ರಿಕ ಕಾಲೇಜಿನ(ಎಎಫ್‌ಟಿಸಿ) ಕ್ವಾಟ್ರರ್ಸ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸ್ನೇಹಿತರು ಕ್ವಾಟ್ರರ್ಸ್‌ಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಿತ್‌ ಕುಮಾರ್‌ ಕಳೆದ ಒಂದೂವರೆ ವರ್ಷದಿಂದ ಎಎಫ್‌ಟಿಸಿಯಲ್ಲಿ ತರಬೇತಿ ಪಡೆಯುತ್ತಿದ್ದರು. ತರಬೇತಿ ವೇಳೆ ಮಹಿಳಾ ಅಭ್ಯರ್ಥಿಯ ಜತೆಗೆ ಅನುಚಿತ ವರ್ತನೆ ತೋರಿದ್ದರು. ಈ ವಿಚಾರ ಎಎಫ್‌ಟಿಸಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆಗೆ ಆದೇಶಿಸಲಾಗಿತ್ತು. ಈ ತನಿಖಾ ವರದಿಯಲ್ಲಿ ಅಂಕಿತ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಹೀಗಾಗಿ ಬುಧವಾರ ಅಂಕಿತ್‌ ಕ್ವಾಟ್ರರ್ಸ್‌ ಖಾಲಿ ಮಾಡಿ ತೆರಳಬೇಕಿತ್ತು. ಆದರೆ, ಕ್ವಾಟ್ರರ್ಸ್‌ನಲ್ಲೇ ಅಂಕಿತ್‌ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಯಸಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ: 4 ವರ್ಷದ ಪ್ರೀತಿ ಜಗಳದಲ್ಲಿ ಅಂತ್ಯ?

ಘಟನಾ ಸ್ಥಳದಲ್ಲಿ ಸಿಕ್ಕಿರುವ ಮರಣಪತ್ರದಲ್ಲಿ ಸೇವೆಯಿಂದ ವಜಾಗೊಳಿಸಿದ್ದಕ್ಕೆ ಮನಸಿಗೆ ಬೇಸರವಾಗಿದೆ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಮೃತ ಅಂಕಿತ್‌ ಸಹೋದರ ಅಮನ್‌, ಅಂಕಿತ್‌ ಆತ್ಮಹತ್ಯೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಎಫ್‌ಟಿಸಿಯ ಆರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.