Asianet Suvarna News Asianet Suvarna News

ಬೆಂಗಳೂರು: ಸರ್ಕಾರದ ಅನುದಾನ ಕೊಡಿಸೋದಾಗಿ 18 ಎನ್‌ಜಿಒಗಳಿಗೆ ವಂಚಿಸಿದ್ದವನ ಸೆರೆ

ಗಿರಿನಗರದ ನಿವಾಸಿಯಾದ ಪ್ರತಾಪ್ ಸಿಂಹನನ್ನು ಬಂಧಿಸಿರುವ ಪೊಲೀಸರು ಆತನಿಂದ ನಗನಾಣ್ಯ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಮೋಸ ಕೃತ್ಯ ಸಂಬಂಧ ಹಲಸೂರು ಹಾಗೂ ಪೀಣ್ಯ ಠಾಣೆಗಳಲ್ಲಿ ಸಂತ್ರಸ್ತರು ದೂರು ನೀಡಿದ್ದರು.

Accused Arrested for who Fraud to 18 NGO's in the Name of Grants in Bengaluru grg
Author
First Published Dec 13, 2023, 4:30 AM IST

ಬೆಂಗಳೂರು(ಡಿ.13):  ಸರ್ಕಾರದ ಅನುದಾನ ಕೊಡಿಸುವುದಾಗಿ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಿಗೆ ಹಾಗೂ ತಮ್ಮ ಬೆಳೆಗಳಿಗೆ ಅಧಿಕ ಲಾಭಾಂಶ ಕೊಡಿಸುವುದಾಗಿ ಹೇಳಿ ರೈತರಿಗೆ ವಂಚಿಸಿದ್ದ ಪ್ರತಾಪ ಸಿಂಹ ಎಂಬಾತ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಗಿರಿನಗರದ ನಿವಾಸಿಯಾದ ಪ್ರತಾಪ್ ಸಿಂಹನನ್ನು ಬಂಧಿಸಿರುವ ಪೊಲೀಸರು ಆತನಿಂದ ನಗನಾಣ್ಯ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಮೋಸ ಕೃತ್ಯ ಸಂಬಂಧ ಹಲಸೂರು ಹಾಗೂ ಪೀಣ್ಯ ಠಾಣೆಗಳಲ್ಲಿ ಸಂತ್ರಸ್ತರು ದೂರು ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ನೇತೃತ್ವದ ತಂಡವು, ಕಳೆದ ಮೂರು ವರ್ಷಗಳಿಂದ ವಂಚನೆ ಕೃತ್ಯಗಳಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಡದಿ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್ ಮತ್ತೆರೆಡು ಕೃತ್ಯಗಳು ಬೆಳಕಿಗೆ!

ಓದಿದ್ದು 10ನೇ ಕ್ಲಾಸ್‌, ವಂಚನೆಯಲ್ಲಿ ಮಾಸ್ಟರ್‌ ಪೀಸ್‌:

ತನ್ನ ಕುಟುಂಬದ ಜತೆ ಗಿರಿನಗರದಲ್ಲಿ ನೆಲೆಸಿದ್ದ ಪ್ರತಾಪ್‌ ಸಿಂಹ, 10ನೇ ತರಗತಿಗೆ ಓದಿಗೆ ತಿಲಾಂಜಲಿ ಹಾಕಿದ್ದ. ಬೆವರು ಹರಿಸದೆ ಜನರಿಗೆ ನಾನಾ ರೀತಿ ಮಂಕೂಬೂದಿ ಎರಚಿ ಹಣ ಸಂಪಾದಿಸುವ ಮೋಸದ ಹಾದಿಯನ್ನು ಪ್ರತಾಪ್ ತುಳಿದಿದ್ದ. ಕಳೆದ 8-9 ವರ್ಷಗಳಿಂದ ನೂರಾರು ಜನರಿಗೆ ಮೋಸ ಮಾಡಿ ಹಣ ಗಳಿಸಿದ್ದಾನೆ ಎಂದು ಆಯುಕ್ತರು ವಿವರಿಸಿದ್ದಾರೆ.

ಎನ್‌ಜಿಒಗಳಿಗೆ ಖಾಸಗಿ ಕಂಪನಿಗಳಿಂದ ಸಿಎಸ್‌ಆರ್ ನಿಧಿಯಲ್ಲಿ ಆರ್ಥಿಕ ನೆರವು ಮತ್ತು ಪೆಟ್ರೋ ಕಂಪನಿಗಳಿಂದ ₹50 ಲಕ್ಷವರೆಗೆ ಅನುದಾನ, ಜನರಿಗೆ ದುಬಾರಿ ಮೌಲ್ಯದ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪನ್ನು ಕಡಿಮೆ ಬೆಲೆಗೆ ಹಾಗೂ ಎಳನೀರಿಗೆ ದುಬಾರಿ ಬೆಲೆ ಕೊಡಿಸುವುದಾಗಿ ಹೊರ ರಾಜ್ಯಗಳ ರೈತರಿಗೆ ಹೀಗೆ ವಿವಿಧ ಛೇದ್ಮ ವೇಷದಲ್ಲಿ ಜನರಿಗೆ ವಂಚಿಸಿ ಆರೋಪಿ ಹಣ ಗಳಿಸಿದ್ದ. ವಂಚನೆಯಲ್ಲಿ ನಿರತನಾಗಿದ್ದರೂ ಸಹ ಇದುವರೆಗೆ ಆರೋಪಿ ಜೈಲೂಟು ಸವಿದಿರಲಿಲ್ಲ. ಮೂರು ವರ್ಷಗಳಿಂದ ಪೊಲೀಸರಿಗೆ ಸಿಕ್ಕಿ ಬೀಳದೆ ಆತ ತಲೆಮರೆಸಿಕೊಂಡಿದ್ದ.

ಈ ವಂಚನೆ ಸಂಬಂಧ ಪೀಣ್ಯ ಠಾಣೆಯಲ್ಲಿ 18 ಎನ್‌ಜಒಗಳು ಹಾಗೂ ಲ್ಯಾಪ್‌ಟಾಪ್‌ ಬಗ್ಗೆ ಹಲಸೂರು ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದರು. ಅಲ್ಲದೆ ಆತನ ವಿರುದ್ಧ ಹಲವು ಚೆಕ್‌ ಬೌನ್ಸ್ ಪ್ರಕರಣಗಳು ಕೂಡಾ ನ್ಯಾಯಾಲಯದಲ್ಲಿ ದಾಖಲಾಗಿದ್ದವು. ಈ ಪ್ರಕರಣಗಳ ಬಗ್ಗೆ ಸಿಸಿಬಿಗೆ ತನಿಖೆಯನ್ನು ಆಯುಕ್ತರು ವಹಿಸಿದ್ದರು. ಅಂತೆಯೇ ತನಿಖೆಗಳಿದ ಸಿಸಿಬಿ ಪಿಐ ಶ್ರೀನಿವಾಸ್ ಅವರು, ತನಿಖೆ ಆರಂಭಿಸಿದ ಮೊದಲ ದಿನವೇ ಆರೋಪಿಯನ್ನು ಗಾಳಕ್ಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೆಡಿಟ್‌ ಕಾರ್ಡ್‌ ಕೊಡಿಸುತ್ತೇವೆಂದು ನಂಬಿಸಿ ವೃದ್ಧನಿಂದ ₹4.77 ಲಕ್ಷ ಸುಲಿದ ಖದೀಮರು!

ರಾಜಕಾರಣಿ ವೇಷದಲ್ಲಿ ಟೋಪಿ

ದೆಹಲಿಯ ಸ್ಥಳೀಯ ರಾಜಕೀಯ ಮುಖಂಡನೊಬ್ಬನನ್ನು ತಾನು ಬೆಂಗಳೂರಿನಲ್ಲಿ ದೊಡ್ಡ ರಾಜಕೀಯ ಪಕ್ಷದ ನಾಯಕ ಎಂದು ಹೇಳಿ ಪರಿಚಯಿಸಿಕೊಂಡಿದ್ದ. ಆತನ ಮೂಲಕ ದೆಹಲಿ, ಉತ್ತರಪ್ರದೇಶದ ಲಖನೌ, ಆಗ್ರಾ ಹಾಗೂ ಹಿಮಾಚಲ ಪ್ರದೇಶಗಳ ಎಳನೀರು ವ್ಯಾಪಾರಿಗಳು ಮತ್ತು ರೈತರನ್ನು ಪ್ರತಾಪ್ ಸಿಂಹ ಪರಿಚಯವಾಗಿದ್ದರು. ಆಗ ಆ ರೈತರು ಹಾಗೂ ವ್ಯಾಪಾರಿಗಳಿಗೆ ಬೆಂಗಳೂರಿನಲ್ಲಿ ಎಳನೀರಿಗೆ ಒಳ್ಳೆಯ ಬೆಲೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಟೋಪಿ ಹಾಕಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಲ್ಲಿ ಗೆಳತಿಗೆ ನಾಮ

ದೆಹಲಿಯಲ್ಲಿ ಒಂದು ವರ್ಷ ಬೀಡು ಬಿಟ್ಟಿದ್ದ ಪ್ರತಾಪ್‌ ಸಿಂಹ, ಅಲ್ಲಿ ಯುವತಿಯೊಬ್ಬಳನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡಿದ್ದ. ಆಕೆಗೆ ಮದುವೆ ಆಗುವುದಾಗಿ ನಂಬಿಸಿ ಆತ ₹6 ಲಕ್ಷ ಪಡೆದು ನಾಮ ಹಾಕಿದ್ದ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios