ವಿದ್ಯುತ್‌ ಪರಿವರ್ತಕದಲ್ಲಿ ಇರುವ (ಟಿಸಿ) ಬೆಲೆಬಾಳುವ ಕಾಪರ್‌ ವೈರ್‌, ಆಯಿಲ್‌ ಕದಿಯುವ ಅಂತಾರಾಜ್ಯ ಕಳ್ಳರನ್ನು ಪತ್ತೆ ಮಾಡಿದ ಕೊಪ್ಪಳ ಪೊಲೀಸರು, ಬರೋಬ್ಬರಿ .1.18 ಕೋಟಿ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ (ಆ.15) :  ವಿದ್ಯುತ್‌ ಪರಿವರ್ತಕದಲ್ಲಿ ಇರುವ (ಟಿಸಿ) ಬೆಲೆಬಾಳುವ ಕಾಪರ್‌ ವೈರ್‌, ಆಯಿಲ್‌ ಕದಿಯುವ ಅಂತಾರಾಜ್ಯ ಕಳ್ಳರನ್ನು ಪತ್ತೆ ಮಾಡಿದ ಕೊಪ್ಪಳ ಪೊಲೀಸರು, ಬರೋಬ್ಬರಿ .1.18 ಕೋಟಿ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಪರಬನಿಯ ಶೇಖ್‌ ಜಾಹೀರ್‌, ಮಾಲೋಜಿ ಬೋಸ್ಲೆ, ನಾನಾಸಾಹೇಬ ಬಂಧಿತ ಆರೋಪಿಗಳು. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಎಸ್ಪಿ ಯಶೋದಾ ವಂಟಿಗೋಡಿ, ತಮ್ಮ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದರು.

ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ಹಿರೇವಂಕಲಕುಂಟಾ ಸೀಮೆಯ ಪಂಪ್‌ಹೌಸ್‌ನಲ್ಲಿ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಕಾಪರ್‌ ವೈರ್‌, ಆಯಿಲ್‌ 2021ರ ಜೂನ್‌ 26ರಿಂದ 2023ರ ಆಗಸ್ಟ್‌ 8ರ ಮಧ್ಯದ ಅವಧಿಯಲ್ಲಿ ಕಳುವಾಗಿತ್ತು. ಪ್ರಕರಣ ತುಂಬ ಹಳೆಯದ್ದಾಗಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಪಂಪ್‌ಹೌಸ್‌ಗೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು. ಜೂನ್‌ 21ರಂದು ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚಲು ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ.

ಫೋನ್‌ ಕಳ್ಳತನದ ದೂರು ಕೊಡಲು ಹೋಗುವಾಗ ಬೈಕ್‌ ಕದ್ದ ಖದೀಮರು!

ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ, ಖದೀಮರ ಪತ್ತೆಗೆ ಎಸ್ಪಿ ಸೂಚಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸ್‌ ಪಡೆಯು ಮಹಾರಾಷ್ಟ್ರ, ತೆಲಂಗಾಣ ಸೇರಿ ಇತರೆ ರಾಜ್ಯಗಳಿಗೆ ತೆರಳಿ ಖದೀಮರು ಇರುವಿಕೆಯ ಕುರಿತು ಮಾಹಿತಿ ಸಂಗ್ರಹಿಸಿದರು. ಬಳಿಕ ಆರೋಪಿಗಳನ್ನು ತೆಲಂಗಾಣದಲ್ಲಿ ಬಂಧಿಸಿದ್ದಾರೆ.

ಈ ತಂಡ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದಲ್ಲಿ ಕಳ್ಳತನ ಮಾಡಿದ್ದಾರೆ. ವಿವಿಧ ಪ್ರಕರಣಗಳಲ್ಲಿ ತೊಡಗಿದ ಕುರಿತು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ .8 ಲಕ್ಷ ನಗದು, ಮೂರು ಕ್ವಿಂಟಲ್‌ ಕಾಪರ್‌ ವೈರ್‌, ಕಾರು, ಟ್ರಕ್‌ ಸೇರಿಂದತೆ ಅಂದಾಜು .1​.18 ಕೋಟಿ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದೆ.

ಮನೆಗಳ್ಳರ ಪಾಲಿಗೆ ಸ್ವರ್ಗ ಆಗ್ತಿದ್ಯಾ ಸಿಲಿಕಾನ್ ಸಿಟಿ ಬೆಂಗಳೂರು?

ಕಾರ್ಯಾಚರಣೆಯಲ್ಲಿ ಯಲಬುರ್ಗಾ ಸಿಪಿಐ ಮೌನೇಶ್ವರ ಪಾಟೀಲ್‌, ಸೈಬರ್‌ ಠಾಣೆಯ ಪಿಐ ಅಮರೇಶ ಹುಬ್ಬಳ್ಳಿ, ಮಹಿಳಾ ಠಾಣೆಯ ಆಂಜನೇಯ ಹಾಗೂ ಸಿಬ್ಬಂದಿಯ ಪಾಲ್ಗೊಂಡಿದ್ದರು.

ಡಿಎಸ್‌ಪಿ ಶರಣಬಸಪ್ಪ ಸುಬೇದಾರ್‌, ಸಿಪಿಐ ಮೌನೇಶ್ವರ ಪಾಟೀಲ್‌, ಅಮರೇಶ ಹುಬ್ಬಳ್ಳಿ ಇದ್ದರು.