* ಡಿಕೆ ಶಿವಕುಮಾರ್ ಆಪ್ತನ ಮನೆಯಲ್ಲಿ 70 ಕೋಟಿ ಅಕ್ರಮ ಅಸ್ತಿ ಪತ್ತೆ* ಯು.ಬಿ.ಶೆಟ್ಟಿಮನೆ ಮೇಲೆ ಇತ್ತೀಚೆಗೆ ನಡೆಸಿದ್ದ ಐಟಿ ದಾಳಿ* ಬೋಗಸ್‌ ಬಿಲ್‌, ಸುಳ್ಳು ದಾಖಲೆ, ಗೋಲ್‌ಮಾಲ್‌ ಪತ್ತೆ

 ಬೆಂಗಳೂರು, (ನ.03): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar)ಆಪ್ತ ಎನ್ನಲಾದ ಯು.ಬಿ.ಶೆಟ್ಟಿಮನೆ ಮೇಲೆ ನಡೆಸಿದ ಕಾರ್ಯಾಚರಣೆ ವೇಳೆ ಆದಾಯ ತೆರಿಗೆ ಇಲಾಖೆ (Income Tax Department) 70 ಕೋಟಿ ರು. ದಾಖಲೆಗಳಿಲ್ಲದ ಆದಾಯ ಪತ್ತೆ ಹಚ್ಚಿದೆ.

ಕಳೆದ ಅ.28ರಂದು ಯು.ಬಿ.ಶೆಟ್ಟಿಗೆ ಸೇರಿದ ಉಡುಪಿ, ಧಾರವಾಡದಲ್ಲಿನ *Dharwad) ಮನೆ, ಕಚೇರಿ ಸೇರಿದಂತೆ ಇತರೆ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಸಿವಿಲ್‌ ಗುತ್ತಿಗೆದಾರರಾಗಿರುವ ಯು.ಬಿ.ಶೆಟ್ಟಿಅವರ ಕಂಪನಿಯು ಬೋಗಲ್‌ ಬಿಲ್‌ ತಯಾರಿಸಿರುವುದು ಕಂಡು ಬಂದಿದೆ. ಸಾಮಗ್ರಿಗಳ ಖರೀದಿಯಲ್ಲಿ ಅಗತ್ಯ ಬೆಲೆಗಿಂತ ಹೆಚ್ಚಿನ ವೆಚ್ಚ ತೋರಿಸಲಾಗಿದೆ. 

IT Raid| ಐಟಿ ದಾಳಿಯಲ್ಲಿ ಗುತ್ತಿಗೆದಾರರ 750 ಕೋಟಿ ಅಕ್ರಮ ಆಸ್ತಿ ಪತ್ತೆ!

ಕಾರ್ಮಿಕರಿಗೆ ನೀಡಿರುವ ಕೂಲಿಯಲ್ಲಿಯೂ ವ್ಯತ್ಯಾಸ ಇದೆ. ಸುಳ್ಳು ದಾಖಲೆ ತೋರಿಸಿ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ. ಅಲ್ಲದೇ, ಉಪಗುತ್ತಿಗೆದಾರರಿಗೆ ನೀಡಿರುವ ಹಣ ಮತ್ತು ದಾಖಲೆಯಲ್ಲಿ ನಮೂದಾಗಿರುವ ಮೊತ್ತದಲ್ಲಿ ಸಾಕಷ್ಟುವ್ಯತ್ಯಾಸ ಕಂಡು ಬಂದಿದೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಎಲೆಕ್ಟ್ರಾನಿಕ್‌ ಉಪಕರಣಗಳು, ದಾಖಲೆಗಳು ಪತ್ತೆಯಾಗಿದೆ. ಡಿಜಿಟಲ್‌ ದಾಖಲೆಗಳು ಲಭ್ಯವಾಗಿದ್ದು, ಅದರಲ್ಲಿ ಹಣದ ವ್ಯವಹಾರದ ಕುರಿತು ನಿಖರವಾದ ಮಾಹಿತಿ ಇಲ್ಲ. ಉತ್ತರ ಕರ್ನಾಟಕದಲ್ಲಿ ನೀರಾವರಿಗೆ ಕೆಲವು ಯೋಜನೆಗಳ ವಹಿಸಿಕೊಂಡಿದ್ದು, ಈ ವೇಳೆ ಹಣ ಮಂಜೂರು ಮಾಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. 

ಉಪಗುತ್ತಿಗೆಯನ್ನು ಸಂಬಂಧಿಕರು, ಸ್ನೇಹಿತರು, ಉದ್ಯೋಗಿಗಳ ಹೆಸರಲ್ಲಿ ಪಡೆದುಕೊಳ್ಳಲಾಗಿದೆ. ಅವರಿಗೆ ಯಾವುದೇ ಕಾಮಗಾರಿ ಕೈಗೊಂಡಿರುವ ಅನುಭವ ಇಲ್ಲ ಮತ್ತು ಕೆಲಸ ಮಾಡಿಸುವ ಸಾಮರ್ಥ್ಯವೂ ಇಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಲಾಗಿದೆ.

ಬಿಎಸ್‌ವೈ ಪಿಎ ಬಳಿ 750 ಕೋಟಿ ಅಕ್ರಮ ಆಸ್ತಿ ಪತ್ತೆ!
ತೆರಿಗೆ ವಂಚನೆ ಆರೋಪದ ಮೇಲೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಆಪ್ತ ಸಹಾಯಕ ಎಂ.ಆರ್‌.ಉಮೇಶ್‌(MR Umesh) ಸೇರಿದಂತೆ ಪ್ರಮುಖ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ(Income tax Department) ನಡೆಸಿದ ದಾಳಿ ವೇಳೆ ಒಟ್ಟು 750 ಕೋಟಿ ರು.ಗಳಷ್ಟು ಬೃಹತ್‌ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿತ್ತು.

ಈ ಪೈಕಿ 487 ಕೋಟಿ ರು. ಅಘೋಷಿತ ಆಸ್ತಿಯಾಗಿದೆ. ವಂಚನೆ ಮಾಡಿರುವುದನ್ನು ಗುತ್ತಿಗೆದಾರರು(Contractors) ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು.

ಡಿಕೆಶಿ ಡಿಸೈನ್‌ ಬಾಕ್ಸ್‌ ಕಂಪನಿಗೆ ಐಟಿ ಶಾಕ್‌!
ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ್‌(DK Shivakumar) ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳ ಪ್ರಚಾರದ ಹೊಣೆ ಹೊತ್ತಿರುವ ಹಾಗೂ ಸಾಮಾಜಿಕ ಜಾಲತಾಣಗಳನ್ನು(Social Media) ನಿರ್ವಹಿಸುತ್ತಿರುವ ಡಿಸೈನ್‌ ಬಾಕ್ಸ್‌ ಕಂಪನಿಯ(Design Box Company) ಕಚೇರಿಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇರೆಗೆ ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು

(ಅ.13) ಬೆಳಗ್ಗೆಯಿಂದ ತಡರಾತ್ರಿವರೆಗೆ ಬೆಂಗಳೂರಿನ ಕಾವೇರಿ ಜಂಕ್ಷನ್‌(Cauvery Junction) ಬಳಿ ಇರುವ ಬಹುಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ಡಿಸೈನ್‌ ಬಾಕ್ಸ್‌ ಕಚೇರಿ, ಕಂಪನಿಯ ಮಾಲಿಕ ನರೇಶ್‌ ಅರೋರಾ(Naresh Arora) ವಾಸ್ತವ್ಯ ಹೂಡಿರುವ ಜೆ.ಡಬ್ಲ್ಯು.ಮ್ಯಾರಿಯೇಟ್‌ ಹೋಟೆಲ್‌ನಲ್ಲಿನ ಕೊಠಡಿಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು. 

ರಾಜಸ್ಥಾನ(Rajasthan), ಛತ್ತೀಸ್‌ಗಢ ರಾಜ್ಯದ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಡಿಸೈನ್‌ ಬಾಕ್ಸ್‌ ಅಭಿಯಾನ ನಡೆಸಿತ್ತು. ರಾಜಕಾರಣಿಗಳ ಬ್ರಾಂಡಿಂಗ್‌ ಸೇವೆಯನ್ನು ಸಹ ಈ ಕಂಪನಿ ಒದಗಿಸುತ್ತದೆ. ಕಂಪ​ನಿಯು ಎಲ್ಲಾ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷದ ಮುಖಂಡರ ಪರವಾಗಿ ತುಸು ಹೆಚ್ಚಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.