ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್ ಬೆಟ್ಟಿಂಗ್: ಏಳು ಜನರ ಬಂಧನ
ಮುಂಬೈ ಇಂಡಿಯನ್ ಮತ್ತು ಸನ್ರೈಸಸ್ ಹೈದ್ರಾಬಾದ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್| ಎರಡು ಪ್ರತ್ಯೇಕ ಬೆಟ್ಟಿಂಗ್ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ 2.66 ಲಕ್ಷ ವಶಪಡಿಸಿಕೊಂಡ ಪೊಲೀಸರು| ಆರೋಪಿತರ ಮೇಲೆ ಕಾನೂನು ಕ್ರಮ|
ಹುಬ್ಬಳ್ಳಿ(ನ.05): ಶಾರ್ಜಾದಲ್ಲಿ ನಡೆದ ಐಪಿಎಲ್ ಟೂರ್ನಿಯ ಲೀಗ್ ಟಿ- 20 ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ನಲ್ಲಿ ತೊಡಗಿದ್ದ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಇಂಡಿಯನ್ ಮತ್ತು ಸನ್ರೈಸಸ್ ಹೈದ್ರಾಬಾದ್ ನಡುವಿನ ಪಂದ್ಯದ ವೇಳೆ ಎರಡು ಪ್ರತ್ಯೇಕ ಬೆಟ್ಟಿಂಗ್ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ 2.66 ಲಕ್ಷ ವಶಪಡಿಸಿಕೊಂಡಿದ್ದಾರೆ. ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗಂಗಾ ಲೇಔಟ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಹಳೇ ಹುಬ್ಬಳ್ಳಿ ಪ್ರಶಾಂತ ಕಾಲನಿಯ ಪರಶುರಾಮ ಜಗನ್ನಾಥಸಾ ಲದವಾ, ಹುಬ್ಬಳ್ಳಿಯ ನಾಯಕ ಮಿಸ್ಕಿನ್ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ 1.30 ಲಕ್ಷ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಗೋಕುಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ.
ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹುಬ್ಬಳ್ಳಿ ಶಕ್ತಿ ಕಾಲನಿ ಜೆ.ಕೆ. ಸ್ಕೂಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1000ಗೆ 1000 ಕೊಡುವುದಾಗಿ ಹೇಳಿ ಮೊಬೈಲ್ ಪೋನ್ಗಳ ಮುಖಾಂತರ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಹುಬ್ಬಳ್ಳಿಯ ಆರೀಫ್ ರೆಹತುಮಲ್ಲಾ ಸಾತೇನಹಳ್ಳಿ, ವಿಶಾಲ ರಾಜುಸಾ ಬಾಂಡಗೆ ಅವರನ್ನು ಬಂಧಿಸಿ ಮೂರು ಮೊಬೈಲ್ ಹಾಗೂ 1,36,260 ನಗದು ವಶಕ್ಕೆ ತೆಗೆದುಕೊಂಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್: 21 ಲಕ್ಷ ಹಣ ವಶ, ಐವರ ಬಂಧನ
ಕೇಶ್ವಾಪುರ:
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮೂವರನ್ನು ಕೇಶ್ವಾಪೂರ ಪೊಲೀಸರು ಬಂಧಿಸಿ 1.34 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಜನತಾ ಕಾಲನಿ ಸರ್ಕಲ್ನಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರ್.ಸಿ. ಕಾಲನಿಯ ಶಿವರಾಮಕೃಷ್ಣ ನಾಚರಯ್ಯ, ರಾಜೇಂದ್ರ ಪ್ರಭುದಾಸ ಮತ್ತು ರಾಜರಾವ ಜೋಸೆಫ್ ಅವರನ್ನು ಬಂಧಿಸಲಾಗಿದೆ. ಎರಡು ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧಾರವಾಡದಲ್ಲಿ ನಾಲ್ವರ ಬಂಧನ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಸಕ್ರಿಯವಾಗಿದ್ದ ನಾಲ್ವರನ್ನು ಉಪನಗರ ಠಾಣೆ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಹೊಸ ಬಸ್ ನಿಲ್ದಾಣದ ಬಳಿ ದುಬೈನ ಶಾರ್ಜಾದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಾವಳಿ ಮೇಲೆ, ಮಾಳಾಪೂರದ ಲತೀಫ್ ತಂಬೋಲಿ ಹಾಗೂ ಗಾಂಧಿಚೌಕ್ ರಸೂಲಪೂರ ನಿವಾಸಿ ಇಜಾಜ್ ಅಹ್ಮದ್ ಮನಿಯಾರ ಎಂಬುವವರನ್ನು ಬಂಧಿಸಿ 15,100 ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇನ್ನು, ಹಳೇ ಡಿವೈಎಸ್ಪಿ ವೃತ್ತದ ಬಳಿ ಬೆಟ್ಟಿಂಗ್ನಲ್ಲಿ ತೊಡಗಿದ್ದ ಮಾಳಾಪುರದ ರಿಯಾಜಖಾನ್ ರೌಫಖಾನ್ ಹಾಗೂ ಅಲ್ಲಾಭಕ್ಷ ನವಲೂರ ಎಂವವರನ್ನು ಬಂಧಿಸಿ 25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸಿಪಿ ಅನುಶಾ ತಿಳಿಸಿದ್ದಾರೆ.