₹.99 ಸಾವಿರ ಕೋಟಿಗೆ ಸೂಪರ್‌ ಟ್ಯಾಕ್ಸ್‌ ಹೆಸರಲ್ಲಿ ಉದ್ಯಮಿಗೆ ₹40 ಲಕ್ಷ ಟೋಪಿ -ಟ್ಯಾಕ್ಸ್‌ ಕಟ್ಟಲು ಸಹಾಯ ಮಾಡಿದರೆ ಕಮಿಷನ್‌ ಕೊಡೋದಾಗಿ ಆಮಿಷ ಹೈದರಾಬಾದ್‌ನ ಉದ್ಯಮಿಗೆ ವಂಚನೆ, 10 ಮಂದಿ ವಿರುದ್ಧ ಪ್ರಕರಣ

ಬೆಂಗಳೂರು (ಫೆ.21) : ಬ್ಯಾಂಕ್‌ ಖಾತೆಗೆ ಜಮೆಯಾಗಿರುವ .99 ಸಾವಿರ ಕೋಟಿ ಡ್ರಾ ಮಾಡಲು ರಿಸವ್‌ರ್‍ ಬ್ಯಾಂಕ್‌ಗೆ ಸೂಪರ್‌ ತೆರಿಗೆ ಪಾವತಿಸಿದರೆ ದುಪ್ಪಟ್ಟು ಲಾಭ ಸಿಗಲಿದೆ ಎಂದು ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ .40 ಲಕ್ಷ ವಸೂಲಿ ಮಾಡಿ ದುಷ್ಕರ್ಮಿಗಳು ವಂಚಿಸಿದ್ದಾರೆ.

ತೆಲಂಗಾಣ(Telangana) ರಾಜ್ಯ ಹೈದರಾಬಾದ್‌(Hyderbad) ಮೂಲದ ಉದ್ಯಮಿ ಶೇಖರ್‌ ರೆಡ್ಡಿ(Shekhar reddy) ಹಣ ಕಳೆದುಕೊಂಡಿದ್ದು, ಈ ವಂಚನೆ ಸಂಬಂಧ ಅಶೋಕ್‌ಕುಮಾರ್‌, ಮಂಜುನಾಥ್‌, ರಮೇಶ್‌ ಕುಮಾರ್‌, ಗಂಗರಾಜ್‌, ವಿನೋದ್‌ ಕುಮಾರ್‌, ಶಂಕರ್‌, ನಾರಾಯಣ್‌, ರಾಜ್‌ಕುಮಾರ್‌, ಚಂದ್ರಶೇಖರ್‌ ಮತ್ತು ಮೂರ್ತಿ ಅಲಿಯಾಸ್‌ ಉಡಾಫೆ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಸಾವಿರಾರು ಕೋಟಿ ಹಣದಾಸೆ ತೋರಿಸಿ ರೆಡ್ಡಿಗೆ ಆರೋಪಿಗಳು ಟೋಪಿ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ

ದೆಹಲಿಗೆ ಕರೆದೊಯ್ದು ಟೋಪಿ:

2021ರ ಆಗಸ್ಟ್‌ 30ರಲ್ಲಿ ಸ್ನೇಹಿತರ ಮೂಲಕ ಉದ್ಯಮಿ ಶೇಖರ್‌ ರೆಡ್ಡಿಗೆ ಅಶೋಕ್‌ಕುಮಾರ್‌ ಪರಿಚಯವಾಗಿದೆ. ಆಗ ಆರ್‌ಬಿಐ ಕೆಲ ದಾಖಲೆ ಪತ್ರಗಳನ್ನು ಮೊಬೈಲ್‌ನಲ್ಲಿ ತೋರಿಸಿ ನನ್ನ ಸ್ನೇಹಿತ ಮಂಜುನಾಥ್‌ ಬ್ಯಾಂಕ್‌ ಖಾತೆಯಲ್ಲಿ .99 ಸಾವಿರ ಕೋಟಿ ಇದೆ. ಆದರೆ, ಅದನ್ನು ಬಳಕೆ ಮಾಡಲು ಆರ್‌ಬಿಐಗೆ ಸೂಪರ್‌ ಟ್ಯಾಕ್ಸ್‌ ಕಟ್ಟಬೇಕಾಗಿದೆ. ಅಷ್ಟೊಂದು ಹಣ ಸದ್ಯ ಇಲ್ಲ. ಸೂಪರ್‌ ಟ್ಯಾಕ್ಸ್‌(Super tax) ಪಾವತಿಗೆ ಸಹಾಯ ಮಾಡಿದರೆ ಆರ್‌ಬಿಐನಲ್ಲಿ ಡ್ರಾ ಮಾಡುವ ಹಣದಲ್ಲಿ ಕಮಿಷನ್‌ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಈ ಮಾತು ನಂಬಿದ ರೆಡ್ಡಿ ಅವರನ್ನು 2021ರ ಆಗಸ್ಟ್‌ 31ರಂದು ಉತ್ತರಹಳ್ಳಿ ಆನಘ ಹೋಟೆಲ್‌ನಲ್ಲಿ ಕರೆಸಿ ಅಶೋಕ್‌ ತಂಡ ಹಣ ವಸೂಲಿ ಮಾಡಿದೆ.

Jewelers Fraud: ನಕಲಿ ಚಿನ್ನಕೊಟ್ಟು ಬಂಗಾರದ ಅಂಗಡಿ ಮಾಲೀಕನಿಗೇ ಟೋಪಿ ಹಾಕಿದ ಅಜ್ಜಿಗ್ಯಾಂಗ್‌: 10 ಲಕ್ಷ ರೂ. ವಂಚನೆ

ಆನಂತರ ಅದೇ ದಿನ ರಾತ್ರಿ 8ಕ್ಕೆ ಶೇಖರ್‌ ರೆಡ್ಡಿಯನ್ನು ಕರೆದುಕೊಂಡು ವಿಮಾನದಲ್ಲಿ ದೆಹಲಿಗೆ ಆರೋಪಿಗಳು ತೆರಳಿದ್ದರು. ಅಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಪ್ರಯಾಣ ಹಾಗೂ ಹೋಟೆಲ್‌ ವಾಸ್ತವ್ಯದ ಖರ್ಚು ವೆಚ್ಚವನ್ನು ರೆಡ್ಡಿ ಭರಿಸಿದ್ದರು. ಕೊನೆಗೆ ಆರ್‌ಬಿಐಗೆ ತೆರಿಗೆ ಪಾವತಿ ಮಾಡಲು .25 ಲಕ್ಷ ಸಾಕಾಗುತ್ತಿಲ್ಲ. ಮತ್ತೆ ಹೆಚ್ಚುವರಿ .15 ಲಕ್ಷ ಬೇಕು ಎಂದು ಹೇಳಿ ವಸೂಲಿ ಮಾಡಿದ್ದಾರೆ. ಈ ಹಣ ಸಂದಾಯವಾದ ಬಳಿಕ ದೆಹಲಿಯಲ್ಲೇ ರೆಡ್ಡಿ ಅವರನ್ನು ಬಿಟ್ಟು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇದರಿಂದ ಗಾಬರಿಗೊಂಡ ಅವರು, ಆರೋಪಿಗಳನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.