ಹಣ ಕಟ್ಟುವಂತೆ ಸಿಬ್ಬಂದಿ ರತ್ನಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನನ್ನ ಪತ್ನಿ ಮಹಾಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆ ಪತಿ ಮಲ್ಲು ಕಿರುಗಾವಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಮಳವಳ್ಳಿ(ಸೆ.19): ಖಾಸಗಿ ಸಂಸ್ಥೆಯಲ್ಲಿ ಸಾಲ ಪಡೆದಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಲಿಯೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಮಲ್ಲು ಅವರ ಪತ್ನಿ ಮಹಾಲಕ್ಷ್ಮೀ(ಆರತಿ) (35) ಮಹಿಳೆ ಸಂಸ್ಥೆ ಸಿಬ್ಬಂದಿ ಮಾಡಿದ ಅವಮಾನದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾಲಕ್ಷ್ಮೀ ಅವರು ಕಳೆದ ಐದು ತಿಂಗಳ ಹಿಂದೆ ಖಾಸಗಿ ಸಂಸ್ಥೆಯಲ್ಲಿ 2 ಲಕ್ಷ ರು. ಸಾಲ ಪಡೆದಿದ್ದರು. ಪ್ರತಿ ಬುಧವಾರ 1700 ಕಂತು ಕಟ್ಟಬೇಕಿತ್ತು. ಬುಧವಾರ ಕಂತು ಕಟ್ಟಿಸಿಕೊಳ್ಳಲು ಸಂಸ್ಥೆಯ ನೆಲ್ಲಿಗೆರೆ ಪ್ರತಿನಿಧಿ ರತ್ನಮ್ಮ ಮಹಾಲಕ್ಷ್ಮೀ ಅವರ ಮನೆ ಬಳಿ ಬಂದಿದ್ದ ವೇಳೆ ಹಣ ಕಟ್ಟಲು ಸ್ವಲ್ಪ ಸಮಯದಲ್ಲಿ ನೀಡುವಂತೆ ಮನವಿ ಮಾಡಿದ್ದರು. ಆದರೆ, ಕೂಡಲೇ ಹಣ ಕಟ್ಟುವಂತೆ ಸಿಬ್ಬಂದಿ ರತ್ನಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನನ್ನ ಪತ್ನಿ ಮಹಾಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆ ಪತಿ ಮಲ್ಲು ಕಿರುಗಾವಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಬೆಂಗಳೂರು ಮೆಟ್ರೋ ಹಳಿಗೆ ಜಿಗಿದ ಬಿಹಾರದ ವ್ಯಕ್ತಿ: ಸಾಯಲು ಮೆಟ್ರೋ ಹಳಿಯೇ ಆರಿಸಿಕೊಳ್ಳುವುದೇಕೆ?

ಮೃತ ಮಹಿಳೆ ಶವವನ್ನು ಶವ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. 

ಅಧಿಕ ಬಡ್ಡಿ ಆರೋಪ: 

ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ಹಾಡ್ಲಿ ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಖಾಸಗಿ ಸಂಸ್ಥೆಗಳು ಅಧಿಕ ಬಡ್ಡಿ ಪಡೆಯುತ್ತಿವೆ. ಜನರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದ್ದರು. ಅವರ ಆರೋಪಕ್ಕೆ ಪುಷ್ಟಿ ನೀಡುವಂತೆ ಈ ಘಟನೆ ನಡೆದಿದೆ.