ಪೊಲೀಸರ ಥಳಿತದಿಂದ ಜೈಲಲ್ಲೇ ಸಾವು: ತಾಯಿ ಗಂಭೀರ ಆರೋಪ | ಮೊದಲೇ ಮಗುವಿಗೆ ಅನಾರೋಗ್ಯವಿತ್ತು, ಆಸ್ಪತ್ರೆಗೂ ದಾಖಲಿಸಿದ್ದೆವು: ಜೈಲರ್‌

ಕಲಬುರಗಿ(ಜ.03): ಗ್ರಾಪಂ ಚುನಾವಣೆ ವಿಜಯೋತ್ಸವ ವೇಳೆ ನಡೆದ ಘರ್ಷಣೆವೊಂದರ ಸಂಬಂಧ ಪೊಲೀಸರ ವಶದಲ್ಲಿದ್ದ 3 ವರ್ಷದ ಮಗುವೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ಶನಿವಾರ ನಡೆದಿದೆ.

Add Asianetnews Kannada as a Preferred SourcegooglePreferred

ಜೇವರ್ಗಿಯ ಜೈನಾಪುರದ ಸಂಗೀತಾ ಎಂಬುವರ ಪುತ್ರಿ ಭಾರತಿ ಮೃತ ಕಂದಮ್ಮ.

ಡಿ.30ರಂದು ಗ್ರಾಪಂ ಚುನಾವಣೆ ಫಲಿತಾಂಶ ಬಳಿಕ ಗೆದ್ದ ಅಭ್ಯರ್ಥಿ ರಾಜು ಸಾಯಬಣ್ಣಾ ಹಾಗೂ ಅವರ ಬೆಂಬಲಿಗರು ಜೈನಾಪುರದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಈ ವೇಳೆ ಸೋತ ಅಭ್ಯರ್ಥಿಯ ಕುಟುಂಬಸ್ಥರಾದ ಸಂತೋಷ್‌ ಎಂಬುವರ ಮನೆಮುಂದೆ ಮೆರವಣಿಗೆ ಆಗಮಿಸದ ವೇಳೆ, 2 ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಾಯಬಣ್ಣಾ, ಬೆಂಬಲಿಗರು ಸೋತೋಷ್‌ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

2100ಕ್ಕೂ ಇದೇ ಕ್ಯಾಲೆಂಡರ್‌! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ

ಘಟನೆ ಸಂಬಂಧ ದಾಖಲಾದ ದೂರಿನ ಆಧಾರದ ಮೇಲೆ 3 ಮಕ್ಕಳು ಸೇರಿದಂತೆ ಸಂತೋಷ್‌ ಕುಟುಂಬದ 11 ಮಂದಿಯನ್ನು ವಶಕ್ಕೆ ಪಡೆದ ಜೇವರ್ಗಿ ಪೊಲೀಸರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಡಿ.31ರಂದು ಇವರೆಲ್ಲರನ್ನು ಕಲಬುರಗಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಜ.1ರಂದು ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಜ.2ರಂದು ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಪೊಲೀಸರ ಥಳಿತಕ್ಕೆ ಒಳಗಾದ ಮಗು ಠಾಣೆಯಲ್ಲೇ ಸಾವನ್ನಪ್ಪಿತ್ತು. ಆದರೆ, ಮಗುವನ್ನು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದರು ಎಂದು ತಾಯಿ ಆರೋಪಿಸಿದ್ದಾರೆ. ಆರೋಗ್ಯ ವ್ಯತ್ಯಾಸವಾದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದು ಅಲ್ಲೇ ಸಾವನ್ನಪ್ಪಿದೆ ಎಂದು ಜೈಲರ್‌ ಸ್ಪಷ್ಟನೆ ನೀಡಿದ್ದಾರೆ.